ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ: ಕಾಂಗ್ರೆಸ್ ನ ಮುಸ್ಲಿಂ ಓಲೈಕೆ ನೀತಿ ಬಹಿರಂಗ – ಸುನಿಲ್ ಕುಮಾರ್
ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ತನ್ನ ಮುಸ್ಲಿಂ ಓಲೈಕೆ ನೀತಿಯನ್ನು ಬಹಿರಂಗವಾಗಿ ಪ್ರಕಟಗೊಳಿಸಿದೆ. 2022ರಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೆ ತಂದಿತ್ತು. ಈ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇರುವ ಸಂದರ್ಭದಲ್ಲೇ ಸರ್ಕಾರ ಆದೇಶವನ್ನು ವಾಪಾಸ್ ಪಡೆದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಸಂವಿಧಾನ ವಿರೋಧಿಯಷ್ಟೇ ಅಲ್ಲ, ನ್ಯಾಯಾಂಗ ನಿಂದನೆಯೂ ಹೌದು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ದಾವಣಗೆರೆ ಉಪ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಗೆ ಕೊಟ್ಟ ಕಪಾಳಮೋಕ್ಷದ ನೋವನ್ನು ಮರೆಯುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಈಗ ಒಂದಾದ ಮೇಲ್ಲೊಂದರಂತೆ ಮುಸ್ಲಿಂ ತುಷ್ಟೀಕರಣ ನಡೆಸುತ್ತಿದೆ. ಕಳೆದ ಬಾರಿ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಂ ಕಾಲೋನಿಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಕೊಡಲಾಗಿತ್ತು. ಅದರ ಬೆನ್ನಲ್ಲೇ ಈಗ ಹಿಜಾಬ್ ಗೆ ಅವಕಾಶ ನೀಡಲಾಗಿದೆ.
ತನ್ನ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವುದಕ್ಕಾಗಿ ದೇಶದ ಸಮಗ್ರತೆ ಹಾಗೂ ಸಂವಿಧಾನವನ್ನು ಒತ್ತೆ ಇಡುವುದಕ್ಕೆ ಹೇಸದ ಕಾಂಗ್ರೆಸಿರಿಗೆ ಈಗ ಮತ್ತೆ ಹಿಜಾಬ್ ಧ್ಯಾನ ಶುರುವಾಗಿದೆ. ಈ ಆದೇಶ ಎಷ್ಟು ಗೊಂದಲ ಗೂಡಾಗಿದೆಯೆಂದರೆ ಸಮವಸ್ತ್ರದ ಮೂಲ ಉದ್ದೇಶವನ್ನು ಬದಲಾಯಿಸಬಾರದು ಅಥವಾ ಹಾಳು ಮಾಡಬಾರದು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಹಿಜಾಬ್ ಧರಿಸಿದರೆ ಸಮವಸ್ತ್ರದ ಮೂಲ ಕಲ್ಪನೆಯೇ ವ್ಯತ್ಯಾಸವಾಗುತ್ತದೆ. ಒಟ್ಟಾರೆಯಾಗಿ ಈ ಸರ್ಕಾರಕ್ಕೊಂದು ಶೈಕ್ಷಣಿಕ ಧೋರಣೆಯೇ ಇಲ್ಲ. ಸಾಮಾಜಿಕ ಸಾಮರಸ್ಯವನ್ನು ಕದಡುವ ವಿಷ ಕಕ್ಕುವುದೇ ಸಿದ್ದರಾಮಯ್ಯ ಸರ್ಕಾರದ ಕಸುಬಾಗಿ ಬಿಟ್ಟಿದೆ. ಇಂಥ ಓಲೈಕೆ ರಾಜಕಾರಣದಿಂದ ದೇಶಾದ್ಯಂತ ” ಕಸ”ವಾಗಿರುವ ಕಾಂಗ್ರೆಸ್ ಸದ್ಯದಲ್ಲಿ ರಾಜ್ಯದಲ್ಲೂ ಮೂಲೆಗೆ ಸೇರುವ ದಿನಗಣನೆ ಈ ಆದೇಶದೊಂದಿಗೆ ಪ್ರಾರಂಭವಾಗಿದೆ. ಅತಿಯಾದ ಓಲೈಕೆ ಮಾಡಿದಕ್ಕಾಗಿ ಪಶ್ಚಿಮ ಬಂಗಾಲ ಹಾಗೂ ಇತರೆ ರಾಜ್ಯಗಳಲ್ಲಿ ಕತೆ ಏನಾಗಿದೆ ಎಂಬುದನ್ನು ಕಾಂಗ್ರೆಸ್ ಮರೆಯದಿರಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













