‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ : ಪ್ರಶಾಂತ್ ಜತ್ತನ್ನ

Spread the love

‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ನಡೆಸಲು ಹೈಕೋರ್ಟ್ ಅನುಮತಿ : ಪ್ರಶಾಂತ್ ಜತ್ತನ್ನ

ಉಡುಪಿ: ಘನ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ಕಾರ್ಯಕ್ರಮ ನಡೆಸಲು ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿದೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಇದರ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ.

ಮೂರು ದಿನಗಳ ಸಮಾಧಾನ ಮಹೋತ್ಸವ ಕಾರ್ಯಕ್ರಮವನ್ನು ಫೆಲೋಶಿಪ್ ಓಫ್ ಉಡುಪಿ ಚರ್ಚಸ್ ಇದರ ವತಿಯಿಂದ ಆಯೋಜಿಸಲು ನಿರ್ಧರಿಸಲಾಗಿದ್ದು, ಸುಮಾರು ಐದಾರು ತಿಂಗಳುಗಳಿಂದ ಇದಕ್ಕಾಗಿ ಸಂಪೂರ್ಣ ತಯಾರಿಯನ್ನು ಕೂಡ ನಡೆಸಲಾಗಿದೆ. ಇದರಲ್ಲಿ ಮುಖ್ಯ ಪ್ರವಚನಕಾರರಾಗಿ ಘನ ಮೋಹನ್ ಸಿ.ಲಾಝರಸ್ ಅವರು ಆಗಮಿಸಲಿದ್ದಾರೆ. ಅವರು ಉಡುಪಿಗೆ ಈ ಹಿಂದೆ ಕೂಡ ಎರಡು ಬಾರಿ ಪ್ರವಚನಕಾರರಾಗಿ ಆಗಮಿಸಿದ್ದಾರೆ.

ಕ್ರೈಸ್ತ ಬಾಂಧವರಿಗೆ ಪ್ರಸ್ತುತ ತಪಸ್ಸು ಕಾಲವಾಗಿದ್ದು ಈ ಸಂದರ್ಭದಲ್ಲಿ ಬಹಳಷ್ಟು ಭಕ್ತಿ ಸಂಜೀವನ ಕೂಟಗಳನ್ನು ಆಯೋಜಿಸಲಾಗುತ್ತದೆ. ಅದೇ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಧಿಕಾರಿಗಳಿಗೆ ಕೂಡ 20 ದಿನಗಳ ಮೊದಲೇ ಮಾಹಿತಿ ನೀಡಲಾಗಿತ್ತು. ಆದರೆ ಕೆಲವೊಂದು ಸಂಘಟನೆಗಳು ಬಂದು ಸಮಾಧಾನ ಮಹೋತ್ಸವ ಮಾಡಲು ಬಿಡುವುದಿಲ್ಲ ಎಂಬ ಬೆದರಿಕೆಯ ಮಾತುಗಳನ್ನು ಮಾಧ್ಯಮದ ಮೂಲಕ ನೀಡಿದ್ದರು. ಈ ಕುರಿತು ಪೊಲೀಸ್ ಇಲಾಖೆಯವರನ್ನು ಸಂಪರ್ಕಿಸಿದಾಗಿ ಸಂದೇಶ ನೀಡುವ ವ್ಯಕ್ತಿಯನ್ನು ಬದಲಾಯಿಸಲು ಪೊಲೀಸರು ಮನವಿ ಮಾಡಿದ್ದರು.

ಆದರೆ ಈಗಾಗಲೇ ಪೂರ್ಣ ತಯಾರಿ ಆಗಿದ್ದು ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಸಂಘಟಕರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು ವಾದ ವಿವಾದಗಳನ್ನು ಆಲಿಸಿ ಕೊನೆಗೆ ಕಾರ್ಯಕ್ರಮವನ್ನು ನಡೆಸಲು ನ್ಯಾಯಾಲಯ ಪರವಾನಿಗೆಯನ್ನು ನೀಡಿದೆ. ಈ ಮೂಲಕ ನ್ಯಾಯಾಲಯ ನಮ್ಮ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿದು ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದೆ. ನ್ಯಾಯಾಲಯದ ಆದೇಶದಂತೆ ಈಗಾಗಲೇ ತಯಾರಿ ಕೊನೆಯಹಂತದಲ್ಲಿದ್ದು ಕಾರ್ಯಕ್ರಮ ಯಶಸ್ವಿಯಾಗಿ ಜರುಗಲಿದೆ. ಸಾರ್ವಜನಿಕ ಕ್ರೈಸ್ತ ಬಂಧುಗಳು ಗಾಳಿಸುದ್ದಿಗೆ ಕಿವಿಗೊಡದೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಶಾಂತ್ ಜತ್ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments