ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಎನ್ ಐ ಎ ತನಿಖೆಗೆ ವರ್ಗಾವಣೆ : ಯಶ್ಪಾಲ್ ಸುವರ್ಣ ಸ್ವಾಗತ
ಉಡುಪಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆಯ ತನಿಖೆಯನ್ನು ಎನ್ ಐ ಎ ತನಿಖೆಗೆ ವರ್ಗಾಯಿಸಿದ ಕೇಂದ್ರ ಸರಕಾರದ ಗೃಹ ಇಲಾಖೆಯ ನಿರ್ಧಾರವನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಸ್ವಾಗತಿಸಿದ್ದಾರೆ.
ರಾಜ್ಯ ಗೃಹ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿ ಮತಾಂಧ ಶಕ್ತಿಗಳು ಅಮಾನುಷವಾಗಿ ಬಜ್ಪೆ ಪೇಟೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಮಾಡಿ ಕರಾವಳಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೇ ಸವಾಲು ಹಾಕಿದ ಘಟನೆಯ ಬಗ್ಗೆ ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷ ಈ ಪ್ರಕರಣವನ್ನು ಎನ್ ಐ ಎ ತನಿಖೆಗೆ ನೀಡುವಂತೆ ಮಾಡಿದ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಪ್ರಕರಣವನ್ನು ಎನ್ ಐ ಎ ಗೆ ವರ್ಗಾಯಿಸುವ ಮೂಲಕ ಸುಹಾಸ್ ಶೆಟ್ಟಿ ತಂದೆ ತಾಯಿಯ ಬೇಡಿಕೆಯನ್ನು ಈಡೇರಿಸಿದೆ.
ಈ ತನಿಖೆಯ ಮೂಲಕ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಪಾಲ್ಗೊಂಡ ಮತಾಂಧ ಶಕ್ತಿಗಳು, ಆರ್ಥಿಕ ಸಹಕಾರ ನೀಡಿರುವ ಕಾಣದ ಕೈಗಳು ಹಾಗೂ ಕರಾವಳಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ನಿಷೇಧಿತ ಮತೀಯ ಸಂಘಟನೆಗಳ ಕೈವಾಡ ಬಯಲಾಗುವ ವಿಶ್ವಾಸವಿದೆ, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಹಾಗೂ ಕರಾವಳಿ ಜಿಲ್ಲೆಯ ಸಂಸದರು ಹಾಗೂ ಶಾಸಕರಿಗೆ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಯಶ್ ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.