ಲೋಕಸಭಾ ಚುನಾವಣೆ: ಇಂದಿನಿಂದ ಅಧಿಸೂಚನೆ ಪ್ರಕಟ – ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

Spread the love

ಲೋಕಸಭಾ ಚುನಾವಣೆ: ಇಂದಿನಿಂದ ಅಧಿಸೂಚನೆ ಪ್ರಕಟ – ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

 

ಮಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿ 17-ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮಾ.28ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು.

ಅವರು ಮಾ.27ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಏ.5ರಂದು ನಾಮಪತ್ರ ಪರಿಶೀಲನೆ, ಏ.8ರಂದು ನಾಪಪತ್ರ ವಾಪಸ್ ಪಡೆಯಲು ಕೊನೆಯ ದಿನ. ಏ.26ರಂದು ಚುನಾವಣಾ ಮತದಾನ ನಡೆಯಲಿದೆ. ಮಾ. 29 ಹಾಗೂ 31 ರಜಾದಿನ ಹೊರತುಪಡಿಸಿ ಮಾ.28ರಿಂದ ಏ.4ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಬಹುದು. ಚುನಾವಣಾಧಿಕಾರಿಯ ಅನುಪಸ್ಥಿತಿಯಲ್ಲಿ ಹೆಚ್ಚುವರಿ ಚುನಾವಣಾಧಿಕಾರಿ ಮೂಲಕ ನಾಮಪತ್ರ ಸಲ್ಲಿಸಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಮೂರನೇ ಮಹಡಿಯ ಕೋರ್ಟ್ ಹಾಲ್‍ನಲ್ಲಿ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿ ಕಚೇರಿ ಗೇಟ್ ಒಳಗೆ ಪ್ರವೇಶಿಸಲು ಅಭ್ಯರ್ಥಿಯ ಜತೆಗೆ ಮೂರು ವಾಹನಗಳಿಗೆ ಮಾತ್ರ ಅವಕಾಶವಿದೆ. ಚುನಾವಣಾಧಿಕಾರಿ ಕಚೇರಿಯೊಳಗೆ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸಹಿತ ಐದು ಮಂದಿಗೆ ಮಾತ್ರ ಅವಕಾಶ. ಅಭ್ಯರ್ಥಿ ಸೂಚಕನ ಮೂಲಕವೂ ನಾಮಪತ್ರ ಸಲ್ಲಿಸಬಹುದು. ನಾಮಪತ್ರದ ಜತೆ ಅಭ್ಯರ್ಥಿ ಫಾರಂ 26ರಲ್ಲಿ ತನ್ನ ವೈಯಕ್ತಿಕ ವಿವರವನ್ನು ಅಫಿದವಿತ್‍ನೊಂದಿಗೆ ಒದಗಿಸಬೇಕು. ಯಾವುದೇ ಕಾಲಂ ಖಾಲಿ ಬಿಡುವಂತಿಲ್ಲ. ಜತೆಗೆ ಯಾವುದೇ ಸರ್ಕಾರಿ ಲೆಕ್ಕಶೀರ್ಷಿಕೆ ಬಾಕಿ ಇಲ್ಲ ಎಂಬ ಪ್ರಮಾಣಪತ್ರವನ್ನು ನೀಡಬೇಕು. ಅಭ್ಯರ್ಥಿ ನಾಮಪತ್ರ ಸಲ್ಲಿಕೆಯ ಸಮಯದಿಂದೇ ಆತನ ಚುನಾವಣಾ ಖರ್ಚು ವೆಚ್ಚಗಳು ಲೆಕ್ಕಾಚಾರ ಆರಂಭವಾಗಲಿದ್ದು, ಒಂದೇ ಬ್ಯಾಕ್ ಖಾತೆಯ ಮೂಲಕ ಎಲ್ಲಾ ರೀತಿಯ ಆರ್ಥಿಕ ವ್ಯವಹಾರವನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಅನುಮತಿ ಪಡೆದು ಮೆರವಣಿಗೆ ನಡೆಸಬಹುದು. ಮೆರವಣಿಗೆಯ ವೆಚ್ಚವೂ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆಯಾಗುತ್ತದೆ. ಅಭ್ಯರ್ಥಿ ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ ಕ್ಷೇತ್ರದ ಒಬ್ಬ ಮತದಾರ ಸೂಚಕನಾಗಿ ಸಹಿ ಮಾಡಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ, ಪಕ್ಷೇತರ ಸ್ಪರ್ಧಿಸುತ್ತಿದ್ದರೆ ಕ್ಷೇತ್ರದ 10 ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ. 77.9ರಷ್ಟು ಮತದಾನವಾಗಿದೆ. ಆದರೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ರಾಜ್ಯದ ಶೇಕಡಾವಾರು (ಶೇ.68)ಕ್ಕಿಂತಲೂ ಕಡಿಮೆ ಇದೆ. ಈ ರೀತಿ ಒಟ್ಟು 57 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ವಿಶೇಷ ಸ್ವೀಪ್ ಕಾರ್ಯಕ್ರಮದ ಮೂಲಕ ಈ ಬಾರಿ ಮತದಾರರನ್ನು ಮತ ಚಲಾವಣೆಗೆ ಪೆÇ್ರೀತ್ಸಾಹಿಸಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು 14 ಮಂದಿ ಜಿಲ್ಲಾ ಐಕಾನ್‍ಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಐದು ಸಖಿ ಮತಗಟ್ಟೆ ಸಹಿತ 9 ಮಾದರಿ ಮತಗಟ್ಟೆ ಇರಲಿದೆ ಎಂದು ತಿಳಿಸಿದರು.

ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಸಲ್ಲಿಸಬೇಕಾದ ದಾಖಲೆಗಳು ಇಂತಿವೆ:

ಸಂಪೂರ್ಣವಾಗಿ ಭರ್ತಿ ಮಾಡಿದ ನಾಮಪತ್ರ, ಅಫಿದಾವಿತ್ ಎಲ್ಲಾ ಕಾಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿರಬೇಕು, ದೃಢೀಕರಣ ಪತ್ರ, ಪ್ರತಿಜ್ಞಾ ವಿಧಿ (ವೋಥ್ ಆಫ್ ಅಫಾರ್ ಮೇಶನ್), ನಮೂನೆ -26 ರಲ್ಲಿ 8ii (b) ಪ್ರಕರಣದಲ್ಲಿ ನೋ ಡ್ಯೂ ಪ್ರಮಾಣಪತ್ರ, 4 ಭಾವಚಿತ್ರಗಳು (ಹಿಂಭಾಗ ಬಿಳಿಯ ಬಣ್ಣವಿರಬೇಕು)

ಮಾದರಿ ಸಹಿ, ಮತಪತ್ರದಲ್ಲಿ ಮುದ್ರಿಸಬೇಕಾಗಿರುವ ಮಾದರಿ ಹೆಸರಿನ ವಿವರ ಮತ್ತು ಚಿಹ್ನೆ, ನೇಮಕ ಮಾಡಲಾಗುವ ಚುನಾವಣಾ ಏಜೆಂಟ್ ವಿವರಗಳು, ಫೆÇೀಟೋ ಮತ್ತು ಮತದಾರರ ಗುರುತಿನ ಚೀಟಿಯನ್ನು ಫಾರಂ 8 ರಲ್ಲಿ ತುಂಬಿರಬೇಕು. ನೂತನ ಬ್ಯಾಂಕ್ ಖಾತೆ ಹಾಗೂ ಅದರ ಪಾಸ್ ಪುಸ್ತಕದ ಪ್ರತಿ, ಪಾನ್ ಕಾರ್ಡ್, ಅಧೀಕೃತ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ, ಸಾಮಾನ್ಯ ಅಭ್ಯರ್ಥಿಗೆ 25,000 ರೂ. ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಯವರಿಗೆ 12,500 ರೂ. ಹಾಗೂ ಜಾತಿ ಪ್ರಮಾಣ ಪತ್ರ, ವೆಬ್‍ಸೈಟ್ ವಿಳಾಸ, ಅನುಬಂಧ 49 ರಲ್ಲಿ ಚುನಾವಣಾ ವೆಚ್ಚದ ನಿರ್ವಹಣೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


Spread the love