ಶೃಂಗೇರಿ ಮತ ಮರು ಎಣಿಕೆ ವಿವಾದ: ಪ್ರಮಾಣವಚನ ಸ್ವೀಕಾರಕ್ಕೆ ವಿಳಂಬ ಮಾಡಿಲ್ಲ, ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ

Spread the love

ಶೃಂಗೇರಿ ಮತ ಮರು ಎಣಿಕೆ ವಿವಾದ: ಪ್ರಮಾಣವಚನ ಸ್ವೀಕಾರಕ್ಕೆ ವಿಳಂಬ ಮಾಡಿಲ್ಲ, ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ

ಮಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ ನಂತರ ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಜೀವರಾಜ್ ಪ್ರಮಾಣವಚನ ಸ್ವೀಕಾರಕ್ಕೆ ವಿಳಂಬ ಮಾಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ಯಾವುದೇ ವಿಳಂಬ ಮಾಡಿಲ್ಲ, ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಡಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ವಿಶ್ವಾಸದ ಮೇಲೆ ನಡೆಯಬೇಕು, ವಿಶ್ವಾಸವಿಲ್ಲದಿದ್ದರೆ ವ್ಯವಸ್ಥೆ ಬಲಿಷ್ಠವಾಗಲು ಸಾಧ್ಯವಿಲ್ಲ ಎಂದು ಸ್ಪೀಕರ್ ತಿಳಿಸಿದರು. ನಾನು ಬೆಂಗಳೂರಿನಲ್ಲಿದ್ದಾಗ ಯಾರೂ ನನ್ನನ್ನು ಭೇಟಿ ಮಾಡಿಲ್ಲ. ನಿನ್ನೆಯಷ್ಟೇ ಸಮಯ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದೊಂದು ವಿಶಿಷ್ಟ ಸನ್ನಿವೇಶವಾಗಿದ್ದು, ತಾಂತ್ರಿಕ ವಿಚಾರಗಳ ಬಗ್ಗೆ ಅಭಿಪ್ರಾಯ ಪಡೆಯಬೇಕಿದೆ. ಸಂವಿಧಾನಾತ್ಮಕವಾಗಿ ಅವಕಾಶ ನೀಡಲೇಬೇಕು, ಇದರಲ್ಲಿ ಆತುರ ಅಥವಾ ಸಂಶಯ ಪಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಸರ್ಕಾರದ ಕಾನೂನು ಹೋರಾಟಕ್ಕೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಇಡೀ ಪ್ರಕ್ರಿಯೆಯಲ್ಲಿ ಎಲ್ಲಿ, ಯಾರು ತಪ್ಪು ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ಮಾಡಲಾಗಿತ್ತು. ಇದರಲ್ಲಿ ಬಿಜೆಪಿಯ ಜೀವರಾಜ್ ವಿಜಯಿ ಎಂಬುದು ತಿಳಿದುಬಂದಿತ್ತು. ಈವರೆಗೆ ಕಾಂಗ್ರೆಸ್​ನ ಟಿಡಿ ರಾಜೇಗೌಡ ಶಾಸಕರಾಗಿದ್ದರು.


Spread the love