ಬೈಂದೂರಿನಲ್ಲಿ ಕಂಡು ಕೇಳರಿಯದ ಜಲ ಪ್ರವಾಹ, ತತ್ತರಿಸಿದ ನಿವಾಸಿಗಳು

Spread the love

ಬೈಂದೂರಿನಲ್ಲಿ ಕಂಡು ಕೇಳರಿಯದ ಜಲ ಪ್ರವಾಹ, ತತ್ತರಿಸಿದ ನಿವಾಸಿಗಳು

ಕುಂದಾಪುರ: ಭಾನುವಾರ ರಾತ್ರಿಯಿಡೀ ಸುರಿದ ಭಾರೀ ಗಾಳಿ-ಮಳೆಗೆ ಬೈಂದೂರು ತಾಲೂಕಿನ ಸೌಪರ್ಣಿಕಾ, ಎಡಮಾವಿನಹೊಳೆ, ಸುಮನಾವತಿ ನದಿ ಉಕ್ಕಿ ಹರಿದ ಪರಿಣಾಮ ಸೋಮವಾರ ನಸುಕಿನ ಜಾವ ನದಿತೀರದ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ.

ಕಂಬದಕೋಣೆ ಗ್ರಾ.ಪಂ ವ್ಯಾಪ್ತಿಯ ಎಡಮಾವಿನಹೊಳೆ ತುಂಬಿ ಹರಿದ ಪರಿಣಾಮ ಹಳಗೇರಿ, ಕಂಬಳಗದ್ದೆ ಪರಿಸವಿಡೀ ಜಲಾವೃತಗೊಂಡಿದೆ. ಈ ಪರಿಸರದಲ್ಲಿ ಕಳೆದ ೨೫ ವರ್ಷಗಳ ಬಳಿಕ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೆರೆ ನೀರು ನುಗ್ಗಿದೆ. ಕಂಬದಕೋಣೆ ಮುಖ್ಯ ರಸ್ತೆಯಿಂದ ಹಳಗೇರಿ ಕಂಬಳಗದ್ದೆ ಸಂಪರ್ಕ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ನೆರೆಪೀಡಿತ ಪ್ರದೇಶದ ನಿವಾಸಿಗಳನ್ನು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ದೋಣಿಯ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ. ಹಳಗೇರಿ ಕಂಬಳಗದ್ದೆ ಪರಿಸರದಲ್ಲಿ ಒಟ್ಟು ಎಂಟು ಮನೆಗಳಿದ್ದು, ನಸುಕಿನ ಜಾವ ನೀರು ನುಗ್ಗಿದ ಪರಿಣಾಮ ಜನರನ್ನು ದೋಣಿಯ ಮೂಲಕ ಕರೆತರಲಾಯಿತು. ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿರುವುದರಿಂದ ಸ್ಥಳೀಯರು ದೋಣಿಯ ಮೂಲಕ ವಿದ್ಯಾರ್ಥಿಗಳನ್ನು ಕರೆತಂದರು.

