ಸೀಲ್ ಡೌನ್ ನೆಪದಲ್ಲಿ ಲಂಚದ ಬೇಡಿಕೆಯಿಡುವ ಅಧಿಕಾರಿಗಳ ಮಾಹಿತಿ ನೀಡಿ ; ವಿಶ್ವಾಸ್ ಅಮೀನ್

Spread the love

ಸೀಲ್ ಡೌನ್ ನೆಪದಲ್ಲಿ  ಲಂಚದ ಬೇಡಿಕೆಯಿಡುವ ಅಧಿಕಾರಿಗಳ ಮಾಹಿತಿ ನೀಡಿ ; ವಿಶ್ವಾಸ್ ಅಮೀನ್

ಉಡುಪಿ: ಜಿಲ್ಲಾ ಯುವ ಕಾಂಗ್ರೆಸ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡುವಂತೆ ಉಡುಪಿ ಜಿಲ್ಲಾ ಬಿಜೆಪಿ ಉಪಾದ್ಯಕ್ಷ ಶ್ರೀಶ ನಾಯಕ್ ಟ್ವೀಟ್ ಮಾಡಿದ್ದು, ಜಿಲ್ಲೆಯ ವ್ಯಾಪಾರಗಳಿಲ್ಲ ಲಂಚದ ಬೇಡಿಕೆಯಿಡುವ ಅಧಿಕಾರಿಗಳ ಮಾಹಿತಿ ನೀಡಿ, ವ್ಯಾಪಾರಿಗಳ ಪರವಾಗಿ ನಾವಿದ್ದೇವೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್.ವಿ.ಅಮೀನ್ ಭರವಸೆ ನೀಡಿದ್ದಾರೆ.

ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಉಡುಪಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿರುವುದರ ಬಗ್ಗೆ ಕಳೆದ ಹಲವಾರು ದಿನಗಳಿಂದ ಯುವ ಕಾಂಗ್ರೆಸ್ ಆರೋಪ ಮಾಡುತ್ತಲೇ ಬಂದಿದೆ. ಸ್ಬರ್ಣಾ ನದಿಯ ಮರಳುಗಾರಿಕೆ ಇರಬಹುದು, ಖಾಸಗಿ ಬಸ್ ದರ ಹೆಚ್ಚು ಮಾಡಿರುವುದು, ಕೊರಾನ ಹಗರಣ, ಸಿಮೆಂಟ್ ಹಗರಣ ಈ ಎಲ್ಲಾ ವಿಚಾರವಾಗಿ ನಾವು ಮಾಡಿರುವ ಆರೋಪಗಳಿಗೆ ಈಗ ಸ್ವತಃ ಬಿಜೆಪಿ ಪಕ್ಷದ ಜಿಲ್ಲಾ ಉಪಾದ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್ ಟ್ವೀಟ್ ಮಾಡುವ ಮೂಲಕ ಭ್ರಷ್ಟಾಚಾರದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಸೀಲ್ಡೌನ್ ಮಾಡಿಸುವ ವಿಚಾರದಲ್ಲಿ ಜಿಲ್ಲೆಯ ವ್ಯಾಪಾರಿಗಳನ್ನು ಅಧಿಕಾರಿಗಳು ಲಂಚ ಕೇಳಿ ಸುಲಿಗೆ ಮಾಡುತ್ತಿರುವುದರ ಬಗ್ಗೆ ಆಡಳಿತ ಪಕ್ಷದವರೇ ಆರೋಪ ಮಾಡುತ್ತಾರೆ.

ಒಬ್ಬ ಆಡಳಿತ ಪಕ್ಷದ ಪದಾಧಿಕಾರಿಯೇ ಈ ರೀತಿ ಸ್ವತಃ ತಮ್ಮದೇ ಸರ್ಕಾರದ ವಿರುದ್ದ ಟ್ವೀಟ್ ಮಾಡಿರುವುದು ಬಿಜೆಪಿ ಸರ್ಕಾರ ಹೇಗೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಾಗಿಲ್ಲ,

ಒಂದು ಕೈಯಿಂದ ಯಾವತ್ತೂ ಚಪ್ಪಾಳೆ ಹೊಡೆಯಲು ಸಾದ್ಯವಿಲ್ಲ, ಕೇವಲ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರೆ ಅದನ್ನು ನಂಬಲು ಉಡುಪಿಯ ಜನರು ಮೂರ್ಖರಲ್ಲ.

