ಶಾಲಾ ಮಕ್ಕಳ ವಾಹನ ಚಾಲಕರಿಗೆ ಅನಗತ್ಯ ಕಿರುಕುಳ ಖಂಡಿಸಿ ಪ್ರತಿಭಟನಾ ಜಾಥಾ

Spread the love

ಶಾಲಾ ಮಕ್ಕಳ ವಾಹನ ಚಾಲಕರಿಗೆ ಅನಗತ್ಯ ಕಿರುಕುಳ ಖಂಡಿಸಿ ಪ್ರತಿಭಟನಾ ಜಾಥಾ

ಮಂಗಳೂರು: ಶಾಲಾ ಮಕ್ಕಳ ವಾಹನ ಚಾಲಕರಿಗೆ ವಿನಾ ಕಾರಣ ಕಿರುಕುಳ ಹಾಗೂ ವಿಪರೀತ ದಂಡ ವಸೂಲಿಯನ್ನು ಖಂಡಿಸಿ, ಜಿಲ್ಲಾಡಳಿತದ ಅವೈಜ್ಞಾನಿಕ ಕ್ರಮವನ್ನು ವಿರೋಧಿಸಿ ಶಾಲಾ ಮಕ್ಕಳ ವಾಹನ ಚಾಲಕರು ನಗರದಲ್ಲಿಂದು ಪ್ರತಿಭಟನಾ ಜಾಥಾವನ್ನು ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಅರ್ಪಿಸಿದರು.
600ಕ್ಕೂ ಮಿಕ್ಕಿದ ಶಾಲಾವಾಹನ ಚಾಲಕರು ನಗರದ ಮಿನಿ ವಿಧಾನಸೌಧದಿಂದ ಪ್ರತಿಭಟನಾ ಜಾಥಾದ ಮೂಲಕ ಹೊರಟು, ‘ಚಾಲಕರ ಮೆಲಿನ ಕೇಸುಗಳನ್ನು ವಾಪಾಸ್ ಪಡೆಯಿರಿ, ಹಳದಿ ಬಣ್ಣದ ಕಡ್ಡಾಯವನ್ನು ವಾಪಸ್ ಪಡೆಯಿರಿ, ಮಕ್ಕಳ ಸುರಕ್ಷತಾ ಕಾವಲು ಸಮಿತಿ ರಚಿಸಿರಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಛೇರಿಯತ್ತಾ ಸಾಗಿದರು.

image002yellowcolour-school-vehicle--20160628-002 image003yellowcolour-school-vehicle--20160628-003 image004yellowcolour-school-vehicle--20160628-004 image001yellowcolour-school-vehicle--20160628-001 image006yellowcolour-school-vehicle--20160628-006 image005yellowcolour-school-vehicle--20160628-005

