ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ಗೆ ಆಹ್ವಾನ| ಫೇಸ್ಬುಕ್ನಲ್ಲಿ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಉಡುಪಿ: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಆ.22ರಂದು ಜಗದೀಶ ಉಡುಪ ಎಂಬ ಹೆಸರಿನ ಪೇಸ್ಬುಕ್ ಖಾತೆಯಲ್ಲಿ ರಾಜ್ಯದಲ್ಲಿ ಏನಾಗ್ತಿದೆ, ದಸರಾ ಉದ್ಘಾಟನೆ ಬಾನು ಮುಷ್ತಾಕ್ ಅವರಿಂದ ಅಂತೇ, ಹಿಂದೂ ಧರ್ಮದ ನಾಡಹಬ್ಬ ಧಾರ್ಮಿಕ ಕಾರ್ಯಕ್ರಮ ಉದ್ಘಾಟನೆಗೇ ಹಿಂದೂಗಳಿಲ್ಲವೇ.., ಕೇವಲ ಒಂದೇ ಒಂದು ಸಮುದಾಯದ ಒಲೈಕೆಗಾಗಿ ಶ್ರೇಷ್ಠ ಹಿಂದೂ ಧರ್ಮದ ಅವಹೇಳನ ಮಾಡುವುದು ಖಂಡಿತ ತಪ್ಪು, ಒಂದು ವೇಳೆ ಮಾಡಿಸಿದರೆ ಅದರ ಪ್ರತಿಫಲವನ್ನು ಅನುಭವಿಸಬೇಕಾ ಗುತ್ತದೆ ಎಂದು ಪೋಸ್ಟ್ ಮಾಡಿದ್ದು, ಹೀಗೆ ಜಾಲತಾಣದಲ್ಲಿ ಪ್ರಚೋದನಕಾರಿ ಹಾಗೂ ಕೋಮು ಸೌಹಾರ್ದಕ್ಕೆ ದಕ್ಕೆ ಉಂಟಾಗುವ ರೀತಿಯಲ್ಲಿ ಪೋಸ್ಟ್ ಮಾಡಿದ ಆರೋಪಿ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅದೇ ರೀತಿ ನಿಟ್ಟೆ ಗ್ರಾಮದ ಸುದೀಪ್ ಶೆಟ್ಟಿ ಎಂಬಾತ ಫೇಸ್ಬುಕ್ನಲ್ಲಿ ಬಾನು ಮುಷ್ತಾಕ್ ಇವರಿಂದ ದಸರಾ ಉದ್ಘಾಟನೆ ಎಂಬುದಾಗಿ ಸಿಎಂ ಘೋಷಣೆ ಎಂಬ ಪೋಸ್ಟರ್ಗೆ, ದಸರಾ ಅನ್ನೋದು ಹಿಂದುಗಳ ಸಾಂಸ್ಕೃತಿಕ ಹಬ್ಬ, ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿಂದೂ ಸಂಪ್ರದಾಯದಂತೆ ನಡೆಯಲ್ಪಡುತ್ತದೆ, ಅಂತಹವರಲ್ಲಿ ಸನಾತನ ಹಿಂದೂ ಸಂಸ್ಕೃತಿಯನ್ನು ಒಪ್ಪದ ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡುವ ಅಗತ್ಯ ಏನಿದೆ ಎಂಬುದಾಗಿ ಪೋಸ್ಟ್ ಮಾಡಿದ್ದರು. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ವೈಷಮ್ಯ, ವೈರತ್ವ ಉಂಟು ಮಾಡುವ ರೀತಿಯಲ್ಲಿ ಪೋಸ್ಟ್ ಮಾಡಿರುವ ಸುದೀಪ್ ಶೆಟ್ಟಿ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.