ಸುತ್ತಲೂ ಸಮುದ್ರವಿದ್ದರೂ ಇನ್ನೂ ಆರದ ಬೆಂಕಿ – ಸಿಂಗಾಪುರದ ಹಡಗು ಮುಳುಗುವ ಹಂತಕ್ಕೆ
ಮಂಗಳೂರು: ಸೋಮವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಸಿಂಗಾಪುರದ ವಾನ್ ಹೈ 503 ಕಂಟೇನರ್ ಹಡಗಿನಲ್ಲಿ ಬೆಂಕಿ ನಂದಿಸಲು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆ ಕೆಲಸ ಮಾಡುತ್ತಿವೆ. ಸುತ್ತಲೂ ಸಮುದ್ರ ಇದ್ದರೂ ಮಾತ್ರ ಹಡಗಿ ಬೆಂಕಿ ನಂದಿಸಲು ಇನ್ನೂ ಕಷ್ಟವಾಗುತ್ತಿದೆ. ಬೆಂಕಿಯುಗುಳುತ್ತಲೇ ಇರುವ ಹಡಗನ್ನು 48 ಗಂಟೆ ಕಳೆದರೂ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಇದರಿಂದ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.
ಕೊಲಂಬೊದಿಂದ ಮುಂಬೈನ ನವಾ ಶೇವಾ ಬಂದರಿಗೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಹೆಚ್ಚು ಸುಡುವ ವಸ್ತುಗಳ ಉಪಸ್ಥಿತಿಯು ಗಂಭೀರ ಕಳವಳವನ್ನು ಹುಟ್ಟುಹಾಕಿದೆ. ಎರಡು ವಾರಗಳ ಹಿಂದೆ ಕೇರಳ ಕರಾವಳಿಯಲ್ಲಿ ಇತ್ತೀಚೆಗೆ MSC ELSA-3 ಮುಳುಗಿದ ನಂತರ ಭಯವು ಹೆಚ್ಚಾಗಿದೆ, ಆದರೆ ಹಡಗಿನಲ್ಲಿರುವ ಅಪಾಯಕಾರಿ ಸರಕುಗಳ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ. ಅಪಾಯಕಾರಿ ಸರಕುಗಳ ಜೊತೆಗೆ, ಹಡಗಿನಲ್ಲಿ ಸುಮಾರು 2,000 ಟನ್ ಇಂಧನವಿದೆ ಎಂದು ಅಂದಾಜಿಸಲಾಗಿದೆ.
ಕ್ಷಣಕ್ಷಣಕ್ಕೂ ಸ್ಫೋಟಗೊಳ್ಳುತ್ತಿರುವ ಸಿಂಗಾಪುರದ ಎಂ.ವಿ. ವಾನ್ಹೇ 503 ಕೇರಳ-ಮಂಗಳೂರು ಕಡಲತೀರವನ್ನು ಆತಂಕಕ್ಕೆ ತಳ್ಳಿದೆ. ಈ ಮಧ್ಯೆ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿರುವ ಹಡಗಿನಲ್ಲಿ ಇನ್ನಷ್ಟು ಪ್ರಖರವಾಗಿ ಬೆಂಕಿ ಪಸರಿಸಲು ಬೇಕಾದ ಸಾಮಗ್ರಿಗಳಿರೋದು ಆತಂಕಕ್ಕೆ ಕಾರಣವಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ಹಡಗಿನಲ್ಲಿ ಪೆಟ್ರೋಲ್, ಡೀಸೆಲ್, ನೈಟ್ರೋ ಸೆಲ್ಯೂಲೋಸ್ ನಂತಹ ಕಂಟೇನರ್ಗಳು ಇರೋದೆ ಈ ಆತಂಕಕ್ಕೆ ಕಾರಣ. ಒಟ್ಟಾರೆ ಅದರಲ್ಲಿರುವ 600ಕ್ಕೂ ಅಧಿಕ ಕಂಟೇನರ್ಗಳಲ್ಲಿ 157 ಕಂಟೇನರ್ಗಳಲ್ಲಿ ಅಪಾಯಕಾರಿ ಐಟಂಗಳನ್ನು ಸಂಗ್ರಹಿಸಿಟ್ಟಿರುವುದು ದೃಢಪಟ್ಟಿದೆ. ಈಗಾಗಲೇ ಹಡಗಿನಲ್ಲಿದ್ದ 18 ಮಂದಿಯನ್ನು ಭಾರತೀಯ ನೌಕಾದಳ ರಕ್ಷಿಸಿ, ಮಂಗಳೂರಿಗೆ ಕರೆ ತಂದಿದೆ. ಉಳಿದಂತೆ ಕಣ್ಮರೆಯಾಗಿರುವ ನಾಲ್ವರಿಗಾಗಿ ಹುಡುಕಾಟ ಮುಂದುವರೆದಿದೆ. ಈ ನಡುವೆ ನೌಕಾದಳ ಬೆಂಕಿಯನ್ನು ನಿಯಂತ್ರಿಸಲು ಭಾರೀ ಸಾಹಸ ಪಡುತ್ತಿದೆ.
ಹಡಗಿನಲ್ಲಿದ್ದ ತಂಡದಲ್ಲಿ ಇಂಜಿನಿಯರ್ಗಳಿದ್ರೂ, ಇಂಜಿನ್ ವಿಭಾಗಗಳನ್ನು ಪರಿಶೀಲಿಸುತ್ತಿದ್ದರೂ ಇಂತಹ ಅವಘಡ ಸಂಭವಿಸಿರುವುದು ಆಶ್ಚರ್ಯ ಮೂಡಿಸಿದೆ. ಯಾವೊಂದು ಸಿಗ್ನಲ್ ಅನ್ನು ಕೂಡಾ ಹಡಗು ನೀಡಿರಲಿಲ್ಲವೇ ಎಂಬ ಪ್ರಶ್ನೆಗೂ ಸದ್ಯ ಉತ್ತರವಿಲ್ಲದಾಗಿದೆ.