ನಮ್ಮದು ಬುದ್ದಿವಂತರ ಜಿಲ್ಲೆ, ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಹೇಗೆ ಸಾದ್ಯವಿಲ್ಲವೋ ಅದೇ ರೀತಿ ಕೇವಲ ಅಧಿಕಾರಿಗಳು ಮಾತ್ರಾ ಭ್ರಷ್ಟಾಚಾರದಲ್ಲಿ ತೊಡಗಿರಲು ಹೇಗೆ ಸಾದ್ಯ..? ಜಿಲ್ಲೆಯಲ್ಲಿ ಐದು ಐದು ಜನ ಬಿಜೆಪಿ ಶಾಸಕರಿದ್ದರೂ ಈ ಜಿಲ್ಲೆಯ ಅಧಿಕಾರಿಗಳಿಗೆ ಅವರ ಭಯವಿಲ್ಲವೇ…? ಅಧಿಕಾರಿಗಳು ಆಡಳಿತ ಪಕ್ಷದ ಶಾಸಕರನ್ನೂ ಕಡೆಗಣಿಸಿ ವ್ಯಾಪಾರಿಗಳ ಸುಲಿಗೆಯಲ್ಲಿ ತೊಡಗಿದ್ದಾರೆಯೇ…? ಅಥವಾ ನಿಮ್ಮ ಸಹಮತ ಸಹಕಾರ ಇದ್ದೇ ಈ ರೀತಿಯ ಭ್ರಷ್ಟಾಚಾರ ಜಿಲ್ಲೆಯಲ್ಲಿ ನಡೆಯುತ್ತಿದೆಯೇ…? ಈ ಬಗ್ಗೆ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯ ಶಾಸಕರು ಉತ್ತರವನ್ನು ನೀಡಬೇಕು.

ಜಿಲ್ಲೆಯ ಉಸ್ತುವಾರಿ ಸಚಿವರೂ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರು ಗಲಭೆಯಲ್ಲಿ ಹಾನಿಗೊಳಗಾದ ಆಸ್ತಿಪಾಸ್ತಿಗಳನ್ನು ಗಲಭೆಯಲ್ಲಿ ಭಾಗಿಯಾದವರಿಂದನೇ ವಸೂಲಿ ಮಾಡಲಾಗುವುದು ಎನ್ನುತ್ತಾರೆ….!!

ಅದೇ ಮಂಗಳೂರಿಗೆ ಬಂದು ಕೋಮು ಗಲಭೆಗಳಿಗೆ ಪ್ರಚೋದನೆ ನೀಡಿದ ಹಿಂದೂ ಸಂಘಟನೆಗಳ ಮುಖಂಡರ ಎಲ್ಲಾ ಕೇಸುಗಳನ್ನು ಹಿಂಪಡೆಯಲಾಗುವುದು ಎನ್ನುತ್ತಾರೆ…!!

ಗೃಹ ಸಚಿವರು ಕಾನೂನು ಪ್ರಕಾರ ಜನರೊಂದಿಗೆ ನಡೆದುಕೊಳ್ಳುತ್ತಾರೋ ಅಥವಾ ಕೋಮು ಆಧಾರಿತವಾಗಿ ಜನರೊಂದಿಗೆ ನಡೆದುಕೊಳ್ಳುತ್ತಾರೆಯೇ ಎನ್ನುವದನ್ನು ಅವರು ಜನರಿಗೆ ತಿಳಿಸಬೇಕು.

ಬಿಜೆಪಿ ಶಾಸಕರಾದಿಯಾಗಿ ಮಂತ್ರಿಗಳಿಗೆ ಜನರ ಜೀವನದ ಬಗ್ಗೆ ಚಿಂತೆಯಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸಿಲ್ಲ, ಕೋಮು ಗಲಭೆ ಮಾಡುತ್ತಾ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸ್ಪಂದನೆ ನೀಡಲು ಸಾದ್ಯವಾಗುತ್ತಿದೆ..

ಶ್ರೀಶ ನಾಯಕ್ ಅವರು ಭ್ರಷ್ಟಾಚಾರದ ಕುರಿತು ಮಾಡಿರುವ ಟ್ವೀಟ್ ಹಾಗೂ ಗೃಹ ಸಚಿವರು ಮಂಗಳೂರಿನಲ್ಲಿ ಹಿಂದುತ್ವದ ಮುಖವಾಡ ತೊಟ್ಟಿರುವ ಸಮಾಜಘಾತುಕ ಗೂಂಡಗಳಿಗೆ ಕೇಸ್ ವಾಪಾಸ್ ಪಡೆಯುವ ಬಗ್ಗೆ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಮಾಡಲು ಮಾನ್ಯ ಮುಖ್ಯಮಂತ್ರಿಗಳು ತಕ್ಷಣ ಆದೇಶ ನೀಡಬೇಕು.

ಇನ್ನು ಮುಂದೆ ವ್ಯಾಪಾರಗಳಲ್ಲಿ ಲಂಚದ ಬೇಡಿಕೆಯನ್ನಿಡುವ ಅಧಿಕಾರಿಗಳ ಮಾಹಿತಿಯನ್ನು ನಮಗೆ ನೀಡಿ, ನಿಮ್ಮ ಜೊತೆ ಯುವ ಕಾಂಗ್ರೆಸ್ ಸದಾ ಇರುತ್ತದೆ ಎನ್ನುವ ಭರವಸೆಯನ್ನು ಜಿಲ್ಲೆಯ ವ್ಯಾಪಾರಿಗಳಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ನೆಲೆಯಲ್ಲಿ ನಾನು ಮನವಿಯನ್ನು ಮಾಡುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ,


Spread the love