ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

Spread the love

ಪಾಸ್ಟಿಕ್, ಪತ್ರಿಕೆಯಲ್ಲಿ ಹೋಟೆಲ್ ಬಿಸಿ ಆಹಾರ ಪಾರ್ಸೆಲ್ ನಿಷೇಧಕ್ಕೆ ಸೂಚನೆ

  • ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವನೆ, ಗುಟ್ಕಾ ಉಗಿದರೆ ರೂ. 1000 ದಂಡ

ಮಂಗಳೂರು: ಹೋಟೆಲ್, ಕ್ಯಾಂಟೀನ್, ಕೆಫೆಗಳಲ್ಲಿ ಪ್ಲಾಸ್ಟಿಕ್ ಕವರ್, ಪತ್ರಿಕೆಗಳಲ್ಲಿ ಬಿಸಿ ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡುವುದನ್ನು ನಿಷೇಧಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ಲಾಸ್ಟಿಕ್‍ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ಬಿಸಿ ಆಹಾರಕ್ಕೆ ಸೇರಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ಹೋಟೆಲ್, ಕ್ಯಾಂಟೀನ್‍ಗಳಿಂದ ಹೆಚ್ಚಾಗಿ ಕಾರ್ಮಿಕರು ಅಥವಾ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬಿಸಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್‍ಗಳಲ್ಲಿ ಬಿಸಿ ಆಹಾರ ಪದಾರ್ಥಕ್ಕೆ ಪ್ಲಾಸ್ಟಿಕ್ ಬಳಕೆ ಕಡ್ಡಾಯವಾಗಿ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ತಂಬಾಕು ಸೇವನೆ ನಿಷೇಧ, ಎಚ್ಚರಿಕೆಯ ಫಲಕ ಇಲ್ಲದೆ ಇರುವುದು, ಅಂಗಡಿ, ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರ್ ಲೈಟರ್, ಬೆಂಕಿ ಪೊಟ್ಟಣಗಳನ್ನು ಇಟ್ಟರೆ ಅವರಿಗೆ ದಂಡÀ ವಿಧಿಸಬೇಕು. ತಂಬಾಕು ಬ್ರಾಂಡ್ ಹೆಸರಿನೊಂದಿಗೆ ಜಾಹಿರಾತು ಫಲಕಗಳು ಅಥವಾ ಯಾವುದೇ ರೀತಿಯಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, 21 ವರ್ಷದೊಳಗಿನವರಿಗೆ ತಂಬಾಕು ಮಾರಾಟ ಮಾಡಿದರೆ, ಚಿಲ್ಲರೆ ಅಂಗಡಿಗಳಲ್ಲಿ ಸಿಗರೇಟ್, ತಂಬಾಕು ಉತ್ಪನ್ನಗಳ ಪ್ರದರ್ಶನ ಮಾಡಿದರೆ ದಂಡ ವಿಧಿಸಲು ಅಪರ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಾಲಾ ಕಾಲೇಜುಗಳ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ಮಾಡುವವರ ಬಗ್ಗೆ ಶಾಲಾ-ಕಾಲೇಜುಗಳ ಮುಖ್ಯಸ್ಥರು ನಿಗಾವಹಿಸಬೇಕು. ಅಂತಹ ಅಂಗಡಿಗಳ ಪಟ್ಟಿಯನ್ನು ತಮ್ಮ ವ್ಯಾಪಿಯಲ್ಲಿರುವ ಸ್ಥಳಿಯಾಡಳಿತಕ್ಕೆ ಮತ್ತು ಪೆÇಲೀಸ್ ಠಾಣೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಪೋಲಿಸ್ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಜಿಲ್ಲೆಯಲ್ಲಿ ತಂಬಾಕು ಮಾರಾಟ ಮತ್ತು ಸೇವನೆಯನ್ನು ನಿಯಂತ್ರಿಸಬಹುದು ಎಂದು ರಾಜು ಕೆ. ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ 100 ಮೀಟರ್ ಅಂತರದೊಳಗೆ ತಂಬಾಕು ಮಾರಾಟ ನಿಷೇಧ ಬೋರ್ಡ್ ಕಡ್ಡಾಯವಾಗಿ ಹಾಕಬೇಕು ಮತ್ತು ತಂಬಾಕು ಉತ್ಪನ್ನಗಳನ್ನು ಬಳಸದಂತೆ ಸೂಕ್ತ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ತಂಬಾಕಿಗೆ ಸಂಬಂಧಿಸಿದಂತೆ ಜಾಹೀರಾತು ಫಲಕಗಳು ಕಂಡು ಬಂದಿದ್ದು, ತಂಬಾಕು ನಿಯಂತ್ರಣ ಕಾಯ್ದೆ ಪ್ರಕಾರ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು. ತಂಬಾಕಿನ ಅಪಾಯಕ್ಕೆ ಸಿಲುಕುವ ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ಪೌರ ಕಾರ್ಮಿಕರು ಇರುವ ಸ್ಥಳಕ್ಕೆ ಹೋಗಿ ತಂಬಾಕಿನ ದುಷ್ಪÀರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವಿಸಿದವರಿಗೆ ಮತ್ತು ಗುಟ್ಕಾ ಜಗಿದು ಉಗಿಯುವವರಿಗೆ 1000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಅಂಗಡಿಗಳಲ್ಲಿ ಚಿಲ್ಲರೆ ಸಿಗರೇಟ್ ಮಾರಾಟ ಮಾಡಲು ಅವಕಾಶವಿಲ್ಲ. ಇದನ್ನು ಉಲ್ಲಂಘಿಸಿದ ಅಂಗಡಿಗಳಿಗೂ ದಂಡ ವಿಧಿಸಲಾಗುವುದು. ಕೋಟ್ಪಾ ಕಾರ್ಯಾಚರಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 2,587 ಪ್ರಕರಣ ದಾಖಲಾಗಿದ್ದು, ರೂ 3.89 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ತಂಬಾಕಿಗೆ ಸಂಬಂಧಿಸಿದಂತೆ ಸುಮಾರು 52 ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ತಂಬಾಕು ಉತ್ಪನ್ನ ಪ್ಯಾಕ್‍ನಲ್ಲಿ ಆರೋಗ್ಯ ಎಚ್ಚರಿಕೆಯ ಚಿತ್ರಗಳು ಶೇ.85 ಕ್ಕಿಂತ ಕಡಿಮೆ ಅಳತೆಯಲ್ಲಿದ್ದರೆ ಮತ್ತು ಹಳೆಯದಾದ ಎಚ್ಚರಿಕೆಯ ಚಿತ್ರಗಳನ್ನು ಹಾಕಿದರೆ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‍ಚಂದ್ರ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments