ಹಡಿಲು ಗದ್ದೆ ಬೇಸಾಯ ಮಾಡಿ ಬೆಳೆಯನ್ನು ಅನಾಥಾಶ್ರಮಕ್ಕೆ ದಾನ ನೀಡಿದ ಅಘೋರೇಶ್ವರ ಕಲಾರಂಗ

Spread the love

ಹಡಿಲು ಗದ್ದೆ ಬೇಸಾಯ ಮಾಡಿ ಬೆಳೆಯನ್ನು ಅನಾಥಾಶ್ರಮಕ್ಕೆ ನೀಡಿದ ಅಘೋರೇಶ್ವರ ಕಲಾರಂಗ

ಉಡುಪಿ: ಜಗತ್ತಿನಲ್ಲಿ ಶ್ರೇಷ್ಟವಾದ ದಾನ ಅನ್ನದಾನ. ಅಂತಹ ಶ್ರೇಷ್ಟವಾದ ಅನ್ನದಾನ ಮಾಡುವುದೇ ಒಂದು ಪುಣ್ಯದ ಕೆಲಸ. ಮನುಷ್ಯನನ್ನು ಅನ್ನದಾನದಿಂದ ಹೊರತುಪಡಿಸಿ ಬೇರೆ ಯಾವುದರಿಂದಲೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಹಣ, ಸಂಪತ್ತು ಎಷ್ಟೇ ಇದ್ದರೂ ಮತ್ತಷ್ಟು ಬೇಕೆನ್ನುವ ಆಸೆ ಇರುತ್ತದೆ. ಆದರೆ ಆತನಿಗೆ ಅನ್ನ ಬಡಿಸಿದರೆ ಹೊಟ್ಟೆ ತುಂಬಿದ ತಕ್ಷಣ ಸಾಕು, ತೃಪ್ತಿಯಾಯಿತು ಎನ್ನುತ್ತಾನೆ. ಅಂತಹ ಒಂದು ಸತ್ಕಾರ್ಯವನ್ನು ಮಾಡಿದ ಕಲಾರಂಗವು ವಿಶಿಷ್ಟ ಸಾಧನೆಯನ್ನು ಮಾಡಿದೆ. ಅದರಲ್ಲಿಯೂ ಯುವಕರೇ ಮುಂದೆ ನಿಂತು ಖಾಲಿ ಹಡಿಲು ಬಿದ್ದ ಗದ್ದೆಯನ್ನು ಗುರುತಿಸಿ, ಅದರಲ್ಲಿ ಬೇಸಾಯ ಮಾಡಿ, ಬೆಳೆದ ಬೆಳೆಯನ್ನು ಅನಾಥಾಶ್ರಮಕ್ಕೆ ನೀಡಿರುವುದು ನಿಜಕ್ಕೂ ಶಾಘನೀಯ ಸಮಾಜಮುಖಿ ಕಾರ್ಯವಾಗಿದೆ ಎಂಬುದಾಗಿ ಡಾ|| ಪಾದೇಕಲ್ಲು ವಿಷ್ಣುಭಟ್ಟ, ನಿವೃತ್ತ ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಆತ್ರಾಡಿ ರವರು ಹೇಳಿದರು.

ಅವರು ಶ್ರೀ ಅಘೋರೇಶ್ವರ ಕಲಾರಂಗ (ರಿ), ಕಾರ್ತಟ್ಟು, ಚಿತ್ರಪಾಡಿ ಇದರ 5 ವರ್ಷದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಕಲಾರಂಗದ ಸದಸ್ಯರೇ ಸ್ವತಃ ಖಾಲಿ ಹಡಿಲು ಬಿದ್ದ ಗದ್ದೆಯನ್ನು ಗುರುತಿಸಿ, ಅದರಲ್ಲಿ ಬೇಸಾಯ ಮಾಡಿ, ಬೆಳೆದ ಬೆಳೆಯನ್ನು ಕುಂದಾಪುರದ ಕೋಣಿಯ ಮಾನಸ ಬುದ್ದಿಮಾಂದ್ಯ ಮಕ್ಕಳ ಶಾಲೆಗೆ ಹಸ್ತಾಂತರಿಸಿ ಮಾತನಾಡಿದರು. ಸತತ 2 ವರ್ಷ ಇಂತಹ ಮಹತ್ಕಾರ್ಯವನ್ನು ಮಾಡಿರುವ ಕಲಾರಂಗದ ಕಾರ್ಯವು ಇತರೇ ಯುವಕರಿಗೆ ಆದರ್ಶಪ್ರಾಯವಾಗಿದ್ದು, ಮುಮದಿನ ದಿನಗಳಲ್ಲಿಯೂ ಸಹ ಇದನ್ನು ಮುಮದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಯಕ್ಷಗಾನ ಭಾಗವತರಾದ ಶ್ರೀ ಮತ್ಯಾಡಿ ನರಸಿಂಹ ಶೆಟ್ಟಿ, ಸ್ಥಳೀಯ ಕೃಷಿಕರಾದ ಶ್ರೀ ಸಂಜೀವ ಪೂಜಾರಿ, ಪವರ್‍ಲಿಪ್ಟಿಂಗ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿದ ಶ್ರೀ ನಿಖಿಲ್ ಹಾಗೂ ಇತ್ತೀಚೆಗೆ ಸಾಲಿಗ್ರಾಮದಲ್ಲಿ ಸರಗಳ್ಳರನ್ನು ಬೆನ್ನಟ್ಟಿ ಹಿಡಿದು ಸಾಹಸ ಮೆರೆದ ಕೋಟ ಪೊಲೀಸ್ ಠಾಣೆಯ ಮುಖ್ಯ ಪೇದೆ ಪ್ರದೀಪ್ ನಾಯಕ್‍ರವರನ್ನು ಗೌರವಿಸಿ ಮಾತನಾಡಿದ ಅಘೋರೇಶ್ವರ ದೇವಸ್ಥಾನ, ಕಾರ್ತಟ್ಟು ಇದರ ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಕಾರಂತರವರು ಕಲಾರಂಗದ ಸದಸ್ಯರು ಕೇವಲ ಸಾಂಸ್ಕøತಿಕ ಕ್ಷೇತ್ರದಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳದೆ ಸಮಾಜ ಸೇವೆ, ಸಾಧಕರನ್ನು ಗುರುತಿಸುವಿಕೆ, ಕೃಷಿ ಚಟುವಟಿಕೆಗಳಲ್ಲಿಯೂ ಸಹ ತಮ್ಮನ್ನು ತೊಡಗಿಸಿಕೊಂಡಿರುವುದು ಅಭಿನಂದನಾರ್ಹ ಎಂಬುದಾಗಿ ಹೇಳಿದರು.

