ಫೆ.22ರಿಂದ ರಂಗಹಬ್ಬ–14: ಸುಮನಸಾ ಕೊಡವೂರು ನಾಟಕೋತ್ಸವ 

Spread the love

ಫೆ.22ರಿಂದ ರಂಗಹಬ್ಬ–14: ಸುಮನಸಾ ಕೊಡವೂರು ನಾಟಕೋತ್ಸವ 

ಉಡುಪಿ: ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು 14ನೇ ವರ್ಷದ ನಾಟಕೋತ್ಸವ ರಂಗಹಬ್ಬ–14 ಅನ್ನು ಫೆ.22ರಿಂದ 28ರವರೆಗೆ ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದೆ.

ಸಂಘಟನೆಯ ಅಧ್ಯಕ್ಷ ಪ್ರಕಾಶ್‌ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್‌. ಭಟ್‌ ಅವರು ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಸಂಘಟನೆ 2002ರಲ್ಲಿ ಆರಂಭಗೊಂಡಿದ್ದು, ಪ್ರತಿ ವರ್ಷ ತಲಾ ಮೂರು ನಾಟಕಗಳನ್ನು ಸಿದ್ಧಪಡಿಸಿ 750ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಯಕ್ಷಗಾನ ಸಾಹಿತ್ಯ, ಜನಪರ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ. 23 ಬಾರಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ, 4 ಬಾರಿ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ.  ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ನಮ್ಮ ಸಂಸ್ಥೆಗೆ ಲಭಿಸಿದೆ. ಕಳೆದ 13 ವರ್ಷಗಳಿಂದ ರಂಗಹಬ್ಬವನ್ನು ಸಂಘಟಿಸುತ್ತಾ ಬಂದಿದ್ದು, ರಾಷ್ಟ್ರೀಯ, ಪೌರಾಣಿಕ ನಾಟಕೋತ್ಸವವನ್ನು ಯಶಸ್ವಿಯಾಗಿ ಸಂಘಟಿಸಿದೆ’ ಎಂದು ಹೇಳಿದರು.

ಈ ಬಾರಿಯ ರಂಗಹಬ್ಬವು ಫೆಬ್ರವರಿ 22ರಿಂದ 28 ವರೆಗೆ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ, ನವದೆಹಲಿಯ ಸಂಸ್ಕೃತಿ ನಿರ್ದೇಶನಾಲಯವು ಸಹಯೋಗ ನೀಡಿವೆ. ತುಳು ರಂಗಭೂಮಿ ಮತ್ತು ತುಳು ಚಲನಚಿತ್ರ ರಂಗದ ಹಿರಿಯ ರಂಗಕರ್ಮಿ ಡಾ. ಪಿ ಸಂಜೀವ ದಂಡೆಕೇರಿ ಅವರು ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.

ಶಾಸಕ ಯಶ್‌ಪಾಲ್ ಎ. ಸುವರ್ಣ ಅಧ್ಯಕ್ಷತೆ ವಹಿಸಲಿರುವರು. ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆ ಇರಲಿದೆ. ಯಕ್ಷಗುರು ಯು.ದುಗ್ಗಪ್ಪ ಅವರ ನೆನಪಿನಲ್ಲಿ “ಯಕ್ಷಸುಮ” ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿ.ಕೃಷ್ಣ ಸ್ವಾಮಿ ಜೋಷಿ ಅವರಿಗೆ ಕೊಡ ಮಾಡಲಾಗುವುದು ಎಂದು ಮಾಹಿತಿ ನೀಡಿದರು

ಫೆ.22ರಂದು ಜರ್ನಿ ಥೇಟರ್ ಗೂಪ್, ಮಂಗಳೂರು ತಂಡವು ಕನ್ನಡ ನಾಟಕ ‘ಸಾಹೇಬರು ಬರುತ್ತಾರೆ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಫೆ.23ರಂದು ಸುಮನಸಾ ಕೊಡವೂರು, ಉಡುಪಿ ತಂಡದ ಕಲಾವಿದರು ‘ಯೇಸ’ ತುಳು ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದು ತಿಳಿಸಿದರು.

ಫೆ.24ರಂದು ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದ ‘ಜೋಕುಮಾರ ಸ್ವಾಮಿ’ ಕನ್ನಡ ನಾಟಕ, ಫೆ. 25ರಂದು ಸುಮನಸಾ ಕೊಡವೂರು ತಂಡದ ಸದಸ್ಯರಿಂದ ಕನ್ನಡ ಯಕ್ಷನಾಟಕ ‘ಮೈಂದ ದ್ವಿವಿದ ಕಾಳಗ’ ಫೆ. 26ರಂದು ಪಾಂಡಿಚೇರಿಯ ಅದಿಶಕ್ತಿ ಥಿಯೇಟರ್ ಸದಸ್ಯರಿಂದ ಇಂಗ್ಲೀಷ್‌ ನಾಟಕ ‘ಎ ಉಮೆನ್ ಆರ್ ನಾಟ್ ಟು ಬಿ’, ಫೆ.27ರಂದು ಸುಮನಸಾ ಕೊಡವೂರು ತಂಡದಿಂದ ಕನ್ನಡ ನಾಟಕ ‘ಈದಿ’ ಹಾಗೂ ಫೆ.28ರಂದು ಮೈಸೂರು ರಂಗವಲ್ಲಿ ತಂಡದಿಂದ ಕನ್ನಡ ನಾಟಕ ‘ಪರಮೇಶಿ ಪೇಮಪ್ರಸಂಗ’ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸಂಚಾಲಕರು  ಭಾಸ್ಕರ್ ಪಾಲನ್ ಬಾಚನಬೈಲು, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್, ದಿವಾಕರ್ ಕಟೀಲ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments