ಮಂಗಳೂರು: ವಿಶ್ವ ಪರಿಸರ ದಿನಾಚರಣೆ: ರೀಲ್ಸ್ ಸ್ಪರ್ಧೆ
ಮಂಗಳೂರು: ವಿಶ್ವ ಪರಿಸರ ದಿನಾಚರಣೆ-2026 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಮಂಗಳೂರಿನ ಪ್ರಾದೇಶಿಕ ಕಚೇರಿಯು ಪರಿಸರ ಜಾಗೃತಿ ಹಾಗೂ ಹವಾಮಾನ ಕ್ರಮಗಳಿಗೆ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶೇಷ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದೆ.
“ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ; ನಮ್ಮ ಭವಿಷ್ಯಕ್ಕಾಗಿ” ಎಂಬ ಧೈಯವಾಕ್ಯದಡಿ ನಡೆಯಲಿರುವ ಈ ಸ್ಪರ್ಧೆಯ ಮೂಲಕ ಪರಿಸರ ಸಂರಕ್ಷಣೆ, ಸುಸ್ಥಿರ ಜೀವನಶೈಲಿ, ಹವಾಮಾನ ಬದಲಾವಣೆಯ ಬಗ್ಗೆ ಅರಿವು ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಮುಕ್ತವಾಗಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಸೃಜನಶೀಲತೆಯನ್ನು ಬಳಸಿಕೊಂಡು 30 ರಿಂದ 120 ಸೆಕೆಂಡುಗಳ ಅವಧಿಯ ಮೂಲ ರೀಲ್ಸ್ ವೀಡಿಯೊಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು. ಸಲ್ಲಿಕೆಯಾಗುವ ವಿಡಿಯೊಗಳು ಸ್ಪರ್ಧೆಯ ಅಧಿಕೃತ ವಿಷಯ ವಸ್ತುವಿಗೆ ಹೊಂದಿಕೆಯಾಗಿರಬೇಕು. ಅಸಭ್ಯ, ಆಕ್ರಮಣಕಾರಿ, ಮಾನಹಾನಿಕಾರಕ ಅಥವಾ ಧಾರ್ಮಿಕವಾಗಿ ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರಬಾರದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಸ್ಪರ್ಧೆಯಲ್ಲಿ ವಿಜೇತರಿಗಾಗಿ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ 3 ಸಾವಿರ ರೂ. ನೀಡಲಾಗುತ್ತದೆ.
ಭಾಗವಹಿಸಲು ಆಸಕ್ತರು ತಾವು ಸಿದ್ಧಪಡಿಸಿದ ರೀಲ್ಸ್ಗಳನ್ನು ಇನ್ಸ್ಟಾಗ್ರಾಂ ಅಥವಾ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ರೂಪದಲ್ಲೇ ಅಪ್ಲೋಡ್ ಮಾಡಬೇಕು. ಸ್ಪರ್ಧೆಯ ಅವಧಿಯಲ್ಲಿ ಖಾತೆಯನ್ನು ಸಾರ್ವಜನಿಕ ಸ್ಥಿತಿಯಲ್ಲಿ ಇರಿಸಬೇಕು. ಬಳಿಕ ಹೆಸರು, ವಯಸ್ಸು, ಸಂಪರ್ಕ ಸಂಖ್ಯೆ ಹಾಗೂ ಸ್ಥಳದ ವಿವರಗಳೊಂದಿಗೆ ರೀಲ್ಸ್ ಲಿಂಕ್ ಅನ್ನು ಸಲ್ಲಿಸಬೇಕು.
ರೀಲ್ಸ್ಗಳ ಲಿಂಕ್ಗಳನ್ನು manglore@kspcb.gov.in ಅಥವಾ romangalore21@gmail.com ಮೇಲ್ ವಿಳಾಸಗಳಿಗೆ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗೆ 9741632289 ಸಂಖ್ಯೆಗೆ ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು. ಜೂನ್ 2 ರೀಲ್ಸ್ ಸಲ್ಲಿಕೆಗೆ ಕೊನೆಯ ದಿನ.
ಡಿಜಿಟಲ್ ವೇದಿಕೆಗಳ ಮೂಲಕ, ವಿಶೇಷವಾಗಿ ಯುವಜನರ ಪಾಲ್ಗೊಳ್ಳುವಿಕೆಯಿಂದ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಮಾಜದ ವಿವಿಧ ವರ್ಗಗಳಿಗೆ ತಲುಪಿಸಿ, ಹಸಿರು ಭವಿಷ್ಯ ನಿರ್ಮಾಣದತ್ತ ಸಮೂಹ ಪ್ರಯತ್ನಕ್ಕೆ ಉತ್ತೇಜನ ನೀಡುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಕಚೇರಿ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













