ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

Spread the love

ಮೂಲಸೌಕರ್ಯ ಯೋಜನೆಗಳು ಸರ್ವಜ್ಞನಗರದ ಭವಿಷ್ಯವನ್ನು ಸಮೃದ್ದಗೊಳಿಸಲಿದೆ: ಸಚಿವ ಕೆ.ಜೆ.ಜಾರ್ಜ್

– ನಾಗವಾರದಲ್ಲಿ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿ ಪರಿಶೀಲನೆ

-ತ್ಯಾಜ್ಯ ನೀರು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಟಚ್‌

ಬೆಂಗಳೂರು, ಮಾರ್ಚ್ 4, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯಿಂದ ಮೂಲ ಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾದರಿ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಇಂಧನ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಗವಾರ ವ್ಯಾಪ್ತಿಯಲ್ಲಿ ಬುಧವಾರ ಕ್ಷೇತ್ರ ಪರ್ಯಟನೆ ನಡೆಸಿ ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಸಚಿವರು ಮಾತನಾಡಿ, “ನಮ್ಮ ಸರ್ಕಾರದ ಯೋಜನೆಗಳು ಕ್ಷೇತ್ರದ ಜನತೆಗೆ ಮೂಲಸೌಕರ್ಯ ಒದಗಿಸುವ ಜತೆಗೆ ಭವಿಷ್ಯದಲ್ಲಿ ಸಮಗ್ರ ಅಭಿವೃದ್ದಿಯ ಚಿಂತನೆಯಿಂದ ಕೂಡಿದೆ,” ಎಂದು ತಿಳಿಸಿದರು.

“ವೈಟ್‌ಟಾಪಿಂಗ್ ರಸ್ತೆಗಳು ಗುಣಮಟ್ಟದ ರಸ್ತೆಗಳಾಗಿದ್ದು ವಾಹನ ಸವಾರರಿಗೆ ಸುರಕ್ಷತೆ ಒದಗಿಸಲಿದೆ. ರಸ್ತೆಗಳು ದಕ್ಷತೆಯಿಂದ ಇರಲಿದ್ದು, ಗುಂಡಿ ಸಮಸ್ಯೆಗಳಿಗೆ ತಿಲಾಂಜಲಿ ಹಾಡಲಿವೆ. ಬಡಾವಣೆಗಳು ಅಭಿವೃದ್ದಿಯಾದಂತೆ ಒಳಚರಂಡಿ ತ್ಯಾಜ್ಯ ನೀರಿನ ಒತ್ತಡ ಹೆಚ್ಚಾಗುತ್ತಿದ್ದು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ಎದುರಾಗಲಿರುವ ಸಮಸ್ಯೆಗಳನ್ನು ನಿವಾರಿಸಲು ಇಂಟಿಗ್ರೇಟೆಡ್ ಸೀವೇಜ್ ಪಂಪಿಂಗ್ ಸಿಸ್ಟಮ್ (ಐಎಸ್‌ಪಿಎಸ್‌) ಎಂಬ ಆಧುನಿಕ ತಂತ್ರಜ್ಞಾನ ಹಾಗೂ ವ್ಯವಸ್ಥಿತ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದೇವೆ. ಇದು ಭವಿಷ್ಯದಲ್ಲಿ ತ್ಯಾಜ್ಯ ನೀರು ನಿರ್ವಹಣೆಗೆ ನೆರವಾಗಲಿದೆ,” ಎಂದರು.

ನಾಗವಾರ ಬಳಿಕ ಹೆಣ್ಣೂರು ಬಂಡೆ ಪ್ರದೇಶದಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವ ಕೆ.ಜೆ.ಜಾರ್ಜ್, ಇಂಧನ ಇಲಾಖೆಯಡಿ ಕೈಗೊಳ್ಳುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ಕಚೇರಿಗಳಿಗೆ ಅಗತ್ಯವಿರುವ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದರು.

