ಕಾಂಗ್ರೆಸಿಗೆ ನಗರಸಭಾಧ್ಯಕ್ಷರ ಮೈಕ್ ಮೇಲೆ ಇದ್ದ ಪ್ರೀತಿ ಸ್ವಪಕ್ಷೀಯ ಸದಸ್ಯೆ ಮೇಲೆ ಯಾಕಿಲ್ಲ ; ಯಶ್ಪಾಲ್ ಪ್ರಶ್ನೆ

Spread the love

ಕಾಂಗ್ರೆಸಿಗೆ ನಗರಸಭಾಧ್ಯಕ್ಷರ ಮೈಕ್ ಮೇಲೆ ಇದ್ದ ಪ್ರೀತಿ ಸ್ವಪಕ್ಷೀಯ ಸದಸ್ಯೆ ಮೇಲೆ ಯಾಕಿಲ್ಲ ; ಯಶ್ಪಾಲ್ ಪ್ರಶ್ನೆ

ಉಡುಪಿ: ಸ್ವಪಕ್ಷೀಯ ನಗರಸಭಾ ಸದಸ್ಯೆಯನ್ನು ಸಾರ್ವಜನಿಕವಾಗಿ ಅವಮಾನಿಸಿ  ಪೌರುಷ ಮೆರೆದ ಬಾಡಿಗೆ ಗೂಂಡಾಗಳಿಂದ ಸಭ್ಯತೆಯ ಪಾಠ ಹೇಳಿಸಿಕೊಳ್ಳುವ ದುಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ಉಡುಪಿ ನಗರಸಭೆಯ ವಿಪಕ್ಷ ಸದಸ್ಯರಾದ ಯಶ್ ಪಾಲ್ ಸುವರ್ಣ ಅವರು ಕಾಂಗ್ರೆಸಿಗರಿಗೆ ತಿರುಗೇಟು ನೀಡಿದ್ದಾರೆ.

ನಗರ ಸಭಾ ಅಧ್ಯಕ್ಷರ ಮೈಕ್ ಕಿತ್ತು ಕೊಂಡು ಬಿಜೆಪಿ ಸದಸ್ಯರು ಸಭೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಆದರೆ ಎರಡು ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಮಹಿಳಾ ಸದಸ್ಯೆಯೊಬ್ಬಳನ್ನು ಅದೇ ಪಕ್ಷದ ಕೆಲವು ಗೂಂಡಾಗಳು ಸಾಮಾನ್ಯ ಸಭೆಯಲ್ಲೇ ಎಳೆದಾಡಿ ದೈಹಿಕ ಹಲ್ಲೆ ನಡೆಸಿದಾಗ ಈ ಮಹಿಳಾ ಕಾಂಗ್ರೆಸ್ ಎಲ್ಲಿ ಹೋಗಿತ್ತು..? ಮಹಿಳಾ ಕಾಂಗ್ರೇಸಿಗೆ ಅಧ್ಯಕ್ಷರ ಮೈಕ್ ಮೇಲೆ ಇರುವಷ್ಟು ಕಾಳಜಿ ಓರ್ವ ಮಹಿಳಾ ಸದಸ್ಯೆಯ ಮಾನದ ಬಗ್ಗೆ ಯಾಕೆ ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಅಭಿವೃದ್ಧಿ ಮತ್ತು ದೂರಗಾಮಿ ಚಿಂತನೆಗೆ ಪರ್ಯಾಯ ಪದವಾಗಿರುವ ಕೀರ್ತಿಶೇಷ ಡಾ ವಿ.ಎಸ್ ಆಚಾರ್ಯರ ಗರಡಿಯಲ್ಲಿ ಪಳಗಿದ ಬಿಜೆಪಿ ಸದಸ್ಯರು ಯಾವತ್ತೂ ಅಭಿವೃದ್ಧಿಗೆ ಅಡ್ಡಗಾಲು ಹಾಕಿದ ಉದಾಹರಣೆ ಇಲ್ಲ‌. ಆದರೆ ಅಭಿವೃದ್ಧಿಯ ಹೆಸರಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕೆಲವೇ ತಿಂಗಳಲ್ಲಿ ಉಡುಪಿಯ ಜನತೆ ಉತ್ತರಿಸಲಿದ್ದಾರೆ.

ಉಡುಪಿ ನಗರಸಭೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಸತ್ತು ಹೋಗಿದ್ದು, ಅದು ಈಗ ಪರಮಭೃಷ್ಟರ ಕೂಪವಾಗಿ ಬಿಟ್ಟಿದೆ. ವಿಪಕ್ಷ ಸದಸ್ಯರ ಮಾತಿಗೆ ಕನಿಷ್ಟ ಬೆಲೆಯನ್ನೂ ಕೊಡದೆ ಅದ್ಯಕ್ಷೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಸಭೆಯ ಗಮನಕ್ಕೂ ತಾರದೆ ನಿರ್ಣಯಗಳನ್ನು ಮಂಜೂರು ಮಾಡಿಕೊಳ್ಳಲಾಗುತ್ತಿದೆ. ಮರಳು ಬಿಕ್ಕಟ್ಟು ಬಗೆ ಹರಿಸುವಂತೆ ಆಗ್ರಹಿಸಿ ಜನರ ಪರವಾಗಿ ಸತ್ಯಾಗ್ರಹ ಮಾಡಲು ನಮ್ಮ ಪಕ್ಷ ಮುಂದಾದಾಗ ನಾವು ಇಲ್ಲದ ಸಮಯ ನೋಡಿ ಹೇಡಿಗಳಂತೆ ಬಂದು ನಮ್ಮ ಪೆಂಡಾಲನ್ನು ಕಿತ್ತುಹಾಕುವ ಮೂಲಕ ರಾಜಕೀಯ ದ್ವೇಷ ಸಾಧಿಸುತ್ತಾರೆ. ಇಂತಹ ದುರಾಡಳಿತವನ್ನು ಉಡುಪಿ ಇತಿಹಾಸದಲ್ಲೇ ಕಂಡಿಲ್ಲ.

ಬಿಜೆಪಿ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲೇ ಅತ್ಯಂತ ಪ್ರತಿಷ್ಟಿತ ಸ್ಥಳಿಯಾಡಳಿತ ಸಂಸ್ಥೆ ಎಂಬ ಖ್ಯಾತಿ ಗಳಿಸಿದ್ದ ಉಡುಪಿ ನಗರಸಭೆಯ ಮಾನವನ್ನು ಈ ಕಾಂಗ್ರೆಸಿನ ಸದಸ್ಯರು ಸಂಪೂರ್ಣವಾಗಿ ಮಣ್ಣು ಪಾಲು ಮಾಡಿದ್ದಾರೆ. ಇವರ ಅಧಿಕಾರದ ಮದವನ್ನು ಇನ್ನು ಕೆಲವೇ ತಿಂಗಳಲ್ಲಿ ಉಡುಪಿಯ ಜನತೆ ಇಳಿಸಲಿದ್ದಾರೆ. ಎಂದು ಅವರು   ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.


Spread the love