ಏಜೆಂಟ್ ನಿಂದ ವಂಚನೆಗೊಳಗಾಗಿ ದಂಪತಿಗಳು: ನೆರವಿನ ಹಸ್ತ ಚಾಚಿದ ಇಂಡಿಯನ್ ಸೋಷಿಯಲ್ ಫಾರಂ

Spread the love

ಏಜೆಂಟ್ ನಿಂದ ವಂಚನೆಗೊಳಗಾಗಿ ದಂಪತಿಗಳು: ನೆರವಿನ ಹಸ್ತ ಚಾಚಿದ ಇಂಡಿಯನ್ ಸೋಷಿಯಲ್ ಫಾರಂ

ರಿಯಾದ್: ಸುಮಾರು ಮೂರು ತಿಂಗಳುಗಳ ಹಿಂದೆ ಹಲವು ಕನಸುಗಳನ್ನು ಇಟ್ಟುಕೊಂಡು,ಬಡತನ ಬೇಗೆಯನ್ನು ಸುಧಾರಿಸಿ ಕೊಳ್ಳುವ ಸಲುವಾಗಿ ಬೆಂಗಳೂರು ಮೂಲದ ಚಾಂದ್ ಪಾಶ ಮತ್ತು ಅವರ ಆಮಿನಾಬಿ ದಂಪತಿಗಳು ಏಜೆಂಟಿನ ಮಾತಿಗೆ ಮರುಳಾಗಿ ಸೌದಿ ಅರೇಬಿಯಾದ ಪ್ರಾಯೋಜಕನ ಮನೆಯಲ್ಲಿ ಖಾಸಗಿ ವಾಹನ ಚಾಲಕ ಮತ್ತು ಮನೆ ಕೆಲಸವನ್ನು ಮಾಡುವ ಸಲುವಾಗಿ ರಿಯಾದಿಗೆ ಬಂದಿದ್ದರು.

ಆದರೆ ದುರದೃಷ್ಟವಶಾತ್ ಇವರ ಪ್ರಯೋಜಕನು ಈ ದಂಪತಿಗಳಿಗೆ ಕೆಲಸ ನೀಡಲು ನಿರಾಕರಿಸಿ ,ಈಗ ನನಗೆ ನಿಮ್ಮಂಥ ಜನರ ಕೆಲಸದ ಅವಶ್ಯಕತೆ ಇಲ್ಲ ಎಂದು ಹೇಳಿ, ಇತ್ತ ವಾಸ್ತವ್ಯ ಕಾರ್ಡ್(ಇಕಾಮ)ನ್ನು ಮಾಡದೆ ,ಅತ್ತ ಪಾಸ್ ಪೊರ್ಟ್ ನೀಡದೆ. ಇವರ ಬಿಡುಗಡೆಗಾಗಿ ಸುಮಾರು 18 ಸಾವಿರ ರಿಯಾಲಿನ ಬೇಡಿಕೆ ಇಟ್ಟಿದ್ದನು. ಈ ವಿಚಾರವನ್ನು ತಿಳಿದು ದಿಗಿಲುಗೊಂಡ ದಂಪತಿಗಳು ಸ್ಥಳೀಯ ಏಜೆಂಟ್ ನನ್ನು ಸಂಪರ್ಕಿಸಿದಾಗ ಯಾವುದೇ ರೀತಿಯ ಸ್ಪಂದನೆ ನೀಡದ ಏಜೆಂಟನ್ನು ಇವರಿಗೆ ಮೊಸ ಮಾಡಿ ಸ್ವದೇಶಕ್ಕೆ ಪಲಾಯನ ಗೈದಿದ್ದಾನೆ .

