ಕೊರೊನಾ ವಿಪತ್ತು : ಗೋಶಾಲೆಗಳಿಗೆ 200 ಕೋಟಿ ರೂ ಪ್ಯಾಕೇಜ್ ನೀಡಲು ಕೇಂದ್ರಕ್ಕೆ ಪೇಜಾವರ ಶ್ರೀ ಪತ್ರ

Spread the love

ಕೊರೊನಾ ವಿಪತ್ತು : ಗೋಶಾಲೆಗಳಿಗೆ 200 ಕೋಟಿ ರೂ ಪ್ಯಾಕೇಜ್ ನೀಡಲು ಕೇಂದ್ರಕ್ಕೆ ಪೇಜಾವರ ಶ್ರೀ ಪತ್ರ

ಉಡುಪಿ: ಕೊರೊನಾ ವಿಪತ್ತಿನಿಂದ ದೇಶದ ನೂರಾರು ಗೋಶಾಲೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು ತುರ್ತಾಗಿ ಕನಿಷ್ಠ 200 ಕೋಟಿ ರೂಗಳ ನಿರ್ವಹಣಾ ನಿಧಿಯನ್ನು ನೀಡಬೇಕೆಂದು ಒತ್ತಾಯಿಸಿ ಉಡುಪಿ ಗೋವರ್ಧನ ಗಿರಿ ಟ್ರಸ್ಟ್ ( ರಿ) ಅಧ್ಯಕ್ಷ , ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿದ್ದಾರೆ .

ಕಳೆದ ಆರೇಳು ತಿಂಗಳುಗಳಿಂದ ಕೊರೊನಾದಿಂದಾಗಿ ವಿವಿಧ ಕ್ಷೇತ್ರಗಳು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಂತೆಯೇ ದೇಶದ ಗೋಶಾಲೆಗಳೂ ತೊಂದರೆಗೊಳಗಾಗಿವೆ .

ಗೋಶಾಲೆಗಳ ನಿರ್ವಹಣೆ ಅತ್ಯಂತ ವೆಚ್ಚದಾಯಕವಾಗಿದೆ .ಉಡುಪಿಯಲ್ಲಿ ನೀಲಾವರ ಕೊಡವೂರು ಹೆಬ್ರಿಯಲ್ಲಿ ನಾವು ನಡರಸುತ್ತಿರುವ ಗೋಶಾಲೆಗಳಿಗೇ ಮಾಸಿಕ ಅಂದಾಜು 35 ಲಕ್ಷ ರೂ ನಿರ್ವಹಣಾ ವೆಚ್ಚ ಇದೆ . ಅದೇ ರೀತಿಯಲ್ಲಿ ಇದಕ್ಕೊ ದೊಡ್ಡ ಅಥವಾ ಸಣ್ಣ ಮಟ್ಟದ ಗೋಶಾಲೆಗಳನ್ನು ಅನೇಕ ಮಠ ದೇವಳ ಹಾಗೂ ಮಹನೀಯರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕರ್ತವ್ಯದ ದೃಷ್ಟಿಯಿಂದ ನಡೆಸುತ್ತಾ ಲಕ್ಷಾಂತರ ಗೋವುಗಳನ್ನು ಪೋಷಿಸುತ್ತಿದ್ದಾರೆ . ಧರ್ಮಾಭಿಮಾನಿಗಳ ಸಹಕಾರದಿಂದ ಇದು ಸಾಧ್ಯವಾಗುತ್ತಿತ್ತು . ಆದರೆ ಪ್ರಸ್ತುತ ಭಕ್ತರ ದೇಣಿಗೆಯೂ ಅಷ್ಟಾಗಿ ಬರುತ್ತಿಲ್ಲ ; ಮೇಲಾಗಿ ಎರಡು ತಿಂಗಳಿನಿಂದ ದೇಶದ ಕೆಲವೆಡೆಗಳಲ್ಲಿ ವಿಪರೀತ ಮಳೆಯೂ ಸುರಿಯುತ್ತಿರುವುದರಿಂದ ಮೇವಿನ ಸಂಗ್ರಹಣೆಯೂ ದುಸ್ತರವಾಗುತ್ತಿದೆ .

ಆದ್ದರಿಂದ ಕೊರೊನಾ ವಿಪತ್ತನ್ನು ಎದುರಿಸಲು ಬೇರೆ ಬೇರೆ ಕ್ಷೇತ್ರಗಳಿಗೆ ಸರಕಾರವು ಆರ್ಥಿಕ ಪ್ಯಾಕೇಜ್ ಘೋಷಿಸಿದಂತೆ ಗೋಶಾಲೆಗಳಿಗೂ ಕನಿಷ್ಠ 200 ಕೋಟಿಯಾದರೂ ತುರ್ತಾಗಿ ನೀಡಿ ಗೋರಕ್ಷಣೆಯ ಕೈಂಕರ್ಯದಲ್ಲಿ ಕೈಜೋಡಿಸಬೇಕು . ಕೇವಲ ಧರ್ಮಮಾತ್ರವಲ್ಲದೇ ಆರ್ಥಿಕತೆಯ ಹಿತದೃಷ್ಟಿಯಿಂದಲೂ ಗೋರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಬೇಕೆಂದು ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ .


Spread the love