ಇಬ್ಬರು ವ್ಯವಸ್ಥಾಪಕರು, ಸಾಲಗಾರರು ಸೇರಿ ಕಾರ್ಪೊರೇಷನ್ ಬ್ಯಾಂಕ್ ಕಟ್ಟಿಗೇರಿ ಶಾಖೆಗೆ ರೂ 84.80 ಲಕ್ಷ ವಂಚನೆ

Spread the love

ಇಬ್ಬರು ವ್ಯವಸ್ಥಾಪಕರು, ಸಾಲಗಾರರು ಸೇರಿ ಕಾರ್ಪೊರೇಷನ್ ಬ್ಯಾಂಕ್ ಕಟ್ಟಿಗೇರಿ ಶಾಖೆಗೆ ರೂ 84.80 ಲಕ್ಷ ವಂಚನೆ

ಉಡುಪಿ: ಸಾಲ ಮಂಜೂರು ಮಾಡುವಾಗ ಸಾಲಕ್ಕೆ ಯಾವುದೇ ಭದ್ರತೆ ತೆಗೆದುಕೊಳ್ಳದೆ ಬ್ಯಾಂಕಿನ ನಿಯಮಗಳನ್ನು ಪಾಲಿಸದೇ ಸಾಲದ ಮಂಜೂರು ಮಾಡಿದ ಕಾರ್ಪೊರೇಶನ್ ಬ್ಯಾಂಕಿನ ಕಟ್ಟಿಂಗೇರಿ ಶಾಖೆ ಶಾಖಾ ಪ್ರಬಂಧಕರ ವಿರುದ್ದ ಹಾಗೂ ಸಾಲ ಪಡೆದವರ ವಿರುದ್ದ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೇಲಿಯ ಎ ಡೇಸ, ಡೆಪ್ಯುಟಿ ಜನರಲ್ ಮ್ಯಾನೇಜರ್ ಝೋನಲ್ ಹೆಡ್ ಕಾಪೋರೇಶನ್ ಬ್ಯಾಂಕ್ ವಲಯ ಕಛೇರಿ ಉಡುಪಿ ಇವರು ಶಿರ್ವ ಪೊಲೀಸ್ ಠಾಣೆಯಲ್ಲಿ ಬ್ಯಾಂಕಿಗೆ ವಂಚನೆ ಮಾಡಿದ ಪ್ರಕರಣ ದಾಖಲಿಸಿದ್ದಾರೆ.

ಮೊದಲ ಪ್ರಕರಣದಲ್ಲಿ , ಕಟ್ಟಿಗೇರಿಯ ಸುಮಂಗಲ ರಾವ್, ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ, ಯಾವುದೇ ಭದ್ರತೆ ಒದಗಿಸದೆ ಅಡುಗೆ ವ್ಯವಹಾರಕ್ಕಾಗಿ ಕಾರ್ಪೊರೇಷನ್ ಬ್ಯಾಂಕಿನ ಕಟ್ಟಿಗೇರಿ ಶಾಖೆಯಿಂದ 10,00,000 ರೂ. ಸಾಲ ಪಡೆದಿದ್ದಾರೆ.

ಎರಡನೆಯ ನಿದರ್ಶನದಲ್ಲಿ, ಹೆರೂರ್ ಉಡುಪಿಯ ಜಯರಾಮ್ ಶೆಟ್ಟಿಯವರ ಪುತ್ರ ಸಂದೇಶ್ ಕುಮಾರ್ ಶೆಟ್ಟಿ ಅವರು ಫೆಬ್ರವರಿ 23, 2015 ರಂದು ಕಾರ್ಪೊರೇಷನ್ ಬ್ಯಾಂಕಿನ ಕಟ್ಟಿಗೇರಿ ಶಾಖೆಯಿಂದ ಅಂಗಡಿ ನಡೆಸಲು ಹತ್ತು ಲಕ್ಷ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದರು ಮತ್ತು ಈ ಸಾಲಕ್ಕೆ ಯಾವುದೇ ಭದ್ರತೆ ಒದಗಿಸಲಾಗಿಲ್ಲ ಮತ್ತು ಬ್ಯಾಂಕ್ ನಿಯಮಗಳು ಉಲ್ಲಂಘಿಸಲಾಗಿದೆ. ಮತ್ತೆ ಮಾರ್ಚ್ 19ರಂದು ಪುನಃ ಹತ್ತು ಲಕ್ಷ ರೂಪಾಯಿಗಳ ಸಾಲ ಪಡೆದಿದ್ದು ಸಾಲ ಪಡೆದುಕೊಳ್ಳುವಾಗ ಈ ಹಿಂದೆ ಪಡೆದುಕೊಂಡ ಸಾಲವನ್ನು ನಮೂದು ಮಾಡದೇ ನೇರವಾಗಿ ಹಣವನ್ನು ಪಡೆದು ಕೊಂಡಿದ್ದಾರೆ.

