ಗುಡುಗು-ಮಿಂಚು ಸಹಿತ ಮಳೆ: ಸಿಡಿಲು ಬಡಿದು ಕಾರ್ಮಿಕ ಸಾವು
ಕುಂದಾಪುರ: ಗುರುವಾರ ಸಂಜೆ ಸಿಡಿಲು ಬಡಿದು ಕಾರ್ಮಿಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಅರಾಟೆ ಸೇತುವೆ ಬಳಿ ನಡೆದಿದೆ.
ಪಂಜಾಬ್ ಮೂಲದ ಕಾರ್ಮಿಕ ಅಶುತೋಷ್ (35) ಮೃತಪಟ್ಟಿದ್ದು, ಲವಜೋತ್ ಸಿಂಗ್ ಸಿಂಗ್ (28) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ದಿನಗಳಿಂದ ಅರಾಟೆ ಹಳೆ ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಗುರುವಾರ ಸಂಜೆ ಪಂಜಾಬ್ ಮೂಲದ ಕಾರ್ಮಿಕರು ಸೇತುವೆ ಕಾಮಗಾರಿಯಲ್ಲಿ ನಿರತರಾಗಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ತಾಲೂಕಿನಲ್ಲಿ ಸಂಜೆ ವೇಳೆ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ಮಾರ್ಗ ಮಧ್ಯೆ ಅಶುತೋಷ್ ಮೃತಪಟ್ಟಿದ್ದಾರೆ. ಇನ್ನೋರ್ವ ಗಾಯಾಳು ಲವಜೋತ್ ಸಿಂಗ್ ಸಿಂಗ್ ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಸಂಜೆ ತಾಲೂಕಿನಾದ್ಯಂದ ಮಳೆ ಸುರಿದಿದ್ದು, ಕೆಲ ದಿನಗಳಿಂದ ಕಾಡುತ್ತಿದ್ದ ಉರಿಬಿಸಿಲಿಗೆ ತಾತ್ಕಾಲಿಕ ತಂಪು ಸಿಕ್ಕಿದೆ. ಆದರೆ ಗುಡುಗು-ಮಿಂಚು ಸಹಿತ ಮಳೆಯ ಅಬ್ಬರದಿಂದ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.













