ಕೋಟ ಹಾಗೂ ಚೌಟ ಪರ ಮಂಗಳೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ

Spread the love

ಕೋಟ ಹಾಗೂ ಚೌಟ ಪರ ಮಂಗಳೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ

ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಗಳ ಪರ ಮತಯಾಚನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ನಗರದಲ್ಲಿ ರವಿವಾರ ಜನಸಾಗರದ ನಡುವೆ ರಾತ್ರಿ ಹೊತ್ತು ರೋಡ್ ಶೋ ನಡೆಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎ.26ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ರೋಡ್ ಶೋ ಮೂಲಕ ಮತ ಬೇಟೆಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರನ್ನು ಬಿಜೆಪಿಯ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು.

ಮೈಸೂರಿನಿಂದ ನೇರವಾಗಿ ಮಂಗಳೂರು ವಿಮಾನದ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಗರದ ಲೇಡಿಹಿಲ್ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತಕ್ಕೆ ವಿಶೇಷ ವಾಹನದಲ್ಲಿ ಆಗಮಿಸಿದ್ದರು. ನಾರಾಯಣ ಗುರು ವೃತ್ತದ ಬಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ರೋಡ್ ಶೋಗಾಗಿ ಸಿದ್ಧಪಡಿಸಲಾಗಿದ್ದ ವಾಹನ ಏರಿದರು.

ಪ್ರಧಾನಿ ನರೇಂದ್ರ ಮೋದಿಯವರು ಕೈಯ್ಯಲ್ಲಿ ಕಮಲದ ಚಿಹ್ನೆಯನ್ನು ಹಿಡಿದು ರಸ್ತೆಯುದ್ದಕ್ಕೂ ಸೇರಿದ್ದ ಜನರತ್ತ ಕೈಬೀಸುತ್ತಾ ಸಾಗಿದರು. ಅವರ ಜತೆ ದ.ಕ. ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿದ್ದರು.

ರೋಡ್ ಶೋನ ದಾರಿಯುದ್ದಕ್ಕೂ ಡಬಲ್ ಬ್ಯಾರಿಕೇಡ್ ಗಳ ಅಳವಡಿಸಿ ಭದ್ರತೆ ಒದಗಿಸಲಾಗಿದ್ದರೆ, ಅಲ್ಲಲ್ಲಿ ವೇದಿಕೆಯನ್ನು ಬಿಜೆಪಿ ವತಿಯಿಂದ ರಚನೆ ಮಾಡಲಾಗಿತ್ತು. ವೇದಿಕೆಯಲ್ಲಿ ತುಳುನಾಡಿನ ಸಂಸ್ಕೃತಿ ಯನ್ನು ಬಿಂಬಿಸುವ ಹುಲಿವೇಷ, ಕಂಬಳದ ಪ್ರತಿಕೃತಿ, ಯಕ್ಷಗಾನ, ದೈವಾರಾಧನೆ ವೀಡಿಯೋಗಳನ್ನೂ ಪ್ರದರ್ಶಿಸಲಾಯಿತು. ಮೋದಿ ಮುಖವಾಡ, ತಲೆಯಲ್ಲಿ ಕಮಲದ ಚಿನ್ಹೆಯ ಕೇಸರಿ ಟೋಪಿ, ಹೆಗಲಲ್ಲಿ ಕೇಸರಿ ಶಾಲು ಹೊತ್ತ ಅಭಿಮಾನಿಗಳು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ರೋಡ್ ಶೋನ ರಸ್ತೆಯುದ್ದಕ್ಕೂ ನೆರೆದಿದ್ದರು.


Spread the love

Leave a Reply