ನೀಟ್ ಪ್ರಶ್ನಾ ಪತ್ರಿಕಾ ಸೋರಿಕೆಯ ಹಗರಣಕ್ಕೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನೇರ ಹೊಣೆ – ಪ್ರೊ.ಫಣಿರಾಜ್
ಉಡುಪಿ: ನೀಟ್ ಪ್ರಶ್ನಾಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಕನಸುಗಳ ಮೇಲಿನ ದಾಳಿಯಾಗಿದೆ ಎಂದು ಪ್ರೊ.ಫಣಿರಾಜ್ ಅಭಿಪ್ರಾಯ ಪಟ್ಟರು.
ಅವರು ಇಂದು ಉಡುಪಿ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ನಡೆದ ಎಸ್.ಐ.ಓ ಮತ್ತು ಜಿ.ಐ.ಓ ಉಡುಪಿ ಜಿಲ್ಲೆ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ನೀಟ್ ಪ್ರಶ್ನಾ ಪತ್ರಿಕಾ ಸೋರಿಕೆಯ ಹಗರಣಕ್ಕೆ ಕೇಂದ್ರ ಸರಕಾರದ ಮಾನ ಸಂಪನ್ಮೂಲ ಇಲಾಖೆ ನೇರ ಹೊಣೆಯಾಗಿದ್ದು ಕೇಂದ್ರ ಮಾನವ ಸಂಪನ್ಮೂಲ ಮಂತ್ರಿ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ನೀಟ್ ವ್ಯವಸ್ಥೆಯ ಮೂಲಕ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ವ್ಯಾಪರವನ್ನಾಗಿ ಮಾಡಿ, ನೈತಿಕ ಮತ್ತು ಸಮಾಜಿಕ ಬದ್ದತೆ ನಾಶ ಮಾಡಲಾಗುತ್ತಿದೆ. ವಾಸ್ತವಿಕವಾಗಿ ಈ ನೀಟ್ ಪರೀಕ್ಷಾ ವ್ಯವಸ್ಥೆ ಕೇಂದ್ರಿಕೃತವಾಗಿದ್ದು ಸರ್ವಾಧಿಕಾರಿ ವ್ಯವಸ್ಥೆಯ ಭಾಗ. ಇದನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತ ಬಂದಿದೆ. ಉತ್ತರ ರಾಜ್ಯಗಳ ಕೋಚಿಂಗ್ ಮಾಫಿಯಾಗಳಿಗೆ ಮಣಿದು ಈ ನೀಟ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕೃತ ಗೊಳಿಸಬೇಕು. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನೀಟ್ ಪರೀಕ್ಷೆ ಪರಿಚಯಿಸಿ ತನ್ನ ಸರ್ವಾಧಿಕಾರ ಧೋರಣೆ ತೋರಿಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರದ ಸರಕುವನ್ನಾಗಿಸಿದೆ. ಇದು ಕೇಂದ್ರೀಕೃತ ವ್ಯವಸ್ಥೆಯ ವೈಫಲ್ಯಯಾಗಿದೆ ಎಂದರು.