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸುನಿಲ್ ಕುಮಾರ್ ಬಜಾಲ್‍ರವರು, ಕುಂದಾಪುರದ ತ್ರಾಸಿಯಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಚಾಲಕರನ್ನೇ ಗುರಿಯನ್ನಾಗಿಸಿ ಕೇಸು ದಾಖಲು, ವಿಪರೀತ ದಂಡ ವಸೂಲಿ ಮಾಡುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿರುವುದು ತೀರಾ ಖಂಡನೀಯ. ನಗರದ ಹಲವು ಕಡೆಗಳಲ್ಲಿ ಮಕ್ಕಳನ್ನು ಸಾಗಿಸುವ ವಾಹನಗಳನ್ನು ಬೆನ್ನಟ್ಟಿಕೊಂಡು ಹೋಗುವ ಮೂಲಕ ಪೊಲೀಸರು ಅಮಾನುಷವಾಗಿ ವರ್ತಿಸುತ್ತಿದ್ದಾರೆ. ಮಕ್ಕಳ ಸುರಕ್ಷತೆಯ ಬಗ್ಗೆ ಜಿಲ್ಲಾಡಳಿತವು ಕೇವಲ ಘಟನೆ ಆದಾಗ ಮಾತ್ರವೇ ಎಚ್ಚೆತ್ತುಕೊಳ್ಳುವ ಬದಲು ನಿರಂತರವಾಗಿ ಈ ಬಗ್ಗೆ ಜಿಲ್ಲಾ ಮಟ್ಟದ ಮಕ್ಕಳ ಸುರಕ್ಷತಾ ಸಮಿತಿಯನ್ನು ರಚಿಸಬೇಕಾಗಿದೆ. ಪ್ರತಿಯೊಂದು ಶಾಲೆಗಳಲ್ಲೂ ಕಾವಲು ಸಮಿತಿಗಳನ್ನು ರಚಿಸುವ ಮೂಲಕ ಮಕ್ಕಳ ಸುರಕ್ಷತೆಗಾಗಿ ಗಮನ ನೀಡಬೇಕಾಗಿದೆ. ಮಕ್ಕಳ ಸಂಖ್ಯೆಯ ಮಿತಿಯನ್ನು ಕೂಡಾ ವೈಜ್ಞಾನಿಕ ನೆಲೆಯಲ್ಲಿ ಅಂತಿಮಗೊಳಿಸಬೇಕಾಗಿದೆ. ಒಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕನಿಷ್ಟ 3 ತಿಂಗಳ ಕಾಲಾವಕಾಶವನ್ನು ವಾಹನ ಚಾಲಕರಿಗೆ ಜಿಲ್ಲಾಡಳಿತ ನೀಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟವನ್ನು ರೂಪಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಶಾಲಾವಾಹನ ಚಾಲಕರ ಸಂಘದ ಮುಖಂಡರಾದ ಉಮೇಶ್ ಶೆಟ್ಟಿಯವರು ಮಾತನಾಡುತ್ತಾ, ಪ್ರವಾಸಿ ವಾಹನ ಪರವಾನಿಗೆ ಹೊಂದಿರುವ ವಾಹನಗಳಿಗೆ ಹಳದಿ ಬಣ್ಣ ಕಡ್ಡಾಯ ಸರಿಯಲ,್ಲ ಅದನ್ನು ವಾಪಸ್ ಪಡೆಯಬೇಕಾಗಿದೆ ಪ್ರತಿಯೊಂದು ಶಾಲೆಗಳಲ್ಲಿ ಬೇಕಾದಷ್ಟು ಮೈದಾನದ ವ್ಯವಸ್ಥೆ ಇದ್ದರೂ ಅದೇ ಶಾಲೆಯ ವಾಹನಗಳನ್ನು ಶಾಲೆಯ ಒಳಗಡೆ ಬರಲು ಅನುಮತಿ ನೀಡದಿರುವುದು ಸರಿಯಲ್ಲ. ಶಾಲಾ ಮೈದಾನದಲ್ಲೇ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ ಎಂದು ಹೇಳಿದರು.
ಸಂಘದ ಇನ್ನೊಬ್ಬ ಮುಖಂಡರಾದ ಕುಮಾರ್ ಮಲೆಮಾರ್‍ರವರು ಮಾತನಾಡುತ್ತಾ, ಶಾಲಾ ವಾಹನ ಚಾಲಕರ ಸಂಕಷ್ಟವನ್ನು ಸವಿವರವಾಗಿ ವಿವರಿಸುತ್ತಾ ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ ಚಾಲಕರನ್ನೇ ಗುರಿಯನ್ನಾಗಿಸುವುದು ಸರ್ವಥಾ ಸರಿಯಲ್ಲ. ಸಮಸ್ಯೆ ಪರಿಹರಿಸುವ ಬದಲು ಕೇಸ್ ದಾಖಲಿಸಿ ವಾಹನ ಚಾಲಕರನ್ನು ವಿಕೃತವಾಗಿ ಸೃಷ್ಠಿಸಿರುವುದು ಬಹಳ ನೋವಿನ ಸಂಗತಿಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಮಕ್ಕಳ ಸುರಕ್ಷತೆ ಹಾಗೂ ವಾಹನ ಚಾಲಕರ ಸಂಕಷ್ಟಗಳ ಬಗ್ಗೆ ಸಭೆಯನ್ನು ಕರೆಯಬೇಕೆಂದು ಹೇಳಿದರು.
ಹೋರಾಟದ ನೇತೃತ್ವವನ್ನು ದ.ಕಜಿಲ್ಲಾ ಶಾಲಾ ವಾಹನ ಚಾಲಕರ ಸಂಘದ ಮುಖಂಡರಾದ ಗಂಗಾಧರ್‍ರೈ, ಚಿತ್ತರಂಜನ್, ಸತೀಶ್ ಪೂಜಾರಿ, ಪ್ರವೀಣ್, ಜಯರಾಮ, ಮೋಹನ್ ಅತ್ತಾವರ, ಬೆಂಜಮಿನ್ ವೇಗಸ್, ಜೊಸ್ಸಿ ಡಿಕುನ್ನ, ಮುನ್ನಾ, ಕಿರಣ್, ಮಹಮ್ಮದ್ ಅನ್ಸಾರ್, ಲೋಕೆಶ್ ಸುರತ್ಕಲ್ ಮುಂತಾದವರು ವಹಿಸಿದ್ದರು.


Spread the love