ರಹಿಮಾನ್ ಹತ್ಯೆ : ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ವಿಚಾರ ಹರಿಬಿಡಲಾಗುತ್ತಿದೆ – ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಬಂಟ್ವಾಳದ ಕೊಳತ್ತಮಜಲು ನಲ್ಲಿ ನಡೆದ ಅಬ್ದುಲ್ ರಹಿಮಾನ್ ಅವರ ಹತ್ಯೆ ಕೋಮು ದ್ವೇಷ ಹಾಗೂ ವೈಷಮ್ಯದಿಂದ ಕೂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮೇ 28 ರಂದು ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ವೇಳೆ ಹೇಳಿಕೆ ನೀಡಿದ್ದರು.. ಆದರೆ ಸಚಿವರ ಹೇಳಿಕೆಯನ್ನು ತಿರುಚಿ ಸುಳ್ಳು ವರದಿಗಳನ್ನ ಹರಿಬಿಡಲಾಗುತ್ತಿದೆ. ವೈಯಕ್ತಿಕ ದ್ವೇಷದಿಂದ ಅಬ್ದುಲ್ ರಹಿಮಾನ್ ಅವರ ಹತ್ಯೆಯಾಗಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ ಎಂದು ತಪ್ಪು ಮಾಹಿತಿಯನ್ನ ನೀಡಲಾಗುತ್ತಿದೆ. ಈ ಮೂಲಕ ಸ್ಪಷ್ಟಪಡಿಸುವುದೇನೆಂದರೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಮ್ಮ ಹೇಳಿಕೆಯಲ್ಲಿ ಏಲ್ಲಿಯೂ ವೈಯಕ್ತಿಕ ಎಂಬ ಶಬ್ದವನ್ನೇ ಬಳಸಿಲ್ಲ.
ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಅವರು ದಿನೇಶ್ ಗುಂಡೂರಾವ್ ಅವರ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ವೈಯಕ್ತಿಕ ದ್ಷೇಷದಿಂದ ಅಬ್ದುಲ್ ರಹಿಮಾನ್ ಅವರ ಕೊಲೆ ಆಗಿದೆ ಎಂದು ಏಲ್ಲಿಯಾದರೂ ಸಚಿವರು ಹೇಳಿದ್ದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಲಿ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಸವಾಲ್ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು, ದ್ವೇಷದ, ವೈಷಮ್ಯದ ಕೊಲೆಗಳು ನಡೆಯುತ್ತಿವೆ. ಇದು ಸರಿಯಲ್ಲ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಿದೆ. ಕೋಮು ಸೌಹಾರ್ದತೆ ಮೂಲಕ ಎಲ್ಲರು ಸಹಬಾಳ್ವೆ ನಡೆಸಬೇಕು ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ಮನವಿ ಮಾಡಿದ್ದರು..
ದುಷ್ಕೃತ್ಯ ನಡೆಸುವ ಕಿಡಿಗೆಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಚಿವ ದಿನೇಶ್ ಗುಂಡೂರಾವ್ ಅವರು ಈ ಹಿಂದೆಯೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ರಹಿಮಾನ್ ಅವರ ಹತ್ಯೆ ನಡೆದ ಮಾಹಿತಿ ಸಿಕ್ಕ ತಕ್ಷಣ DG&IGP ಹಾಗೂ ADGP ಕಾನೂನು ಸುವ್ಯವಸ್ಥೆ, ದಕ್ಷಿಣ ಕನ್ನಡ SP ಅವರಿಗೆ ದೂರವಾಣಿ ಮೂಲಕ ಮಾತನಾಡಿ, ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾದ್ದರೂ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಿದ್ದರು. ಪ್ರಕರಣದ ವಿಚಾರದಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಿದ್ದು, ಪೊಲೀಸರ ಕಾರ್ಯದಲ್ಲಿ ಸಚಿವರು ಪ್ರಭಾವ ಬೀರುವಂತಹ ಯಾವುದೇ ಹಸ್ತಕ್ಷೇಪ ಮಾಡಿಲ್ಲ.. ಅಶ್ರಫ್, ಹಾಗೂ ಸುಹಾಸ್ ಶೆಟ್ಟಿ ಅವರ ಹತ್ಯೆಗೆ ಕಾರಣರಾದವರನ್ನ ಬಂಧಿಸಲಾಗಿದೆ. ಅಬ್ದುಲ್ ರಹಿಮಾನ್ ಅವರ ಹತ್ಯೆಗೈದವರ ವಿರುದ್ಧ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ ನೆಲೆಸುವುದು ಮುಖ್ಯ. ತಪ್ಪು ಮಾಹಿತಿಗಳನ್ನ ರವಾನಿಸುವ ಮೂಲಕ ಕೋಮು ಸೌಹಾರ್ಧತೆಗೆ ಭಂಗ ತರುವುದು ಸರಿಯಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.