ವೈದ್ಯಕೀಯ ಹುದ್ದೆ ಪವಿತ್ರವಾಗಿದೆ. ಆದರೆ ಇಂದು ಅದರ ನೈತಿಕ ಮೂಲದ ಅಡಿಪಾಯ ಕಿತ್ತು ಹಾಕುವ ಪ್ರಯತ್ನ ಸಾಗುತ್ತಿದೆ. ಕೋಚಿಂಗ್ ಸೆಂಟರ್ ಮಾಫಿಯಾಕ್ಕೂ ಹಗರಣಕ್ಕೂ ನೇರ ಸಂಬಂಧವಿದೆ.ಎಷ್ಟು ಖಾಸಗಿ ಕೋಚಿಂಗ್ ಸೆಂಟರ್’ಗಳು ಇದೆಯೆಂಬುವುದು ಮಾನವ ಸಂಪನ್ಮೂಲ ಇಲಾಖೆಗೆ ಗೊತ್ತಿಲ್ಲ. ಈ ಸೆಂಟರ್’ಗಳಿಗೆ ಯಾವ ರೀತಿಯ ವೃತ್ತಿಪರತೆ ಇದೆ ಎಂದು ಗೊತ್ತಿಲ್ಲ. ಸರಿಸುಮಾರು ನೂರು ಕೋಚಿಂಗ್ ಸೆಂಟರ್ ಗಳು ಕೋಟಾ ದಂತಹ ಪ್ರದೇಶದಲ್ಲಿದೆ. ಪೋಷಕರು ಲಕ್ಷಾಂತರ ಹಣ ವ್ಯಯಿಸಿ ಕೋಚಿಂಗ್ ಸೆಂಟರ್ ಗಳಿಗೆ ಸೇರಿಸುತ್ತಾರೆ. ಅಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಶಿಕ್ಷಣ ಸರಿಯಾಗಿ ದೊರೆಯುವುದಿಲ್ಲ. ಪಿಯುಸಿ ಶಿಕ್ಷಣ ಸರಿಯಾಗಿ ದೊರೆಯುವುದಿಲ್ಲ ಎಂದು ಶಿಕ್ಷಣ ವ್ಯವಸ್ಥೆಯ ಹುಳುಕು ಬಿಚ್ಚಿಟ್ಟರು.
ಶೇ 100% , 95% ಉತ್ತೀರ್ಣರಾಗಿದ್ದರೆ ಎಂದು ಖ್ಯಾತಿ ಗಳಿಸಲು ಯಾವ ರೀತಿ ಪಶ್ನಾ ಪತ್ರಿಕೆ ಮಾಡಬೇಕು ಎಂಬ ಮಾದರಿ ತಯಾರಿಸಲಾಗುತ್ತದೆ. ಕೋಚಿಂಗ್ ಸೆಂಟರ್ ಈ ಮಾದರಿ ಮೂಲಕ ಪೋಷಕರ ಬಳಿ ಹಣ ಕೀಳುತ್ತದೆ. ಇಂದು 50-70 ಸಾವಿರ ಕೋಟಿ ಕೋಚಿಂಗ್ ವ್ಯವಹಾರ ನಡೆಯುತ್ತದೆ.
ಇದು ಹಗಲಿನಲ್ಲಿ ಕುಳಿತು, ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಮಾಡುತ್ತಿರುವ “ಅತ್ಯಂತ ಭ್ರಷ್ಟ ಹಣಕಾಸಿನ ವ್ಯವಸ್ಥೆ” ಎಂದರು. ಈ ಹಗರಣದ ಐದಾರು ಜನರನ್ನು ಬಂಧಿಸಿ ಪ್ರಯೋಜನವಿಲ್ಲ. ನೀಟ್ ವ್ಯವಸ್ಥೆಯನ್ನು ಡಿಸ್ ಮ್ಯಾಂಟಲ್ ಮಾಡಿ ನೀಟ್ ವ್ಯವಸ್ಥೆಯ ಯೊಳಗಿನ ಭ್ರಷ್ಟ ಅಧಿಕಾರಿಶಾಹಿಗಳನ್ನು ಕಡಿವಾಣ ಹಾಕಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಐ.ಓನ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ನಿಹಾಲ್ ಕಿದಿಯೂರು ಮಾತನಾಡಿ, “ಮಾನವೀಯತೆ, ಮೌಲ್ಯ ಶಿಕ್ಷಣಯಿಲ್ಲದೆ ಪ್ರಸ್ತುತ ಶ್ರೈಕ್ಷಣಿಕ ವ್ಯವಸ್ಥೆ ಬರಗೆಟ್ಟು ಹೋಗಿದೆ.ವಿದ್ಯಾರ್ಥಿಗಳ ಕ್ರಿಯಾತ್ಮಕತೆಯನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಕೊಲ್ಲಲಾಗುತ್ತಿದೆ ಇದರ ಕಾರಣ ಶ್ರೈಕ್ಷಣಿಕ ವ್ಯವಸ್ಥೆ ಇದೀಗ ಶೂನ್ಯವಾಗಿ ಮಾರ್ಪಟ್ಟಿದೆ.
