ಕೃಷಿಕರಿಗೆ ಸಂಬಂಧಿಸಿದ 3 ಮಸೂದೆ ಅಂಗೀಕಾರ, ರೈತರ ರಕ್ಷಣೆ, ಕೃಷಿ ಸುಧಾರಣೆಗೆ ದಾರಿ- ಸಂಸದೆ ಶೋಭಾ ಕರಂದ್ಲಾಜೆ

Spread the love

ಕೃಷಿಕರಿಗೆ ಸಂಬಂಧಿಸಿದ 3 ಮಸೂದೆ ಅಂಗೀಕಾರ, ರೈತರ ರಕ್ಷಣೆ, ಕೃಷಿ ಸುಧಾರಣೆಗೆ ದಾರಿ- ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ‘ಕೃಷಿಕರಿಗೆ ಸಂಬಂಧಿ ಸಿದ ಮೂರು ಮಸೂದೆಗಳು ಲೋಕಸಭೆ ಅಧಿವೇಶನದಲ್ಲಿ ಅಂಗೀಕಾರವಾಗಿವೆ. ರೈತರ ರಕ್ಷಣೆ, ಕೃಷಿ ಕ್ಷೇತ್ರದ ಸುಧಾರಣೆ ಈ ಇವುಗಳ ಉದ್ದೇಶವಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಈ ಕುರಿತು ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು ‘ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳನ್ನು ಅಂಗೀಕರಿಸಲಾಗಿದೆ. ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಕೃಷಿಯಿಂದ ವಿಮುಖರಾಗಿ, ನಗರಗಳಿಗೆ ವಲಸೆ ಹೋಗಿರುವಂಥ ಹಲವಾರು ನಿದರ್ಶನಗಳಿವೆ. ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳಿವೆ. ಈ ಮಸೂದೆಗಳಿಂದ ಇಂಥ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ರೈತರಿಗೆ ಸ್ವಾತಂತ್ರ್ಯ ತಂದುಕೊಡಲಿವೆ ಎಂದರು

‘ವಿರೋಧ ಪಕ್ಷಗಳು, ವಿವಿಧ ಸಂಘಟನೆಗಳು ಮಸೂದೆಗಳನ್ನು ವಿರೋಧಿಸುತ್ತಿರುವುದರಲ್ಲಿ ಹುರಳಿಲ್ಲ. ಎಪಿಎಂಸಿ ಮುಚ್ಚುವುದಿಲ್ಲ. ಮಸೂದೆ ಜಾರಿಗೊಳಿಸುವುದರಿಂದ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಸಿಗುತ್ತದೆ. ಎಪಿಎಂಸಿಯಲ್ಲಿ ಆನ್ಲೈನ್ ಮಾರ್ಕೆಟಿಂಗ್ ವ್ಯವಸ್ಥೆ ಉತ್ತೇಜಿಸಲಾಗುತ್ತದೆ. ರೈತರು ಉತ್ಪನ್ನ ಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎಂಬ ಕಡ್ಡಾಯ ಇಲ್ಲ, ಯಾವುದೇ ವ್ಯಾಪಾರಸ್ಥರಿಗೆ ಮಾರಾಟ ಮಾಡಬಹುದು. ಮಧ್ಯವರ್ತಿಗಳ ಹಾವಳಿ ಕಡಿವಾಣ ಬೀಳುತ್ತದೆ’ ಎಂದು ವಿವರಿಸಿದರು.

‘ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ವ್ಯಾಪ್ತಿಯಲ್ಲಿ ಆಲೂಗಡ್ಡೆ, ಎಣ್ಣೆ ಕಾಳು, ಆಹಾರಧಾನ್ಯಗಳು ಒಳಪಡು ತ್ತವೆ. ಸರಕುಗಳ ಆನ್ಲೈನ್ನಲ್ಲಿ ಮಾರಾಟಕ್ಕೆ ಈಗ ಅವಕಾಶವಾಗುತ್ತದೆ’ ಎಂದರು.

‘ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆ ಜಾರಿಯಿಂದ ಒಪ್ಪಂದ ಕೃಷಿಗೆ ಎಡೆಯಾಗುತ್ತದೆ. ಕಾರ್ಪೊರೇಟ್ ಸಂಸ್ಥೆ ಸಾಥ್ನಲ್ಲಿ ಒಟ್ಟಾಗಿ ಬೆಳೆ ಬೆಳೆಯುವ ವಿಧಾನ ಇದು. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮುಂದೆಯೂ ಇರುತ್ತದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love