ಇದೇ ವೇಳೆ ಮಹಾಗಣಪತಿ ದೇಗುಲದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಸಮುದಾಯ ಭವನದ ಬೇಡಿಕೆ ಮುಂದಿಟ್ಟಾಗ, ಸೂಕ್ತ ಜಾಗ ಮತ್ತು ಅನುದಾನದ ಅಂದಾಜು ಸಿದ್ದಪಡಿಸುವಂತೆ ಸ್ಥಳದಲ್ಲೇ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೆಟ್ರೋ ಸಮೀಪದ ರಸ್ತೆ ವಿಸ್ತರಣೆಗೆ ಸೂಚನೆ

ನಾಗವಾರ ಮೆಟ್ರೋ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ತೆರಳಿದ ಸಚಿವ ಕೆ.ಜೆ. ಜಾರ್ಜ್‌ ಅವರ ಮುಂದೆ ತಮ್ಮ ಅಹವಾಲು ಹೇಳಿಕೊಂಡ ಸ್ಥಳೀಯರು, ಮೆಟ್ರೋ ನಿಲ್ದಾಣ ನಿರ್ಮಾಣದಿಂದ ರಸ್ತೆ ಕಿರಿದಾಗಲಿದ್ದು, ಭವಿಷ್ಯದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಎಂಆರ್‌ಸಿಎಲ್ ವತಿಯಿಂದ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸ್ಥಳವನ್ನು ಪಡೆದು ಆದ್ಯತೆಯ ಮೇರೆಗೆ ರಸ್ತೆಯನ್ನು ವಿಸ್ತರಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಶಾಲೆ ಉನ್ನತೀಕರಿಸಿದ ಸಚಿವರಿಗೆ ಧನ್ಯವಾದ ಹೇಳಿದ ಸದಸ್ಯರು

ಸಚಿವ ಕೆ.ಜೆ.ಜಾರ್ಜ್ ದೊಡ್ಡಬಾಣಸವಾಡಿಯ ಹೊರಮಾವು ರಸ್ತೆಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ, ಶಾಲಾಭಿವೃದ್ದಿ ಸಮಿತಿ ಸದಸ್ಯರ ಜತೆ ಚರ್ಚೆ ನಡೆಸಿದರಲ್ಲದೆ, ಹೊಸದಾಗಿ ನಿರ್ಮಿಸುತ್ತಿರುವ ಕೊಠಡಿಗಳಿಗೆ ಅನುದಾನ ಹಾಗು ಅಗತ್ಯ ಸೌಕರ್ಯಗಳ ಕಲ್ಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಲೆಗೆ ಅತ್ಯುತ್ತಮ ಸೌಕರ್ಯ ಕಲ್ಪಿಸಿ ಶೈಕ್ಷಣಿಕ ವಾತಾವರಣ ಸುಧಾರಣೆಗೆ ಕಾರಣರಾದ ಸಚಿವರಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮತ್ತು ಮಕ್ಕಳು ಧನ್ಯವಾದ ತಿಳಿಸಿದರು.

ನಾಗವಾರ ಹಾಗೂ ಹೆಣ್ಣೂರು ಪ್ರದೇಶದಲ್ಲಿನ ಕ್ಷೇತ್ರ ಯಾತ್ರೆಯಲ್ಲಿ ಹೆಣ್ಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್‌.ಎ. ಪುಲಿಕೇಶಿ, ಕೆಜಿ ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರ ಮುನಿರಾಜು, ಹೆಚ್‌ಬಿಆರ್‌ ವಾರ್ಡ್‌ ಅಧ್ಯಕ್ಷರಾದ ಕಲೀಮ್, ಮಹೇಶ್ ಹಾಗೂ ಎನ್‌ಎಸ್‌ಯೂಐ ಸದಸ್ಯರು, ಸಚಿವರ ವಿಶೇಷಾಧಿಕಾರಿಗಳು, ನಮ್ಮ ಮೆಟ್ರೋ, ಬೆಸ್ಕಾಂ, ಕೆಪಿಟಿಸಿಎಲ್, ಜಿಬಿಎ ಹಾಗೂ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments