ಸ್ಪೀಕರ್ ಆದರೆ ವೇದಿಕೆ ಮೇಲೆ, ಮಂತ್ರಿಯಾದರೆ ಕೆಳಗೆ ಇರುತ್ತೇನೆ : ಯು.ಟಿ. ಖಾದರ್

Spread the love

ಸ್ಪೀಕರ್ ಆದರೆ ವೇದಿಕೆ ಮೇಲೆ, ಮಂತ್ರಿಯಾದರೆ ಕೆಳಗೆ ಇರುತ್ತೇನೆ : ಯು.ಟಿ. ಖಾದರ್

ಮಂಗಳೂರು: ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಕಾಗದ ರಹಿತ (ಪೇಪರ್‌ಲೆಸ್) ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಷನ್’ (NeVA) ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪ್ರಕಟಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಆರು ತಿಂಗಳಲ್ಲಿ ಈ ಡಿಜಿಟಲ್ ಬದಲಾವಣೆ ಪೂರ್ಣಗೊಳ್ಳಲಿದೆ ಎಂದರು.

ವಿಧಾನಮಂಡಲದ ಡಿಜಿಟಲೀಕರಣ ಯೋಜನೆ ಸದ್ಯ ಡಿಪಿಆರ್ (ವಿವರವಾದ ಯೋಜನೆ ವರದಿ) ಹಂತದಲ್ಲಿದೆ. ಇದು ಜಾರಿಗೆ ಬಂದ ಬಳಿಕ ಉಭಯ ಸದನಗಳ ಶಾಸಕರಿಗೆ ವಿಶೇಷ ತರಬೇತಿ ನೀಡಲಾಗುವುದು.

ಬೆಂಗಳೂರಿನ ವಿಧಾನಸೌಧ ಹಾಗೂ ಬೆಳಗಾವಿಯ ಸುವರ್ಣ ಸೌಧಕ್ಕೆ ಒಟ್ಟು 78 ಕೋ.ರೂ. ವೆಚ್ಚ. ಹಾಗೆಯೇ ವಿಧಾನ ಪರಿಷತ್ ಬೆಂಗಳೂರು ಹಾಗೂ ಬೆಳಗಾವಿ ಸದನಗಳಿಗೆ ಒಟ್ಟು 52 ಕೋ.ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ.

ವಿಧಾನಮಂಡಲದ ಐಟಿ ವಿಭಾಗದ ಮೂಲಕ ಶಾಸಕರ ಹಾಜರಾತಿಯನ್ನು ಸಂಪೂರ್ಣ ಡಿಜಿಟಲ್ ಮಾಡಲು ತೀರ್ಮಾನಿಸಲಾಗಿದೆ. ಶಾಸಕರು ಸದನದಲ್ಲಿ ತಮ್ಮ ತಮ್ಮ ಕುರ್ಚಿಗಳಲ್ಲಿ ಕುಳಿತುಕೊಂಡೇ ಡಿಜಿಟಲ್ ವ್ಯವಸ್ಥೆ ಮೂಲಕ ಹಾಜರಾತಿ ದಾಖಲಿಸಲು ಹೊಸ ತಂತ್ರಜ್ಞಾನ ನೆರವಾಗಲಿದೆ.

ವಿಧಾನಸೌಧಕ್ಕೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಮಹಡಿಯಲ್ಲೂ ಅತ್ಯಾಧುನಿಕ ‘ಕಿಯಾಸ್ಕ್’ (ಮಾಹಿತಿ ಪರದೆ) ಅಳವಡಿಸಲಾಗುವುದು. ಯಾವ ಕೊಠಡಿಯಲ್ಲಿ ಯಾವ ಸಚಿವರು ಲಭ್ಯವಿದ್ದಾರೆ, ಸಚಿವರ ಕಚೇರಿ ಎಲ್ಲಿದೆ ಎನ್ನುವ ನಿಖರ ಮಾಹಿತಿ ಈ ಕಿಯಾಸ್ಕ್ ಮೂಲಕ ಜನರಿಗೆ ಸಿಗಲಿದೆ ಎಂದು ಸ್ಪೀಕರ್ ವಿವರಿಸಿದರು.

ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆ ಹಾಗೂ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದ ಕುರಿತಾದ ಊಹಾಪೋಹಗಳಿಗೆ ಉತ್ತರಿಸಿದ ಯು.ಟಿ. ಖಾದರ್, ತಮ್ಮ ಭವಿಷ್ಯದ ರಾಜಕೀಯ ನಡೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.

ಮುಂದಿನ ಸಿಎಂ ಪ್ರಮಾಣ ವಚನ ಸಂದರ್ಭದಲ್ಲಿ ನಾನು ವೇದಿಕೆಯ ಮೇಲೆ ಇರುತ್ತೇನಾ ಅಥವಾ ಕೆಳಗೆ ಇರುತ್ತೇನಾ ಎನ್ನುವುದು ನನಗೇ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಆಗಿ ಮುಂದುವರಿದರೆ ಶಿಷ್ಟಾಚಾರದ ಪ್ರಕಾರ ವೇದಿಕೆಯ ಮೇಲೆ ಇರುತ್ತೇನೆ. ಸಚಿವ ಸ್ಥಾನ ಸಿಗುವುದಾದರೆ ಕೆಳಗೆ ಮುಂದಿನ ಸಾಲಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ಇರುತ್ತೇನೆ. ಕೇವಲ ಶಾಸಕನಾಗಿದ್ದರೆ ಪ್ರೊಟೊಕಾಲ್ ಎಲ್ಲಿದೆಯೋ ಅಲ್ಲಿರುತ್ತೇನೆ” ಎಂದು ಚಮತ್ಕಾರವಾಗಿ ಉತ್ತರಿಸಿದರು.


Spread the love
Subscribe
Notify of

0 Comments