ಎಸ್‌ಐಆರ್ ಪ್ರಕ್ರಿಯೆ; ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಿರಲಿ: ರಮಾನಾಥ ರೈ

Spread the love

ಎಸ್‌ಐಆರ್ ಪ್ರಕ್ರಿಯೆ; ಅರ್ಹ ಮತದಾರರು ಪಟ್ಟಿಯಿಂದ ಬಿಟ್ಟುಹೋಗದಿರಲಿ: ರಮಾನಾಥ ರೈ

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಪ್ರಾಮಾಣಿಕವಾಗಿ ಹಾಗೂ ಪಕ್ಷಾತೀತವಾಗಿ ನಡೆಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕರ ಹಕ್ಕು. ಅರ್ಹ ಮತದಾರರನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಕೈಬಿಟ್ಟರೆ ಆತ ಜೀವಂತ ಇದ್ದರೂ ಸತ್ತ ಹಾಗೆ” ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬಿಜೆಪಿ ನಡೆಸುತ್ತಿರುವ ಅಪಪ್ರಚಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಬೇರೆ ದೇಶದವರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದ್ದಾರೆ, ಸಾಮೂಹಿಕವಾಗಿ ಈ ಪ್ರಕ್ರಿಯೆ ನಡೆಸಲು ಮಸೀದಿಗಳ ಹೆಸರನ್ನು ಬಳಸಲಾಗುತ್ತಿದೆ ಎಂದೆಲ್ಲಾ ಬಿಜೆಪಿ ಮುಖಂಡರು ಮೂರ್ಖತನದ ಮಾತುಗಳನ್ನು ಆಡುತ್ತಿದ್ದಾರೆ. ಸದ್ಯ ಆನ್‌ಲೈನ್‌ನಲ್ಲಿಯೇ ಎಸ್‌ಐಆರ್ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಮುಕ್ತ ಅವಕಾಶ ಕಲ್ಪಿಸಿದೆ. ಹಾಗಿರುವಾಗ ಬಿಜೆಪಿಯವರದ್ದು ತಲೆಬುಡ ಇಲ್ಲದ ಆರೋಪಗಳಾಗಿವೆ. ಬಿಎಲ್‌ಒಗಳು (BLO) ಹಲವು ಕಷ್ಟಗಳ ನಡುವೆಯೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಈ ಪವಿತ್ರ ಕೆಲಸದಲ್ಲೂ ತಮ್ಮ ರಾಜಕೀಯ ಹಾಗೂ ಮತೀಯ ಭಾವನೆ ಕೆರಳಿಸುವ ಅಗ್ಗದ ಪ್ರಯತ್ನ ಮಾಡುತ್ತಿದ್ದಾರೆ” ಎಂದು ರೈ ಆರೋಪಿಸಿದರು.

“ನನ್ನ ದೀರ್ಘಕಾಲದ ರಾಜಕೀಯ ಅನುಭವದಲ್ಲಿ ಹಿಂದೆಯೂ ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಡೆಸಲಾಗುತ್ತಿತ್ತು. ಆದರೆ ಈ ರೀತಿ ಎನ್ಯುಮರೇಶನ್ ಫಾರಂಗೆ ಸಹಿ ಹಾಕಿಸಿಕೊಂಡು ನಡೆಸುವ ಪ್ರಕ್ರಿಯೆ ನನಗೂ ಹೊಸ ಅನುಭವವಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸಾಕಷ್ಟು ದಾಖಲೆಗಳು ಬೇಕು, ಆದರೆ ಹೆಸರು ತೆಗೆದುಹಾಕುವುದು ಸುಲಭ. ಅದನ್ನೇ ಮಾಡಲು ಬಿಜೆಪಿಯವರು ಹೊಂಚು ಹಾಕುತ್ತಿದ್ದಾರೆ” ಎಂದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಕುರಿತು ಪ್ರಸ್ತಾಪಿಸಿದ ರಮಾನಾಥ ರೈ, “ಇದರ ನೇರ ಲಾಭ ಜನಸಾಮಾನ್ಯರಿಗೆ ದೊರೆಯಬೇಕೇ ಹೊರತು ತೈಲ ಕಂಪನಿಗಳ ಜೇಬು ತುಂಬಬಾರದು” ಎಂದರು.

ಇದೇ ವೇಳೆ, “ಧರ್ಮ, ದೇಶಪ್ರೇಮದ ಹೆಸರಿನ ಜೊತೆಗೆ ಅಯೋಧ್ಯೆ ದೇವರ ಹೆಸರಿನಲ್ಲೂ ಲೂಟಿ ನಡೆದಿರುವುದು ಅತ್ಯಂತ ಬೇಸರದ ಸಂಗತಿ. ಕೊಲ್ಲೂರು ದೇವಳದಿಂದ ಶಿಕ್ಷಣ ಸಂಸ್ಥೆಯೊಂದು ಚೆಕ್ ಮೂಲಕ ಊಟದ ಹಣ ಪಡೆಯುತ್ತಿದ್ದನ್ನು ನಾನು ಸಚಿವನಾಗಿದ್ದಾಗ ನಿಲ್ಲಿಸಿದ್ದಕ್ಕೆ ನನ್ನನ್ನು ತೀವ್ರವಾಗಿ ವಿರೋಧಿಸಲಾಗಿತ್ತು. ಆದರೆ ಇವತ್ತು ಧರ್ಮದ ಹೆಸರೇಳುವವರೇ ದೇವರ ಹುಂಡಿಗೆ ಕೈ ಹಾಕಿದ್ದಾರೆ” ಎಂದು ನೇರವಾಗಿ ವಾಗ್ದಾಳಿ ನಡೆಸಿದರು.

ಪಕ್ಷದ ಹುದ್ದೆಗಳ ಹಂಚಿಕೆ ಕುರಿತು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯನ್ನು ಬೆಂಬಲಿಸಿದ ರೈ, “ಹಿರಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ವಿವಿಧ ಹುದ್ದೆಗಳಲ್ಲಿ ಆದ್ಯತೆ ಮೇರೆಗೆ ಅವಕಾಶ ನೀಡಬೇಕು ಎಂಬುದು ನನ್ನ ಆಗ್ರಹ ಕೂಡ ಆಗಿದೆ. ನಾನು ಮಂತ್ರಿಯಾಗಿ ಕೆಲಸ ಮಾಡಿದವನು, ಯಾವುದೇ ನಿಗಮ ಮಂಡಳಿ ಹುದ್ದೆಯನ್ನು ನಾನು ಕೇಳುವುದಿಲ್ಲ. ಜನರ ಮಧ್ಯೆ ಇದ್ದು ನಾಯಕತ್ವ ಪಡೆಯಲು ಬಯಸುವವನು ನಾನು. ಇವತ್ತಿಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕವಾಗಿ ಬದುಕುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದರು.

YouTube player

Spread the love
Subscribe
Notify of

0 Comments