ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ ಲಕ್ಷದೀಪೋತ್ಸವ – ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

Spread the love

ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನ ಲಕ್ಷದೀಪೋತ್ಸವ – ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ

ಕಾರ್ಕಳ: ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವೆಂಬರ್ 24 ರಿಂದ ಡಿಸೆಂಬರ್ 3 ರವರೆಗೆ ಲಕ್ಷದೀಪೋತ್ಸವ ನಡೆಯಲಿರುವ ಹಿನ್ನೆಲೆ, ರಥಬೀದಿಯಲ್ಲಿ ಉತ್ಸವಗಳು ನಡೆಯಲಿದ್ದು, ಜನಸಂದಣಿ ಉಂಟಾಗುವುದರಿಂದ ಡಿಸೆಂಬರ್ 1 ರಿಂದ 3 ರ ವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್ ವರೆಗೆ ರಥಬೀದಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ .ಕೆ ವಿದ್ಯಾ ಕುಮಾರಿ ಆದೇಶ ಹೊರಡಿಸಿರುತ್ತಾರೆ.

ಡಿ. 1 ರಂದು ಬಂಡಿಯಲ್ಲಿ ಗರುಡ ವಾಹನ ಉತ್ಸವ ಹಾಗೂ ಕೆರೆದೀಪ ನಡೆಯಲಿರುವುದರಿಂದ ಅಂದು ರಾತ್ರಿ 8 ಗಂಟೆಯಿಂದ 12 ರ ವರೆಗೆ ಘನ ವಾಹನಗಳು ಬಂಗ್ಲೆಗುಡ್ಡೆ ಯಿಂದ ಪುಲ್ಕೆರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡು ರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜಂಕ್ಷನ್ ನಿಂದ ಕಲ್ಲೊಟ್ಟೆ , ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಲಘು ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್ ನಿಂದ ಗಾಂಧಿ ಮೈದಾನ ವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮಾರ್ಗವಾಗಿ ಸಂಚರಿಸಬೇಕು.

ಡಿ. 2 ರಂದು ಲಕ್ಷ ದೀಪೋತ್ಸವ ಹಾಗೂ ವನ ಭೋಜನ ಉತ್ಸವ ನಡೆಯಲಿರುವುದರಿಂದ ಅಂದು ಬೆಳಗ್ಗೆ 10 ಗಂಟೆ ಯಿಂದ ಮರುದಿನ 6 ಗಂಟೆಯವರೆಗೆ ಮತ್ತು ಡಿ. 3 ರಂದು ಓಕುಳಿ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯುವುದರಿಂದ ಅಂದು ಸಂಜೆ 4 ಗಂಟೆಯಿಂದ ಮರುದಿನ ಬೆಳಗ್ಗೆ 4 ಗಂಟೆಯವರೆಗೆ ಘನ ವಾಹನಗಳು ಬಂಗ್ಲೆ ಗುಡ್ಡೆ ಯಿಂದ ಹಿರಿಯಂಗಡಿ, ಪುಲ್ಕೆರಿ ಮಾರ್ಗವಾಗಿ, ಕಾರ್ಕಳದಿಂದ ಜೋಡು ರಸ್ತೆ ಕಡೆಗೆ ಸಂಚರಿಸುವ ಬಸ್ ಗಳು ತಾಲೂಕು ಜಂಕ್ಷನ್ ನಿಂದ ಕಲ್ಲೊಟ್ಟೆ, ಮಾರ್ಕೆಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಲಘು ವಾಹನಗಳು ಸ್ಟೇಟ್ ಬ್ಯಾಂಕ್ ಜಂಕ್ಷನ್ ನಿಂದ ಗಾಂಧಿ ಮೈದಾನ, ಪೋಸ್ಟ್ ಆಫೀಸ್ ಮಾರ್ಗವಾಗಿ ಕಾಮಧೇನು ಹೋಟೆಲ್ ಜಂಕ್ಷನ್ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


Spread the love