ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳನ ಸೆರೆ

Spread the love

ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳನ ಸೆರೆ

ಮಂಗಳೂರು: ನಗರದ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳನನ್ನು ಬಂಧಿಸಿ ಸುಲಿಗೆ ಮಾಡಿದ ಚಿನ್ನಾಭರಣ ಹಾಗೂ ಸರಕಳ್ಳತನ ಮಾಡಲು ಉಪಯೋಗಿಸಿದ ಕಾರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಸಮಯ ಮಾರುತಿ ರಿಡ್ಜ್ ಕಾರಿನಲ್ಲಿ ಬಂದು ಸರಕಳ್ಳತನ ಮಾಡುವ ಆರೋಪಿಗಳು ಮಂಗಳೂರು ನಗರದ ವಾಮಂಜೂರು ಪರಿಸರದಲ್ಲಿದ್ದಾರೆಂಬ ಬಗ್ಗೆ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ಮಾರುತಿ ರಿಡ್ಜ್ ಕಾರನ್ನು ಬೆನ್ನಟ್ಟಿ ಹಿಡಿದು ಈ ಕಾರಿನಲ್ಲಿದ್ದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುರತ್ಕಲ್ ಕಾಟಿಪಳ್ಳ ನಿವಾಸಿ ಶಾಕೀಬ್ ಯಾನೆ ಸಬ್ಬು (25) ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನು ಚಲಾಯಿಸುತ್ತಿದ್ದ ಕೆಎ-19-ಎಂಎ-4807 ನೇ ಕಾರಿನಲ್ಲಿ ಆತನ ಸಹಚರರೊಂದಿಗೆ ಸರಕಳ್ಳತನ ಮಾಡಿರುವುದುದಾಗಿ ಒಪ್ಪಿಕೊಂಡಿರುವುದಲ್ಲದೇ ಮಂಗಳೂರು ನಗರ ಕಮೀಷನರೇಟ್ ಹಾಗೂ ಉಡುಪಿ ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕೆಳಕಂಡ ಸರಕಳ್ಳತನ ಪ್ರಕರಣಗಳಲ್ಲಿ ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಬಂಧಿತನ ವಿರುದ್ದ ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷನಗರ ಎಂಬಲ್ಲಿ ದಿನಾಂಕ: 16-08-2018 ರಂದು ಸಂಜೆ ಸುಮಾರು 7-30 ಗಂಟೆಗೆ ಮಾರುತಿ ರಿಡ್ಜ್ ಕಾರಿನಲ್ಲಿ ಯಶೋದ ಎಂಬವರ ಅಂಗಡಿಗೆ ಹೋಗಿ 10 ರೂಪಾಯಿಯ ನೆಲಕಡಲೆ ಕೇಳಿಕೊಂಡು ನಂತರ ಅವರು ನೆಲಕಡಲೆ ಕಟ್ಟುತ್ತಿದ್ದ ಸಮಯ ಅವರ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಸುಲಿಗೆ ಮಾಡಿದ ಪ್ರಕರಣ.( ಮೂಡಬಿದ್ರಿ ಪೊಲೀಸ್ ಠಾಣಾ ಮೊ.ನಂ: 298/2018 ಕಲಂ: 392 ಐಪಿಸಿ), ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರ್ವತ್ತೂರು ಎಂಬಲ್ಲಿ ದಿನಾಂಕ: 05-04-2018 ರಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕರಿಯಾ ಮೂಲ್ಯ ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣ.( ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 55/2018 ಕಲಂ: 392 ಐಪಿಸಿ)., ಉಡುಪಿ ಜಿಲ್ಲೆಯ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾರ್ ಖಾನ್ ಎಂಬಲ್ಲಿ ದಿನಾಂಕ: 15-07-2018 ರಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಲಿಸ್ ಕುಟಿನ್ಹೋ(72) ಎಂಬ ಮಹಿಳೆಯ ಎಂಬವರ ಕುತ್ತಿಗೆಯಿಂದ 2 ಚಿನ್ನದ ಸರಗಳನ್ನು ಸುಲಿಗೆ ಮಾಡಿದ ಪ್ರಕರಣ. ( ಉಡುಪಿ ಜಿಲ್ಲೆ ಶಿರ್ವಾ ಪೊಲೀಸ್ ಠಾಣಾ ಮೊ.ನಂ: 48/2018 ಕಲಂ: 392 ಐಪಿಸಿ)., ಉಡುಪಿ ಜಿಲ್ಲೆಯ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ಎಂಬಲ್ಲಿ ದಿನಾಂಕ: 29-08-2018 ರಂದು ಶ್ರೀಮತಿ ಗೀತಾ ಕಿಣಿ ಎಂಬವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣ.(ಉಡುಪಿ ಜಿಲ್ಲಾ ಕಾರ್ಕಳ ನಗರ ಪೊಲೀಸ್ ಠಾಣಾ ಮೊ.ನಂ: 143/2018 ಕಲಂ: 392 ಐಪಿಸಿ), ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರೆಂಜಾಳ ಮಾರಿಗುಡಿ ಎಂಬಲ್ಲಿ ದಿನಾಂಕ: 30-08-2018 ರಂದು ಶ್ರೀಮತಿ ಗೌರಿ ನಾಯಕ್ ಎಂಬವರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿದ ಪ್ರಕರಣ.( ಉಡುಪಿ ಜಿಲ್ಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 99/2018 ಕಲಂ: 392 ಐಪಿಸಿ) ದಾಖಲಾಗಿದೆ.

ಆರೋಪಿ ತನ್ನ ಸಹಚರರೊಂದಿಗೆ ಕಾರು ಹಾಗೂ ಬೈಕ್ ಗಳಲ್ಲಿ ಬಂದು ಅಮಾಯಕ ವಯಸ್ಕರ ಹಾಗೂ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಹಾಗೂ ಕರಿಮಣಿ ಸರಗಳನ್ನು ಸುಲಿಗೆ ಮಾಡಿದ್ದು, ಸುಲಿಗೆ ಮಾಡಿದ 140 ಗ್ರಾಂ ತೂಕದ ಒಟ್ಟು 5 ಚಿನ್ನದ ಸರ, ಒಂದು ಕರಿಮಣಿ ಸರ, 2 ಚಿನ್ನದ ಪೆಂಡೆಂಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 4,15,000/- ಆಗಿರುತ್ತದೆ. ಅಲ್ಲದೇ ಆರೋಪಿಯ ವಶದಿಂದ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಉಪಯೋಗಿಸಿದ ಮಾರುತಿ ರಿಡ್ಜ್ ಕಾರು, 2 ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 6,60,000/ ಆಗಿರುತ್ತದೆ.

ಆರೋಪಿ ಶಾಕಿಬ್ @ ಸಾಬು ಎಂಬಾತನ ಜೊತೆಯಲ್ಲಿ ಈ ಸರಕಳ್ಳತನ ಪ್ರಕರಣದಲ್ಲಿ ಇತರ ಆರೋಪಿಗಳು ಭಾಗಿಯಾಗಿದ್ದು, ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಆರೋಪಿ ಶಾಕಿಬ್ @ ಸಾಬು ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಕಳ್ಳತನಕ್ಕೆ ಸಂಬಂಧಪಟ್ಟಂತೆ 6 ಪ್ರಕರಣಗಳು, ಬಜ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವು ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಆಯುಕ್ತರಾದ ಟಿ. ಆರ್ ಸುರೇಶ್, ಐ.ಪಿ.ಎಸ್, ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಉಮಾ ಪ್ರಶಾಂತ್ (ಅಪರಾಧ & ಸಂಚಾರ) ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love