ಉಡುಪಿಯ ಬೈಲೂರಿನ ಚಂದ್ರಕಾಂತ್ ರಾವ್ ಅವರಿಗೆ ಭದ್ರತೆಗಳಿಲ್ಲದೆ ಕಟ್ಟಡ ನಿರ್ಮಾಣಕ್ಕಾಗಿ ಹತ್ತು ಲಕ್ಷ ರೂಪಾಯಿ ಸಾಲ ನೀಡಲಾಗಿದ್ದು ಈ ಸಾಲ ಮಂಜೂರು ಮಾಡುವಾಗ ಯಾವುದೇ ಆರ್ಥಿಕ ಆಧಾರಗಳನ್ನು ತೆಗೆದುಕೊಳ್ಳದೇ ಹಾಗೂ ಈ ಸಾಲಕ್ಕೆ ಯಾವುದೇ ಭದ್ರತೆ ತೆಗೆದುಕೊಳ್ಳದೆ ಬ್ಯಾಂಕಿನ ನಿಯಮಗಳನ್ನು ಪಾಲಿಸದೇ ಸದ್ರಿ ಮೊತ್ತದಲ್ಲಿ 3,50,000/- ರೂಪಾಯಿ ನೇರವಾಗಿ ಚಂದ್ರಕಾಂತ್ ರಾವ್ ಪಡೆದುಕೊಂಡಿದ್ದು, ಉಳಿದ ಹಣವನ್ನು ಆರೋಪಿಯು ಈ ಹಿಂದೆ ಪಡೆದುಕೊಂಡ ಹಳೆಯ ಸಾಲಕ್ಕೆ ಜಮೆ ಮಾಡಿ ಬ್ಯಾಂಕಿಗೆ ಮೋಸ ಮಾಡಿರುತ್ತಾರೆ.

ಜನರೇಟರ್ ಖರೀದಿಗೆ ಚಂದಕಾಂತ್ ರಾವ್ ಅವರಿಗೆ 4,80,000 ರೂ.ಗಳ ಮತ್ತೊಂದು ಸಾಲವನ್ನು ನೀಡಲಾಗಿದ್ದು, ಆದರೆ ಸಾಲದ ಮೊತ್ತವನ್ನು ನೇರವಾಗಿ ಕಂಪನಿಗೆ ರವಾನಿಸದೆ ಸಾಲಗಾರನಿಗೆ ನೀಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ ರವಿ ಆಚಾರಿ ಅವರಿಗೆ ಅಪಾರ್ಟ್ಮೆಂಟ್ ಖರೀದಿಸಲು 15 ಲಕ್ಷ ರೂಪಾಯಿ ಸಾಲವನ್ನು ಯಾವುದೇ ದಾಖಲೆ ಇಲ್ಲದೆ ನೀಡಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲಿ, ಬ್ಯಾಂಕಿನ ವ್ಯವಸ್ಥಾಪಕರಾದ ಶಾಂತಾ ಅವರು ಸಾಲಗಾರರೊಂದಿಗೆ ಸೇರಿಕೊಂಡು ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ರೀತಿ ಬ್ಯಾಂಕಿನ ಇನ್ನೋರ್ವ ಶಾಖಾ ವ್ಯವಸ್ಥಾಪಕರಾದ ಪಿ ಜಯರಾಮ್ ಅವರು ಕೂಡ ಮ್ಯಾಕ್ಷಿಮ್ ಮಾರ್ಸೆಲಿನ್, ಚಂದ್ರಕಾಂತ್ ರಾವ್ ಮತ್ತು ಸುಮಂಗಲಾ ರಾವ್ ಅವರಿಗೆ ಯಾವುದೇ ಭದ್ರತೆ ತೆಗೆದುಕೊಳ್ಳದೆ ಬ್ಯಾಂಕಿನ ನಿಯಮಗಳನ್ನು ಪಾಲಿಸದೇ ಸಾಲದ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಾಣಿ, ಹುಡ್ಕೋ ಕಾಲನಿ ಎಂಬವರಿಗೂ ಕೂಡ ಯಾವುದೇ ಬ್ಯಾಂಕಿನ ನಿಯಮಗಳನ್ನು ಪಾಲಿಸದೇ ಸಾಲ ಮಂಜೂರು ಮಾಡಲಾಗಿದೆ.

ಈ ಎಲ್ಲಾ ಪ್ರಕರಣಗಳಲ್ಲಿ, ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್, ಶಾಖೆ ವ್ಯವಸ್ಥಾಪಕರಾದ ಪಿ. ಜಯರಾಮ್ ಮತ್ತು ಶಾಂತಾ ಮತ್ತು ಸಾಲಗಾರರು ಸಹ ನಿಯಮಗಳನ್ನು ಉಲ್ಲಂಘಿಸಿ ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿತರ ವಿರುದ್ದ ಶಿರ್ವ ಪೊಲೀಸ್ ಠಾಣೆಯಲ್ಲಿ 406, 409, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love