ಕೆಟ್ಟು ನಿಂತ ಸ್ಪೀಡ್ ಬೋಟ್: ಸ್ಥಳಾಂತರಕ್ಕೆ ಹರಸಾಹಸ:
ಬೈಂದೂರು ವಿಧಾನಸಭಾ ವ್ಯಾಪ್ತಿಯ ಹಲವು ಭಾಗಗಳಲ್ಲಿ ಏಕಾಏಕಿ ನೆರೆ ನೀರು ನುಗ್ಗಿದ ಹಿನ್ನೆಲೆ ತಕ್ಷಣದ ಕಾರ್ಯಾಚರಣೆಗೆ ಕೆಲ ಕಡೆಗಳಲ್ಲಿ ತೊಡಕುಂಟಾಯಿತು. ಹಳಗೇರಿಯಲ್ಲಿ ಸ್ಪೀಡ್ ಬೋಟ್ನ ಎಂಜಿನ್ ಕೆಟ್ಟು ನಿಂತು ಅತಂತ್ರ ಸ್ಥಿತಿಯಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಸ್ಥಳೀಯ ಮೀನುಗಾರರು ನೆರವಾದರು. ಹಳಗೇರಿ ಕಂಬಳಗದ್ದೆಯಲ್ಲಿ ನೆರೆ ನೀರಿಗೆ ಸಿಲುಕಿಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ವಿಶೇಷಚೇತನ ವ್ಯಕ್ತಿಯ ಕುಟುಂಬವೂ ಸೇರಿದಂತೆ ಮೂರು ಕುಟುಂಬಗಳನ್ನು ಕೆಟ್ಟು ಹೋದ ಬೋಟ್ನಲ್ಲೇ ಹರಸಾಹಸಪಟ್ಟು ನೀರಿನಲ್ಲಿ ಎಳೆದುಕೊಂಡೇ ಹೋಗಿ ಅವರನ್ನು ಮರಳಿ ಸುರಕ್ಷಿತ ಪ್ರದೇಶಕ್ಕೆ ಕರೆತರುವ ಮೂಲಕ ಸ್ಥಳೀಯ ಮೀನುಗಾರರು ಸಾಹಸ ಮೆರೆದರು. ಕೆಲ ಕುಟುಂಬಗಳು ಮನೆಯನ್ನು ಬಿಟ್ಟು ಸುರಕ್ಷಿತ ಸ್ಥಳಕ್ಕೆ ಬರಲು ಒಪ್ಪದ ಕಾರಣ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ನೇರವಾಗಿ ದೋಣಿಯ ಮೂಲಕ ಸಾಗಿ ಕುಟುಂಬಸ್ಥರ ಮನವೊಲಿಸಿ ಕೆಲವರನ್ನು ಸುರಕ್ಷಿತ ಸ್ಥಳಕ್ಕೆ ತರೆತಂದರು. ಯಡ್ತರೆ, ಕುದ್ರುಹಿತ್ಲು, ರಾವುತನ ಕಟ್ಟೆ, ಯಡ್ತರೆ ಗರ್ಜಿನಹಿತ್ಲು ಮೊದಲಾದ ನೆರೆಪೀಡಿತ ಪ್ರದೇಶಗಳಿಗೆ ತೆರಳಿದ ಶಾಸಕ ಗಂಟಿಹೊಳಿ ಸುರಕ್ಷಿತ ಸ್ಥಳಕ್ಕೆ ಬರುವಂತೆ ಅಲ್ಲಿನ ನಿವಾಸಿಗಳ ಮನವೊಲಿಸಲು ಪ್ರಯತ್ನಿಸಿದರು.

ಸಾಲ್ಬುಡ ಸಂಪೂರ್ಣ ಜಲಾವೃತ:
ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯಿತಿಯ ಸಾಲ್ಬುಡ, ಭಾಂಗೀನ್ ಮನೆ, ಕುದ್ರು, ಕೆಳಾಬದಿ ಸಂಪೂರ್ಣ ಜಲಾವೃತಗೊಂಡಿದೆ. ನಾವುಂದದಿಂದ ಅರೆಹೊಳೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಾಲ್ಬುಡದಲ್ಲಿ ಸಂಪೂರ್ಣ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಈ ಪರಿಸರದಲ್ಲಿ ಪ್ರತೀ ವರ್ಷವೂ ನೆರೆ ನೀರು ನುಗ್ಗುತ್ತಿದ್ದು, ಪಂಚಾಯಿತಿಯ ಎರಡು ದೋಣಿಗಳ ಮೂಲಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ. ಈ ಭಾಗದಲ್ಲಿ ಸ್ಥಳೀಯ ಯುವಕರೇ ಸ್ವಯಂಸೇವಕರಾಗಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಎಕರೆಗಟ್ಟಲೆ ಭತ್ತದ ಕೃಷಿ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದು, ಭತ್ತದ ಸಸಿಗಳು ಕೊಳೆತು ಹೋಗುವ ಭೀತಿಯಲ್ಲಿ ಇಲ್ಲಿನ ರೈತರಿದ್ದಾರೆ.

ನಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾಕೆರೆ, ಪಡುಕೋಣೆ, ಹಡವು, ಚಿಕ್ಕಳ್ಳಿ ಮತ್ತು ಮರವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರು ಕುದ್ರು, ವರಹಾ ಮಹಾರಾಜ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಮುಳುಗಡೆಯಾಗಿದ್ದು, ನೂರಾರು ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಮರವಂತೆಯಿಂದ ಪಡುಕೊಣೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಹಾಗೂ ನಾವುಂದದಿಂದ ಬಡಾಕೆರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದ್ದು, ಈ ಪರಿಸರದ ಜನರ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.

ಬಿಜೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಗರಡಿ ರಸ್ತೆ, ಕಳಿನ್ ಸಾಲು ಕೇರಿ, ಅರೆಕಲ್ಲು ಹೊಳೆತೋಟ, ಶಾಲೆಮಕ್ಕಿ, ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಗ್ಗರ್ಸೆ, ಎಳಜಿತ್ ಗ್ರಾಮದ ಸಾತೇರಿ ಮೊದಲಾಡೆದೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಈ ಭಾಗದಲ್ಲಿ ಎನ್ಡಿಆರ್ಎಫ್ ತಂಡ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತು.
ಶಾಸಕ ಗುರುರಾಜ ಗಂಟಿಹೊಳೆ ಕಂಬದಕೋಣೆ ಹಳಗೇರಿಯಲ್ಲಿ ಕಾರ್ಯಾಚರಣೆ ವೀಕ್ಷಿಸಲು ಬಂದ ವೇಳೆ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ವರ್ಷಕ್ಕೆ ಒಂದು ಸಾರಿ ಬಂದು ಫೋಟೊಗೆ ಪೋಸ್ ಕೊಟ್ಟು ಶೋ ಮಾಡಿ ಹೋಗುವುದು ಮತ್ತು ಈ ಕಡೆ ತಲೆ ಹಾಕಿ ನೋಡಲ್ಲ ಎಂದು ಸ್ಥಳೀಯ ಮಹಿಳೆಯರು ಆಕ್ರೋಶದ ಮಾತುಗಳನ್ನು ಹೊರಹಾಕಿದರು. ಸಂಪರ್ಕ ರಸ್ತೆ ಎತ್ತರ ಮಾಡಿ ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟರೂ ಸ್ಪಂದನೆ ಸಿಕ್ಕಿಲ್ಲ. ನೆರೆ ಬಂದಾಗ ಮಾತ್ರ ಇತ್ತ ಕಡೆ ಬರುವ ಜನಪ್ರತಿನಿಧಿಗಳು ಬೇರೆ ಸಮಯದಲ್ಲಿ ಬರುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವೆಡೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇಂತಹ ಅಪಾಯದ ಸಂದರ್ಭದಲ್ಲಿ ಕರಾವಳಿ ಮೀನುಗಾರರು ದೋಣಿಗಳನ್ನು ಕೊಟ್ಟು, ಸ್ವತಃ ಅವರೇ ಕಾರ್ಯಾಚರಣೆಗಿಳಿದಿದ್ದಾರೆ. ಜಿಲ್ಲಾಡಳಿತ ನಮ್ಮ ಜೊತೆಗಿದೆ. ಯಡ್ತರೆ ಬಂಟರ ಭವನದಲ್ಲಿ ಗಂಜಿ ಕೇಂದ್ರ ಆರಂಭಿಸಲಾಗಿದೆ. ನೆರೆ ಎದುರಿಸಲು ಸನ್ನದ್ದರಾಗಿದ್ದೇವೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಹೇಳಿದರು

ಎರಡು ದಿನಗಳ ಹಿಂದೆ ಬಿತ್ತನೆ ಮಾಡಿರುವ ಭತ್ತ ನೀರಿನಲ್ಲಿ ಕೊಚ್ಚಿ ಹೋಗಿದೆ. ಮರು ಬಿತ್ತನೆಗೆ ಭತ್ತದ ಸಮಸ್ಯೆ ಎದುರಾಗುತ್ತಿದ್ದು, ಕೃಷಿ ಇಲಾಖೆ ಉಚಿತವಾಗಿ ಭತ್ತವನ್ನು ನೀಡಬೇಕು. ನೆರೆಪೀಡಿತ ಪ್ರದೇಶವೆಂದೇ ಬಿಂಬಿತವಾಗಿರುವ ಸಾಲ್ಬುಡದಲ್ಲಿ ದನ-ಕರುಗಳನ್ನು ಸುರಕ್ಷಿತವಾಗಿ ಕಟ್ಟಿ ಹಾಕಲು ಶೆಡ್ ವ್ಯವಸ್ಥೆ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿ ನಾಗರಾಜ್ ಸಾಲ್ಬುಡ ಹೇಳಿದರು.

ಬೈಂದೂರಿನ ಬಿಜೂರಿಲ್ಲಿ ಎನ್ಡಿಆರ್ಎಫ್ ತಂಡ ಕಾರ್ಯಾಚರಣೆ ನಡೆಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಉಳಿದಂತೆ ಅಗ್ನಿಶಾಮಕ ದಳದ ತಂಡ ಬೇರೆ ಕಡೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಕಂಬದಕೋಣೆಯ ಹಳಗೇರಿಯಲ್ಲಿ ಸ್ಪೀಡ್ ಬೋಟ್ನ ಎಂಜಿನ್ ಹಾಳಾಗಿದ್ದು ತತ್ಕ್ಷಣವೇ ಬದಲಾಯಿಸಿದ್ದೇವೆ. ಈ ಭಾಗದಲ್ಲಿ ಆರೆಂಜ್ ಅಲರ್ಟ್ ಇದ್ದ ಕಾರಣ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿಲ್ಲ ಎಂದು ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತರಾದ ರಶ್ಮೀ ಹೇಳಿದರು


Spread the love
Subscribe
Notify of

0 Comments
Inline Feedbacks
View all comments