ಪ್ರಧಾನಿ ವಿದೇಶಕ್ಕೆ ಹೋಗಬೇಡಿ ಎಂದು ಹೇಳಿ ವಿದೇಶ ತಿರುಗುತ್ತಾರೆ. ವಿದೇಶಕ್ಕೆ ಹೋದ ತಕ್ಷಣ ನೀಟ್ ಪತ್ರಿಕೆ ಸೋರಿಯಾಗುತ್ತಿದೆ. ವೈಫಲ್ಯಗಳನ್ನು ಮರೆಮಾಚಲು ನಾಟಕವಾಡಲಾಗುತ್ತಿದೆ. ಆದರೆ ನಾವು ಜೀರಳೆಗಳಲ್ಲ ಈ ದೇಶದ ಭಾಗ. ಗಾಂಧೀಜಿಯವರು ತಿಳಿಸಿದಂತೆ ನಾವು ಈ ಕೆಟ್ಟ ವ್ಯವಸ್ಥೆಯ ವಿರುದ್ಧ ಸತ್ಯಾಗ್ರಹ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮನುಷ್ಯರು ಯಂತ್ರಗಳಲ್ಲ, ಈ ಡಸ್ಟ್ ಬಿನ್ ವ್ಯವಸ್ಥೆಯನ್ನು ಕಿತ್ತೆಸೆದು ಮಾದರಿಯುತ, ಮೌಲ್ಯಯುತ, ಮಾನವೀಯತೆಗೆ ಪ್ರಾಧಾನ್ಯತೆ ನೀಡುವ ಶ್ರೈಕ್ಷಣಿಕ ವ್ಯವಸ್ಥೆ ಸಂಸ್ಥಾಪಿಸಬೇಕು ಎಂದರು.
ಡಾ.ನಸುಹಾ ಮಾತನಾಡಿ, ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆ ವೈದ್ಯಕೀಯ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಆಘಾತ ತಂದಿದೆ.22 ಲಕ್ಷ ಆಕ್ಷಾಂಕ್ಷಿಗಳ ಕನಸನ್ನು, ವರ್ಷಾನುಗಟ್ಟಲೆ ಪಟ್ಟ ಶ್ರಮವನ್ನು ಕೇಂದ್ರ ಸರ್ಕಾರದ ವೈಫಲ್ಯದ ಕಾರಣ ನಾಶವಾಗಿದೆ. ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮವಹಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅದರೊಂದಿಗೆ ಮುಖ್ಯವಾಗಿ ಕೇಂದ್ರ ಶಿಕ್ಷಣ ಸಚಿವರು ತಮ್ಮ ಅಸಮರ್ಥತೆ, ವೈಫಲ್ಯಕ್ಕಾಗಿ ರಾಜೀನಾಮೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಐ.ಓ ಜಿಲ್ಲಾಧ್ಯಕ್ಷ ಆಯಾನ್ ಮಲ್ಪೆ ಮಾತನಾಡಿದರು. ಸಮೀರ್ ತೀರ್ಥಹಳ್ಳಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್.ಐ.ಓ ನ ರೆಹಾನ್ ಉಡುಪಿ,ಸಾಕೀಬ್ ಹೂಡೆ,ನಿಫಾಲ್ ಕಿದಿಯೂರು,ಮುಝೈನ್ ಆದಿ ಉಡುಪಿ ಹಂಝಾ ಹಸನ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ನಿಸಾರ್ ಉಡುಪಿ, ಜಿ.ಐ.ಒನ ಝೀಫಾ ನಾಝ್,ಅಸ್ಮಾ ಬಾನು ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.













