ಮಂಗಳೂರು: ಮೀನು ಸಾಗಾಟ ವಾಹನಗಳು ತ್ಯಾಜ್ಯ ನೀರನ್ನು ರಸ್ತೆಗೆ ಚೆಲ್ಲಿದರೆ ಕಠಿಣ ಕ್ರಮ
ಮಂಗಳೂರು: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಮೀನುಗಳನ್ನು ಸಾಗಟ ಮಾಡುವ ವಾಹನಗಳಲ್ಲಿ ತ್ಯಾಜ್ಯ/ಕಲುಷಿತ ನೀರು ರಸ್ತೆಯಲ್ಲಿ ಚೆಲ್ಲುವುದರಿಂದ ದುರ್ಗಂಧ ಮತ್ತು ವಾಯು ಮಾಲಿನ್ಯದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದಲ್ಲದೇ ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇದರ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸೂಚನೆಯನ್ನು ನೀಡಲು, ಪೊಲೀಸ್ ಆಯುಕ್ತರ ಸೂಚನೆಯಂತೆ ದಿನಾಂಕ 14-10-2025 ರಂದು ಪೊಲೀಸ್ ಆಯುಕ್ತರ ಸಭಾಂಗಣದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಸಂಬಂಧಪಟ್ಟ ಇಲಾಖೆಗಳಾದ ಸಾರಿಗೆ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮೀನುಗಾರಿಗೆ ಇಲಾಖೆಯ ಅಧಿಕಾರಿಗಳನ್ನು ಸೇರಿಸಿ. ಮೀನು ಸರಬರಾಜು ಗುತ್ತಿಗೆದಾರರು. ಮೀನು ಸಾಗಿಸುವ ವಾಹನದ ಮಾಲೀಕರು, ಮೀನು ಸರಬರಾಜು ವಿವಿಧ ಸಂಘದ ಪದಾಧಿಕಾರಿಗಳು, ಸರಬರಾಜು ಗುತ್ತಿಗೆದಾರರ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ನಗರದ ದಕ್ಕೆ/ಬಂದರಿನಿಂದ ಅಥವಾ ಮೀನು ಹಿಡಿಯುವ ಸ್ಥಳದಿಂದ ಫಿಶ್ ಮಿಲ್ ಕಾರ್ಖಾನೆಗೆ ಅಥವಾ ಫಿಶ್ ಮಾರ್ಕೆಟ್ ಗೆ ಮೀನನ್ನು ಸಾಗಣೆ ಮಾಡುವ ವಾಹನಗಳು ಮುಂಜಾಗ್ರತೆ ವಹಿಸಿ, ಕಲುಷಿತ ನೀರು ಸಂಗ್ರಹವಾಗಲು ವಾಹನದಲ್ಲಿ ಹೆಚ್ಚುವರಿ ಟ್ಯಾಂಕ್ ಗಳನ್ನು ಅಳವಡಿಸಿ. ಹಸಿ ಮೀನಿನ ದುರ್ವಾಸನಯುಕ್ತ ಮತ್ತು ಕಲುಷಿತ ನೀರನ್ನು ರಸ್ತೆಯಲ್ಲಿ ಸೋರಿ ಹೋಗದಂತೆ ಸಾಗಟ ಮಾಡುವಂತೆಯೂ, ಕಲುಷಿತ ನೀರನ್ನು ಬಿಡದಂತೆಯೂ ಸೂಕ್ತ ಸೂಚನೆಯನ್ನು ನೀಡಲಾಯಿತು. ಮೀನು ಸಾಗಟ ವಾಹನಗಳು ಯಾವುದೇ ಕಾರಣಕ್ಕೂ ಫಿಶ್ ಕಾರ್ಖಾನೆಯ ಬಳಿಯಾಗಲೀ, ಬಂದರಿನಲ್ಲಿಯಾಗಲೀ ಮತ್ತು ಸಾಗುವ ಮಾರ್ಗಗಳಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸದೇ ನಿಗದಿ ಪಡಿಸಿದ ವಾಹನ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡುವಂತೆ ತಿಳಿಸಲಾಯಿತು. ಸದ್ರಿ ವಾಹನಗಳನ್ನು ರಸ್ತೆಯಲ್ಲಿ ಸ್ವಚ್ಛಗೊಳಿಸದೇ ಫಿಶ್ ಮಿಲ್ ನಲ್ಲಿಯೇ ವಾಹನವನ್ನು ಸ್ವಚ್ಚಗೊಳಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಹಸಿ ಮೀನು ಸಾಗಟ ವಾಹನಗಳು ನೀಡಿರುವ ಸೂಚನೆಗಳನ್ನು ಪಾಲನೆ ಮಾಡದೇ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ವಾಹನ ಚಾಲಕ/ಮಾಲಕರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸೂಚನೆ ನೀಡಲಾಯಿತು. ಇತರೆ ರಾಜ್ಯಗಳಿಂದ ಬರುವಂತಹ ಸದ್ರಿ ವಾಹನಗಳ ಮೇಲೆಯೂ ಸಹ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಯಿತು. ಸಂಬಂಧಪಟ್ಟ ಇಲಾಖೆಯವರು ಅವರವರ ವ್ಯಾಪ್ತಿಗೆ ಬರುವ ನಿಯಮಗಳ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿಯನ್ನು ಮೂಡಿಸಿರುತ್ತಾರೆ.
ಈ ಸಭೆಯು ಡಿಸಿಪಿ ಶ್ರೀ ಕೆ.ರವಿಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಭೆಯಲ್ಲಿ ಸಂಚಾರ ಉಪ ವಿಭಾಗದ ಎಸಿಪಿ ನಚ್ಚಾ ಫಾರೂಕಿ. ಆರ್.ಟಿ.ಓ ಶ್ರೀಧರ್.ಕೆ.ಮಲ್ನಾಡ್. ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಯಾದ ಲಕ್ಷ್ಮೀ ಕಾಂತ್ ಮತ್ತು ಮಂಗಳೂರು ಬಂದರು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಶ್ರೀ ಸಿದ್ದಯ್ಯ ರವರು ಉಪಸ್ಥಿತರಿದ್ದರು.