ಹೀಗೆ ಯಾರು ಪರಿಚಯ ಇಲ್ಲದೆ ವಿದೇಶದಲ್ಲಿ ಕಂಗಾಲಾದ ದಂಪತಿಗಳು ರಂಜಾನ್ ತಿಂಗಳಲ್ಲಿ ತಿನ್ನಲು ಆಹಾರ ಮತ್ತು ಇರಲು ಮನೆ ಇಲ್ಲದೆ,ಸುಡುಬಿಸಿನಲ್ಲಿ ಅಲ್ಲಲ್ಲಿ ಬೇಡುತ್ತ ಬೀದಿಗಳಲ್ಲಿ ಅತ್ಯಂತ ಶೋಚನೀಯವಾಗಿ ದಿನಗಳನ್ನು ಕಳೆಯುತ್ತಿದ್ದರು. ಇವರ ದಯನೀಯ ಪರಿಸ್ಥಿತಿಯನ್ನು ಅರಿತ ಇಂಡಿಯನ್ ಸೋಷಿಯಲ್ ಫಾರಂ, ಕರ್ನಾಟಕ ರಿಯಾದ್ ಘಟಕವು ತಕ್ಷಣವೇ ಇಸ್ಮಾಯಿಲ್ ಮಂಗಳಪೇಟೆ, ನವೀದ್ ಕುಂದಾಪುರ ಮತ್ತು ಶಾಫಿ ವಾಮಾಂಜುರು ರವರ ನೇತ್ರತ್ವದ ತಂಡವನ್ನು ರಚಿಸಿ ಸದ್ರಿ ದಂಪತಿಗಳನ್ನು ಮುಖತಃ ಬೇಟಿಯಾಗಿ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡು ಆ ಕ್ಷಣವೆ ಅವರಿಗೆ ಬೇಕಾದಂತಹ ತಾತ್ಕಾಲಿಕ ಮನೆ ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಿಕೊಟ್ಟು ಅದಷ್ಟುಬೇಗ ಸಮಸ್ಯೆಯನ್ನು ಬಗೆಹರಿಸುದಾಗಿ ಭರವಸೆ ಕೊಟ್ಟು ಅವರಿಗೆ ಆತ್ಮವಿಶ್ವಾಸ ನೀಡಿದರು.

ಇವರನ್ನು ಸ್ವದೇಶಕ್ಕೆ ಕಳುಹಿಸಕೊಡುವ ಸಲುವಾಗಿ ಭಾರತಿಯ ರಾಯಭಾರಿಯನ್ನು ಸಂಪರ್ಕಿಸಿ ಬೇಕಾದಂತಹ ಅಗತ್ಯ ದಾಖಲೆಗಳನ್ನು ತಯಾರಿಸಲಾಯಿತು.ಈ ಸಂಧರ್ಭದಲ್ಲಿ ಪತಿ ಚಾಂದ್ ಪಾಶ ರವರ ದಾಖಲೆಯಲ್ಲಿ ಸ್ವಲ್ಪ ಸಮಸ್ಯೆ ಇದ್ದಕಾರಣ ಸದ್ಯಕ್ಕೆ ಕೇವಲ ಆಮೀನಾ ಬೀ ರವರನ್ನು ಭಾರತಕ್ಕೆ ಮರಳಿ ಕಳುಹಿಸಿ ಕೊಡಲು ಇಂಡಿಯನ್ ಸೋಷಿಯಲ್ ಪೋರಂ ಮತ್ತು ಸ್ಥಳಿಯ ದಾನಿಯಾದ ಮುಷ್ತಾಕ್ ಉಡುಪಿರವರ ನೆರವಿನೊಂದಿಗೆ ಸುಮಾರು ಮುವತ್ತು ಸಾವಿರ ರೂಪಾಯಿ ಗಳನ್ನು ಟಿಕೇಟಿಗಾಗಿ ಒಟ್ಟುಗೂಡಿಸಲಾಯಿತು.

ಅಂತಿಮವಾಗಿ ದಿನಾಂಕ 29-06- 2017 ರಂದು ಆಮೀನಾಬಿ ಯವರನ್ನು ರಿಯಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಕಳುಹಿಸಿ ಕೊಡಲಾಯಿತು. ಇಂಡಿಯನ್ ಸೋಷಿಯಲ್ ಫಾರಂನ ಪ್ರಯತ್ನದಿಂದ ಸ್ವದೇಶಕ್ಕೆ ಮರುಳಿದ ಅಮೀನಾಬಿಯವರನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯ ಕರ್ತರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿ ಕೊಂಡರು. ಅದೇ ರೀತಿ ಚಾಂದ್ ಪಾಷರವರನ್ನು ಕಳುಹಿಸಿಕೊಡುವ ಸಲುವಾಗಿ ಇಂಡಿಯನ್ ಸೋಷಿಯಲ್ ಫಾರಂನ ತಂಡವು ಸಕಲ ಸಿದ್ದತೆಯನ್ನು ನಡೆಸುತ್ತಿದೆ.

ಇಂಡಿಯನ್ ಸೋಷಿಯಲ್ ಫಾರಂನ ಸಹಾಯವನ್ನು ನೆನೆದು ದಂಪತಿಗಳು ಬಾವುಕರಾಗಿ ಧನ್ಯವಾದ ಗೈದಿದಾರೆ.


Spread the love