ರಾಜ್ಯದಲ್ಲಿ ಕಾಲಮಿತಿಯಲ್ಲಿ 4 ಲಕ್ಷ ಮನೆಗಳ ನಿರ್ಮಾಣ – ವಸತಿ ಸಚಿವ ಸೋಮಣ್ಣ

Spread the love

ರಾಜ್ಯದಲ್ಲಿ ಕಾಲಮಿತಿಯಲ್ಲಿ 4 ಲಕ್ಷ ಮನೆಗಳ ನಿರ್ಮಾಣ – ವಸತಿ ಸಚಿವ ಸೋಮಣ್ಣ

ಉಡುಪಿ : ರಾಜ್ಯದಲ್ಲಿ 2 ವರ್ಷಗಳ ಕಾಲಮಿತಿಯಲ್ಲಿ 4 ಲಕ್ಷ ಬಡವರಿಗೆ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ರಾಜ್ಯದಲ್ಲಿನ ಯಾವುದೇ ಕುಟುಂಬ ವಸತಿ ರಹಿತವಾಗದಂತೆ ಪ್ರತಿಯೊಬ್ಬರಿಗೂ ಸೂರು ಒದಗಿಸಲು ಸರ್ಕಾರ ಬದ್ದವಾಗಿದೆ ಎಂದು ರಾಜ್ಯದ ವಸತಿ ಸಚಿವ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಅವರು ಬುಧವಾರ, ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಬಬ್ಬುಸ್ವಾಮಿ ಲೇಔಟ್ ನಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು (ನಗರ)(ಜಿ+3) ಮಾದರಿಯ 460 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಈ ವರ್ಷ 43000 ಮನೆಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸಿದ್ದು, ಈಗಾಗಲೇ 39000 ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಕೊಳೆಗೇರಿಯ ವಸತಿ ಯೋಜನೆಗೆ ಈ ಹಿಂದೆ ಇದ್ದ ಆದಾಯದ ಮಿತಿಯನ್ನು 75000 ರೂ. ಗಳಿಂದ 3 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ ಎಂದ ಸಚಿವರು, ರಾಜೀವ್ ಗಾಂಧೀ ವಸತಿ ನಿಗಮದಿಂದ ವಸತಿ ಯೋಜನೆಯ ಫಲಾನುಭವಿಗಳಿಗೆ ಬಿಡುಗಡೆ ಮಾಡುತ್ತಿದ್ದ ಅನುದಾನವನ್ನು, ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಸಿಇಓಗಳು, ಮತ್ತು ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದ್ದು, ರಾಜ್ಯವನ್ನು ವಸತಿ ರಹಿತರ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.

ಉಡುಪಿಯಲ್ಲಿ ಪ್ರಸ್ತುತ ನಿರ್ಮಾಣ ಮಾಡುತ್ತಿರುವ 460 ಮನೆಗಳ ನಿರ್ಮಾಣ ಕಾರ್ಯವನ್ನು ಅಗತ್ಯ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ 1000 ಮನೆಗಳಿಗೆ ವಿಸ್ತರಿಸಿ, ಅಗತ್ಯ ಅನುದಾನ ಮತ್ತು ಅನುಮೋದನೆ ನೀಡಲಾಗುವುದು ಎಂದ ಸಚಿವರು, ವಸತಿ ನಿರ್ಮಾಣ ಕಾರ್ಯದಲ್ಲಿ ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 2022 ರ ವೇಳೆಗೆ ಸರ್ವರಿಗೂ ಸೂರು ದೊರೆಯಬೇಕು ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಯಾಗಿದ್ದು, ರಾಜ್ಯದಲ್ಲೂ ಸಹ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ, ಸ್ವಂತ ಮನೆ ಎನ್ನುವುದು ವ್ಯಕ್ತಿಯೊಬ್ಬನ ಆತ್ಮಗೌರವ ಹೆಚ್ಚಿಸಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ರಘುಪತಿ ಭಟ್, ಪ್ರಸ್ತುತ ಇಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನ ಜೊತೆಗೆ, ಉಡುಪಿ ನಗರಸಭೆಯಿಂದ ಮನೆ ನಿರ್ಮಾಣದ ಒಟ್ಟು ವೆಚ್ಚದ ಶೇ.10 ರ ಮೊತ್ತವನ್ನು ಭರಿಸಲಾಗುತ್ತಿದ್ದು, ಉಳಿದ ಮೊತ್ತಕ್ಕೆ ಬ್ಯಾಂಕ್ ಆಫ್ ಬರೋಡಾ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ 30 ವರ್ಷಗಳ ಅವಧಿಗೆ ಫಲಾನುಭವಿಗಳಿಗೆ ಸಾಲದ ವ್ಯವಸ್ಥೆ ಮಾಡಲಾಗಿದೆ. 2021 ರ ಮೇ ಒಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿ.ಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸ್ಥಳೀಯ ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿ ಆಯುಕ್ತ ಶಿವಪ್ರಸಾದ್, ಪೌರಾಯುಕ್ತ ಆನಂದ ಕಲ್ಲೋಳಿಕರ್, ಬ್ಯಾಂಕ್ ಆಫ್ ಬರೋಡಾದ ಮೆನೇಜರ್ ರವೀಂದ್ರ ರೈ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿಯ ತಾಂತ್ರಿಕ ಅಧಿಕಾರಿ ಬಾಲರಾಜ್ ಸ್ವಾಗತಿಸಿದರು, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.


Spread the love