ಯೆನಪೋಯ ಆಸ್ಪತ್ರೆ ಶವಾಗಾರದ ಸಿಬಂದಿ ನಿರ್ಲಕ್ಷ್ಯ – ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Spread the love

ಯೆನಪೋಯ ಆಸ್ಪತ್ರೆ ಶವಾಗಾರದ ಸಿಬಂದಿ ನಿರ್ಲಕ್ಷ್ಯ – ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: ನಗರದ ಯೆನಪೋಯ ಆಸ್ಪತ್ರೆಯಲ್ಲಿನ ಶವಾಗಾರದ ಸಿಬಂದಿಗಳ ನಿರ್ಲಕ್ಷ್ಯದ ಪರಿಣಾಮ ಎರಡು ದಿನಗಳ ಹಿಂದೆ ವಿದ್ಯುತ್ ಆಘಾತದಿಂದ ಮೃತಪಟ್ಟ 26 ವರ್ಷ ಪ್ರಾಯದ ವಿಲ್ಸನ್ ಅವರ ಮೃತದೇಹ ಶವಾಗಾರದಲ್ಲಿ ಕೊಳೆತ ಘಟನೆ ವರದಿಯಾಗಿದೆ.

ತೊಕ್ಕೊಟ್ಟು ಸಮೀಪದ ನಿತ್ಯಾಧರ್ ಸೈಟ್ ನಿವಾಸಿ ವಿಲ್ಸನ್ ಫೆರ್ನಾಂಡಿಸ್ ಎಂಬವರು ಶುಕ್ರವಾರ ವಿದ್ಯುತ್ ಅವಘಡದಲ್ಲಿ ಮೃತಪಟ್ಟಿದ್ದರು. ಬಳಿಕ ವಿಲ್ಸನ್ರ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ರವಿವಾರ ಮೃತದೇಹದ ಅಂತ್ಯಕ್ರಿಯೆ ನಡೆಯಲು ಸಿದ್ಧತೆ ನಡೆದಿತ್ತು. ಅದರಂತೆ ಕುಟುಂಬಸ್ಥರು ಮೃತದೇಹ ಕೊಂಡೊಯ್ಯಲು ಆಸ್ಪತ್ರೆಯ ಶವಾಗಾರಕ್ಕೆ ತೆರಳಿದ ವೇಳೆ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.

ಘಟನೆಯ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಕುಟುಂಬದ ಸದಸ್ಯ ಜೋಸ್ಟನ್, “ಅಕ್ಟೋಬರ್ 25 ರಂದು ವಿಲ್ಸನ್ ಫರ್ನಾಂಡಿಸ್ ವಿದ್ಯುದಾಘಾತದಿಂದ ನಿಧನರಾದರು. ಕಲ್ಲಾಪುವಿನಲ್ಲಿ ಘಟನೆ ಸಂಭವಿಸಿದ ಕೂಡಲೇ ನಾವು ವಿಲ್ಸನ್ನನ್ನು ಯೆನೆಪೋಯಾ ಆಸ್ಪತ್ರೆಗೆ ಕರೆದೊಯ್ದೆವು ಆದರೆ ಅವರು ದಾರಿಯಲ್ಲಿ ಸಾವನ್ನಪ್ಪಿದರು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಅದೇ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಇಂದು ಮಧ್ಯಾಹ್ನ 1:30 ಕ್ಕೆ ನಾವು ಅಂತ್ಯಕ್ರಿಯೆ ವಿಧಿಗಳಿಗಾಗಿ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದೇವು.

“ನಾವು ಶವಾಗಾರದ ಬಳಿ ಹೋದಾಗ ಆ ಪ್ರದೇಶವು ನೊಣಗಳಿಂದ ತುಂಬಿತ್ತ ಮತ್ತು ಗಬ್ಬು ನಾರುತ್ತಿತ್ತು. ನಮ್ಮ ಮನವಿಯನ್ನು ಕೇಳಲು ಆಸ್ಪತ್ರೆಯಿಂದ ಯಾರೂ ಇರಲಿಲ್ಲ. ನಂತರ ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದರು. ”

ಇದೇ ವೇಳೆ ಅಸ್ಪತ್ರೆಯ ಮೂಲಗಳ ಪ್ರಕಾರ, “ಅಕ್ಟೋಬರ್ 25 ರಂದು ವಿಲ್ಸನ್ ಅವರ ದೇಹವನ್ನು ನಮ್ಮ ಶವಾಗಾರದಲ್ಲಿ ಇಡಲಾಗಿತ್ತು. ಭಾರಿ ಮಳೆಯಿಂದಾಗಿ, ಶಾರ್ಟ್ ಸರ್ಕ್ಯೂಟ್ ಆಗಿ ಫ್ರೀಜರ್ ಸಂಪರ್ಕ ಕಡಿತಗೊಂಡಿರಬಹುದು ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಫ್ರೀಜರ್ನ ಸ್ಥಿತಿಯನ್ನು ಪರೀಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಕುಟುಂಬ ಸದಸ್ಯರು ದೂರು ನೀಡಿದಾಗ ಮಾತ್ರ ನಾವು ಈ ಬಗ್ಗೆ ತಿಳಿದುಕೊಂಡೆವು. ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದರಿಂದ ಆಕ್ರೋಶಗೊಂಡ ವಿಲ್ಸನ್ರ ಪೋಷಕರು, ಹಿತೈಷಿಗಳು ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಶಾಸಕ ಯು.ಟಿ. ಖಾದರ್ ಭೇಟಿ ನೀಡಿ, ಅಹವಾಲು ಆಲಿಸಿದರು.


Spread the love