ಯಾವುದೇ ಸ್ಥಾನಮಾನ ಕೇಳಿಲ್ಲ, ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಿಭಾಯಿಸುವೆ: ಯು.ಟಿ. ಖಾದರ್

Spread the love

ಯಾವುದೇ ಸ್ಥಾನಮಾನ ಕೇಳಿಲ್ಲ, ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಿಭಾಯಿಸುವೆ: ಯು.ಟಿ. ಖಾದರ್

ಮಂಗಳೂರು: ಸದ್ಯ ನಾನು ರಾಜ್ಯ ವಿಧಾನಸಭೆಯ ಅಧ್ಯಕ್ಷನಾಗಿದ್ದೇನೆ. ನೂತನ ಸಂಪುಟಕ್ಕೆ ಸಂಬಂಧಿಸಿ ನಾನು ಯಾವುದೇ ಸ್ಥಾನಮಾನ ಕೇಳಿಲ್ಲ, ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ಅದನ್ನು ನಿಭಾಯಿಸುವೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಖಾದರ್ ಸಾಮಾಜಿಕ ಜಾಲತಾಣಗಳನ್ನು ಗಮನಿಸಿ ಯಾರೂ ಅಧಿಕಾರ ನೀಡುವುದಿಲ್ಲ. ನಮ್ಮ ಕೆಲಸ ಕಾರ್ಯ ನೋಡಿ ಜವಾಬ್ದಾರಿ ವಹಿಸುತ್ತಾರೆ. ನನಗೆ ಯಾವ ಸ್ಥಾನಮಾನ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ಉಪಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರು ಹರಿದಾಡಿದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ನನಗೆ ಆ ವಿಚಾರ ಗೊತ್ತಿಲ್ಲ. ಸರಕಾರ ಸೂಚಿಸಿದಾಗ ವಿಧಾನಸಭಾ ಅಧಿವೇಶನಕ್ಕೆ ಏರ್ಪಾಟು ಮಾಡುವೆ. ಸಚಿವನಾಗಿ ಕಾರ್ಯನಿರ್ವಹಿಸು ಅಂದರೆ ಅದನ್ನು ಪಾಲಿಸುವೆ. ಉಪ ಮುಖ್ಯಮಂತ್ರಿ ಜವಾಬ್ದಾರಿ ನಿಭಾಯಿಸು ಅಂದರೆ ಅದನ್ನೂ ಮಾಡುವೆ. ಎಲ್ಲವನ್ನೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಅದಕ್ಕೆ ಬದ್ಧನಾಗಿರುವೆ ಎಂದರು.

ನಾನು ಶಾಸಕನಾಗಿದ್ದಾಗ ಸದನವೀರ ಪ್ರಶಸ್ತಿ ಬಂತು. ಆರೋಗ್ಯ ಸಚಿವನಾಗಿದ್ದಾಗ ರಾಷ್ಟ್ರೀಯ ಪ್ರಶಸ್ತಿ ಬಂತು. ನಗರಾಭಿವೃದ್ಧಿ ಹಾಗೂ ವಸತಿ ಸಚಿವನಾಗಿ ಮಾಡಿದ ಸಾಧನೆ ನೋಡಿ ನನ್ನನ್ನು ಸದನದ ಉಪನಾಯಕನನ್ನಾಗಿ ನೇಮಿಸಿತು. ಅದರ ನಿರ್ವಹಣೆ ನೋಡಿ ನನ್ನನ್ನು ವಿಧಾನ ಸಭಾಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಯಿತು. ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಸ್ಪೀಕರ್ ಸ್ಥಾನದಲ್ಲಿ ಕುಳಿತ ಬಳಿಕ ಪಕ್ಷಾತೀತನಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್ ಈ ಹಿಂದೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯಲ್ಲಿ ವಿಡಿಯೊ ಗೇಮ್, ಸ್ಕಿಲ್ ಗೇಮ್, ಹುಕ್ಕಾಬಾರ್ ನಿಷೇಧಿಸಿ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿಸಿದ್ದೆ. ಸ್ಯಾಂಡ್ ಬಜಾರ್ ಆ್ಯಪ್ ಜಾರಿಗೊಳಿಸಿದ್ದೆ ಎಂದು ನುಡಿದರು.

ನನಗೆ ಕ್ಷೇತ್ರದ ಜನರು ಮುಖ್ಯ. ಜಾತಿ ಹಾಗೂ ಧರ್ಮ ಒಂದು ಗೌರವ ಮಾತ್ರ. ಯಾವುದೇ ಸ್ಥಾನವನ್ನು ಅಲಂಕರಿಸಿದರೂ ಪಕ್ಷದ ತತ್ವ ಸಿದ್ಧಾಂತದಡಿ ಕೆಲಸ ಮಾಡಬೇಕು. ದೇಶದ ಸಂವಿಧಾನದ ವ್ಯಾಪ್ತಿಯಲ್ಲಿ ಕೆಲಸ ಮಾಡುವುದು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವಾಗಿದೆ ಎಂದು ಖಾದರ್ ಹೇಳಿದರು.


Spread the love
Subscribe
Notify of

0 Comments