ವಿದ್ಯಾರ್ಥಿ ವೇತನ, ದತ್ತಿ ನಿಧಿ, ವೈದ್ಯಕೀಯ ನೆರವು ವಿತರಿಸಿದ ಕಂಪ್ಯೂಟೆಕ್ ಕಂಪ್ಯೂಟರ್ ಎಜುಕೇಶನ್, ಕೋಟ ಇದರ ನಿರ್ದೇಶಕರಾದ ರೊ. ಪಿಹೆಚ್‍ಎಫ್ ಚಂದ್ರಶೇಖರ ಮೆಂಡನ್‍ರವರು ಸಮಾಜಕ್ಕೆ ಶ್ರೀ ಅಘೋರೇಶ್ವರ ಕಲಾರಂಗ ನೀಡುತ್ತಿರುವ ಕೊಡುಗೆ ಅಪಾರವಾಗಿದ್ದು, ಇದಕ್ಕೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ. ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಕಲಾರಂಗವು ತನ್ನ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಬಲವನ್ನು ದೇವರು ನೀಡಲಿ ಎಂಬುದಾಗಿ ಶುಭ ಹಾರೈಸಿದರು.

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯೋರ್ವಳನ್ನು ಕಲಾರಂಗದ ವತಿಯಿಂದ ದತ್ತು ಸ್ವೀಕರಿಸಿ, ಆಕೆಗೆ ಚೆಕ್ ಹಸ್ತಾಂತರಿಸಿದ ಕುಂದಗನ್ನಡ ರಾಯಭಾರಿ ಎಂದೇ ಖ್ಯಾತರಾಗಿರುವ ಮನು ಹಂದಾಡಿರವರು ತಮ್ಮ ಹಾಸ್ಯ ಮಿಶ್ರಿತ ದಾಟಿಯಲ್ಲಿಯೇ ಕಲಾರಂಗದ ಸದಸ್ಯರನ್ನು ಅಭಿನಂದಿಸುತ್ತಾ, ಕಲಾರಂಗದ ಸದಸ್ಯರ ಶಿಸ್ತು ನಿಜಕ್ಕೂ ಮೆಚ್ಚವಂತದ್ದು.  ಅವರ ಸಮಾಜ ಸೇವೆ ನಿಜವಾಗಿಯೂ ಅಭಿನಂದನಾರ್ಹ. ಅವರ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚು ಹೆಚ್ಚು ಸಿಗುವಂತಾಗಲಿ ಎಂಬುದಾಗಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ನೋಟರಿಯಾಗಿ ಆಯ್ಕೆಗೊಂಡ ಕಲಾರಂಗದ ಸದಸ್ಯರಾದ ಶ್ಯಾಮಸುಂದರ ನಾೈರಿ ಹಾಗೂ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ಕಲಾರಂಗದ ಸದಸ್ಯರಾದ ಸಂದೇಶರವರನ್ನು ಗುರುತಿಸಿ, ಗೌರವಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕಲಾರಂಗದ ಅಧ್ಯಕ್ಷರಾದ ನಾಗರಾಜ ಐತಾಳ್, ಕಾರ್ಯದರ್ಶಿ ಗಿರೀಶ ಗಾಣಿಗ, ಕೋಶಾಧಿಕಾರಿ ರಾಘವೇಂದ್ರ ನಾೈರಿ, ಗೌರವಾಧ್ಯಕ್ಷರಾದ ಮುರಳೀಧರ ಪೈ, ಉದ್ಯಮಿಗಳಾದ ಪರಮೇಶ್ವರ ನಾೈರಿ ರವರು ಉಪಸ್ಥಿತರಿದ್ದರು.

93.5 ರೆಡ್ ಎಫ್‍ಎಮ್ ನ ಆರ್‍ಜೆ ಪ್ರಸನ್ನ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಲಾರಂಗದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶಿವಾನಂದ ನಾೈರಿರವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ, ಸದಸ್ಯರಾದ ನಿತ್ಯಾನಂದ ನಾೈರಿರವರು ವಂದನಾರ್ಪಣೆ ಸಲ್ಲಿಸಿದರು. ಸಭ ಕಾರ್ಯಕ್ರಮದ ನಂತರ ಕರಾವಳಿ ಕರ್ನಾಟಕದ ಪ್ರಸಿದ್ದ ತಂಡವಾದ ನವೀನ ಚಂದ್ರ ಕೊಪ್ಪ ನೇತೃತ್ವದ ಶಿವಾನಿ ಮ್ಯೂಸಿಕಲ್ ಆರ್ಕೆಸ್ಟ್ರಾರವರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.


Spread the love