ಮಣಿಪಾಲದಲ್ಲಿ ಅವಧಿ ಮೀರಿ ರೂಸ್ಟರ್ ಹೋಟೆಲ್ ಕಾರ್ಯಾಚರಣೆ : ಪ್ರಕರಣ ದಾಖಲು
ಉಡುಪಿ: ಅವಧಿ ಮೀರಿ ಹೋಟೆಲ್ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದಡಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 5 ರಂದು ಮಣಿಪಾಲ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ.ಎನ್. ಅವರು ರಾತ್ರಿ ಪಾಳಿಯ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, 06/05/2026ರ ಮುಂಜಾನೆ ಸುಮಾರು 12.27 ಗಂಟೆಗೆ ಶಿವಳ್ಳಿ ಗ್ರಾಮದ ವಿ.ಎಸ್. ಆಚಾರ್ಯ ರಸ್ತೆಯಲ್ಲಿರುವ ಓಡಿಸ್ಸಿ ಕಟ್ಟಡದ ಸಮೀಪದ ರೂಸ್ಟರ್ ಹೋಟೆಲ್ ಅವಧಿ ಮೀರಿ ಗಿರಾಕಿಗಳಿಗೆ ಪಾರ್ಸೆಲ್ ನೀಡುತ್ತಿರುವ ಬಗ್ಗೆ ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ಠಾಣಾ ಸಿಬ್ಬಂದಿಗಳಾದ ಪಿಸಿ 90 ಜಗದೀಶ್, ಪಿಸಿ 194 ಶಂಕ್ರಪ್ಪ, ಪಿಸಿ 01 ಸತ್ತೆಪ್ಪ ಹಾಗೂ ಪಿಸಿ 2490 ಮಂಜುನಾಥ್ ಅವರೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಹೋಟೆಲ್ನ ಕಾರ್ಯಾಚರಣೆಯ ವಿಡಿಯೋ ಚಿತ್ರೀಕರಿಸಿ, ಹೋಟೆಲ್ನ್ನು ಮುಚ್ಚಿಸಿದ್ದಾರೆ.
ಉಡುಪಿಯ ವಿವಿಧ ಭಾಗಗಳಿಂದ ಸಾರ್ವಜನಿಕರು ಅಲ್ಲಿ ಸೇರಿಕೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಅಪಾರ್ಟ್ಮೆಂಟ್ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆಯೂ ಹೋಟೆಲ್ ಮಾಲೀಕರಿಗೆ ನಿಗದಿತ ಸಮಯಕ್ಕೆ ಹೋಟೆಲ್ ಬಂದ್ ಮಾಡುವಂತೆ ಹಲವು ಬಾರಿ ಮೌಖಿಕ ಸೂಚನೆ ನೀಡಲಾಗಿದ್ದರೂ, ಯಾವುದೇ ಪರವಾನಿಗೆ ಪಡೆಯದೇ ಅವಧಿ ಮೀರಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿರುವ ಆರೋಪ ಕೇಳಿಬಂದಿದೆ.
ಈ ಸಂಬಂಧ ಹೋಟೆಲ್ ಮಾಲೀಕರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.













