ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅವಘಡ: ರಮೇಶ್ ಕಾಂಚನ್ ಭೇಟಿ
ಉಡುಪಿ: ಭಾನುವಾರ ಉಡುಪಿ ನಗರದ ಹೃದಯಭಾಗದಲ್ಲಿ ನಡೆದ ಅಗ್ನಿ ದುರಂತ ಹಿಂದೆಂದೂ ಕಂಡರಿಯದ ಬೃಹತ್ ಮೊತ್ತದ ನಷ್ಟವನ್ನು ತಂದಿರಿಸಿದೆ. ಸುಮಾರು 14 ಅಂಗಡಿಗಳು ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿದ್ದು ಇದರಿಂದ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡಿರುವುದು ತುಂಬ ನೋವಿನ ಸಂಗತಿಯಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸ್ಥಳೀಯರು ಆರೋಪಿಸಿರುವಂತೆ ಕ್ಲಪ್ತ ಸಮಯಕ್ಕೆ ಅಗ್ನಿಶಾಮಕ ದಳ ಆಗಮಿಸದೆ ಇದ್ದ ಪರಿಣಾಮ ಬೆಂಕಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಿಸಿ ದೊಡ್ಡ ಮಟ್ಟದ ನಷ್ಟಕ್ಕೆ ಕಾರಣವಾಗಿದೆ. ಇದರ ಕುರಿತು ಜಿಲ್ಲಾಡಳಿತವು ಉನ್ನತ ಮಟ್ಟದ ಪಾರದರ್ಶಕ ತನಿಖೆ ನಡೆಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಆಡಳಿತ ವೈಫಲ್ಯ ಕಂಡುಬಂದಲ್ಲಿ, ಹೊಣೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಉಡುಪಿ ಜಿಲ್ಲೆಯ ಅಗ್ನಿಶಾಮಕ ಇಲಾಖೆಯ ವಾಹನಗಳು ಹಳೆಯದಾಗಿದ್ದು ಇದರಿಂದ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗುವ ಬದಲು ಜಿಲ್ಲೆಗೆ ಉನ್ನತ ತಂತ್ರಜ್ಞಾನದ ಹೆಚ್ಚುವರಿ ವಾಹನಗಳನ್ನು ಒದಗಿಸುವಂತೆ ಸರಕಾರಕ್ಕೆ ಜಿಲ್ಲಾಡಳಿತ ಶೀಘ್ರದಲ್ಲಿ ವರದಿ ಸಲ್ಲಿಸಿ ಆದಷ್ಟು ಬೇಗನೆ ಹೊಸ ವಾಹನಗಳು ಲಭಿಸುವಂತೆ ಉಡುಪಿ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಇದರೊಂದಿಗೆ ಪ್ರತಿ ಅಂಗಡಿಯವರು ಅಗ್ನಿ ಅಕಸ್ಮಿಕ ಸಂಭವಿಸಿದಾಗ ತುರ್ತು ಅಗತ್ಯತೆ ದೃಷ್ಟಿಯಿಂದ ಬೆಂಕಿ ನಂದಿಸುವ ಸಿಲಿಂಡರ್ ಇಟ್ಟು ಕೊಂಡರೆ ನಡೆಯಬಹುದಾದ ಬೃಹತ್ ಮೊತ್ತದ ನಷ್ಟವನ್ನು ತಡೆಯುವ ಸಾಧ್ಯತೆ ಇದೆ. ಆದ್ದರಿಂದ ಕಟ್ಟಡ ಹಾಗೂ ಅಂಗಡಿ ಮಾಲಕರು ಸಹ ತಮ್ಮ ಮುಂಜಾಗ್ರತೆ ವಹಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.













