ನರ್ಮ್ ಬಸ್ ನಿಂತರೆ ಉಡುಪಿ ಜಿಲ್ಲಾ ಬಂದ್ ಎಚ್ಚರಿಕೆ: ತುಳುನಾಡ ಒಕ್ಕೂಟ

Spread the love

ನರ್ಮ್ ಬಸ್ ನಿಂತರೆ ಉಡುಪಿ ಜಿಲ್ಲಾ ಬಂದ್ ಎಚ್ಚರಿಕೆ: ತುಳುನಾಡ ಒಕ್ಕೂಟ

ಉಡುಪಿ: ಜಿಲ್ಲೆಯ ಖಾಸಗಿ ಬಸ್ಸಿನ ಮ್ಹಾಲಕರು ತಮ್ಮ ಸ್ವಾರ್ಥಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯದ ದಿಕ್ಕು ತಪ್ಪಿಸಿ ಭ್ರಷ್ಟ ರೀತಿಯಲ್ಲಿ ಸಾರಿಗೆ ಅಧಿಕಾರಿಗಳ ಒಳಸಂಚಿನೊಂದಿಗೆ ಜಿಲ್ಲೆಯಲ್ಲಿ ಜನಸ್ನೇಹಿಯಾಗಿದ್ದ ನರ್ಮ್ ಬಸ್ಸುಗಳ ಸಂಚಾರಕ್ಕೆ ತಡೆಯೊಡ್ಡಿದ್ದು, ಜಿಲ್ಲೆಯಲ್ಲಿ ನರ್ಮ್ ಬಸ್ ಸಂಚಾರ ನಿಂತರೆ ತುಳುನಾಡ ಒಕ್ಕೂಟ ಉಡುಪಿ ಜಿಲ್ಲೆ ಬಂದ್ ನಡೆಸಿ ಪ್ರತಿಭಟಿಸಲಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನ್ ದಾಸ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಶೆ.90ರಷ್ಟು ನರ್ಮ್ ಹಾಗೂ ಸರಕಾರಿ ಬಸ್ಸುಗಳು ಕಡಿಮೆ ದರ ಹಾಗೂ ವಿವಿಧ ಸೌಲಭ್ಯಗಳೊಂದಿಗೆ ಶಾಂತಿಯುತವಾಗಿ ಸಂಚರಿಸುತ್ತಿದ್ದರೂ ಉಡುಪಿ ಜಿಲ್ಲೆ ಮಾತ್ರ ಪಕ್ಷಪಾತ ಧೋರಣೆ ಯಾಕೆ ಎಂದು ಪ್ರಶ್ನಿಸಿರುವ ಅವರು ಖಾಸಗಿ ಬಸ್ಸಿನವರು ಜಿಲ್ಲೆಯಲ್ಲಿ ತಾವು ಆಡಿದ್ದೆ ಆಟ ಎಂಬ ರೀತಿಯಲ್ಲಿ ನರ್ಮ್ ಬಸ್ಸುಗಳಿಗೆ ತಡೆಯೊಡ್ಡಿ ನಿರಂಕುಶ ವರ್ತನೆ ತೋರುತ್ತಿರುವುದು ಸರಿಯಲ್ಲ.

ಒಂದು ವೇಳೆ ನರ್ಮ್ ಬಸ್ಸುಗಳ ಸಂಚಾರ ನಿಲ್ಲಿಸಿದರೆ ತುಳು ಒಕ್ಕೂಟ ವಿವಿಧ ಸಂಘಟನೆಗಳೊಂದಿಗೆ ಸೇರಿ ಉಡುಪಿ ಜಿಲ್ಲಾ ಬಂದ್ ನಡೆಸಬೇಕಾದಿತು ಎಂದು ಎಚ್ಚರಿಸಿರುವ ಶೆಟ್ಟಿ, ಖಾಸಗಿ ಬಸ್ ನಷ್ಟದಲ್ಲಿದ್ದ ಸರಕಾರಿ ಬಸ್ಸುಗಳಿಗೆ ಅವಕಾಶ ಮಾಡಿಕೊಡಲಿ, ಹೊರತು ಕಾನೂನು ಲೋಪಗಳ ಲಾಭ ಪಡೆದು ಜನಸಾಮಾನ್ಯರಿಗೆ, ಗ್ರಾಮೀಣ ಭಾಗದ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮಾಧ್ಯಮ ಹೇಳಿಕೆಯಲ್ಲಿ ಹೇಳಿದ್ದಾರೆ.


Spread the love