ಮಠದಲ್ಲಿ ಇಫ್ತಾರ್ ಮತ್ತು ನಮಾಜ್ ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ; ಪೇಜಾವರ ಸ್ವಾಮೀಜಿ

Spread the love

ಮಠದಲ್ಲಿ ಇಫ್ತಾರ್ ಮತ್ತು ನಮಾಜ್ ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ; ಪೇಜಾವರ ಸ್ವಾಮೀಜಿ

ಉಡುಪಿ: ಕೃಷ್ಣ ಮಠದಲ್ಲಿ ಆಯೋಜಿಸಿದ ಇಫ್ತಾರ್ ಮತ್ತು ನಮಾಜ್ ಕಾರ್ಯಕ್ರಮವನ್ನು ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ

ಭಾನುವಾರ ಶ್ರೀರಾಮ ಸೇನೆ ರಾಜ್ಯದ್ಯಂತ ಹಮ್ಮಿಕೊಂಡ ಪ್ರತಿಭಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು ಶ್ರೀಕೃಷ್ಣಮಠದಲ್ಲಿ ಈದ್ ಪ್ರಯುಕ್ತ ಹಮ್ಮಿಕೊಂಡ ಭೋಜನಕೂಟದಿಂದ ಕೃಷ್ಣಮಠದ ಪಾವಿತ್ರ್ಯತೆಗೆ ಭಂಗವಾಗಿಲ್ಲ, ಹಿಂದೂ ಧರ್ಮಕ್ಕೂ ದಕ್ಕೆಯಾಗಿಲ್ಲ. ಈ ಬಗ್ಗೆ ಎಷ್ಟು ಸ್ಪಷ್ಟನೆ ಕೊಟ್ಟರು ಕೆಲವರಿಗೆ ಅರ್ಥವಾಗುತಿಲ್ಲ ಎಂದು ಪೇಜಾವರ ಶ್ರೀಗಳು ಖೇದಪಟ್ಟರು.

ಪ್ರತಿಭಟನೆ ಹೆಸರಲ್ಲಿ ಸುಮ್ಮನೆ ಗದ್ದಲ ಮಾಡುತ್ತಿರುವುದು ಸರಿಯಲ್ಲ, ಇದು ಪರಧರ್ಮ ದ್ವೇಷದ ಪರಮಾವಧಿಯಾಗಿದೆ ಎಂದು ಕಳವಳಪಟ್ಟ ಅವರು ಮನುಷ್ಯನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇನ್ನೊಂದು ಧರ್ಮದ ಬಗ್ಗೆ ಧ್ವೇಷ ಇರಬಾರದು ಎಂದು ಅಭಿಪ್ರಾಯಪಟ್ಟರು.

ಮಠದ ಪಾವಿತ್ರ್ಯತೆ ಹಳಾಗಿದೆ ಗೋಮೂತ್ರದ ಮೂಲಕ ಮಠವನ್ನು ಶುದ್ದಿಕರಿಸಲು ಹಿಂದುಪರ ಸಂಘಟನೆಗಳು ಒತ್ತಾಯಿಸುತ್ತಿದೆ ಎಂಬ ಪ್ರೆಶ್ನೆಗೆ ಉತ್ತರಿಸಿದ ಶ್ರೀಗಳು ಏನಾಗಿದೆ ಎಂದು ಮಠ ಶುದ್ದಿ ಮಾಡಬೇಕು, ದೇವರ ಪ್ರಾರ್ಥನೆ ಮಾಡಿದರೆ ಇದರಲ್ಲಿ ದೊಡ್ಡ ತಪ್ಪೇನು ಇದರಲ್ಲಿ ಧರ್ಮಕ್ಕೆ ಅಪಚಾರವಾಗಿಲ್ಲ, ಹಿಂದೂ ಧರ್ಮದ ಬಗ್ಗೆ ಒಳ್ಳೆಯ ಅಭಿಪ್ರಾಯವೆ ಬೆಳೆಯುತ್ತದೆ ಎಂದರು . ಅವರ ಸಂಪ್ರದಾಯದಂತೆ ಪ್ರಾರ್ಥನೆ ಬಳಿಕ ಭೋಜನ ಎಂದಿದ್ದಾರೆ, ಆ ಮನವಿಯಂತೆ ಕೃಷ್ಣ ದೇವಳದಿಂದ ಸಾಕಷ್ಟು ಹೊರಗಿರುವ ಸಾರ್ವಜನಿಕ ಅನ್ನಬ್ರಹ್ಮಸ್ಥಳದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಯಾವ ಧರ್ಮಶಾಸ್ತ್ರದ ವಿರೋಧವೂ ಇಲ್ಲ, ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಮನ್ವಯದಂತೆ, ಪರ ಧರ್ಮದ ಬಗೆಗೂ ಸೌಹಾರ್ದ ಇದೆ ಎಂದರು.

ರಾಜ್ಯದಂತ ನಡೆಯುತ್ತಿರುವ ಪ್ರತಿಭಟನೆಯಿಂದ ನಾನೇನು ವಿಚಲಿತನಾಗಿಲ್ಲ ನನ್ನ ದೈನಂದಿನ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿರಾಳನಾಗಿದ್ಧೇನೆ ಎಂದರು.

ಮುತಾಲಿಕ್ ನೀಡಿದ ಹಿಂಸಾತ್ಮಕ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ನನ್ನ ದೋರಣೆಗೆ ನಾನು ಬದ್ದವಾಗಿದ್ದು, ಧರ್ಮದ ಪರ ಸರ್ವಧರ್ಮ ಸಹಿಷ್ಣುತೆ ನನ್ನ ನಿಲುವು, ಈ ಬಗ್ಗೆ ಹೆಚ್ಚು ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದರು ಇನ್ನೂ ಪ್ರತಿಕ್ರಿಯಿಸುತ್ತ ಹೋದಂತೆ ಘರ್ಷಣೆ ಹೆಚ್ಚುತ್ತದೆ ಇದಕ್ಕೆ ನಾನು ಅವಕಾಶ ಮಾಡಿಕೊಡುವುದಿಲ್ಲ ಎಂದರು.


Spread the love