ಮೂರು ದಿನಗಳ ಸಮಾಧಾನ ಮಹೋತ್ಸವ ಸಂಪನ್ನ
ಉಡುಪಿ: ಘನ ಮೋಹನ್ ಸಿ.ಲಾಝರಸ್ ನೇತೃತ್ವದಲ್ಲಿ ಮಾ.20ರಿಂದ 22ರವರೆಗೆ ಉಡುಪಿಯ ಮಿಷನ್ ಕಾಂಪೌಂಡಿನಲ್ಲಿ ಆಯೋಜಿಸಿರುವ ‘ಸಮಾಧಾನ ಮಹೋತ್ಸವ’ಕಾರ್ಯಕ್ರಮ ಭಾನುವಾರ ಸಂಜೆ ಸಮಾಪನಗೊಂಡಿತು.
ಮೂರು ದಿನಗಳ ಕಾಲ ‘ಸಮಾಧಾನ ಮಹೋತ್ಸವ’ಕಾರ್ಯಕ್ರಮ ಹೆಸರಿನಲ್ಲಿ ನಡೆದ ಭಕ್ತಿ ಸಂಜೀವನ ಕೂಟದಲ್ಲಿ ಉಡುಪಿ ಜಿಲ್ಲೆಯ ವಿವಿಧ ಮೂಲೆಗಳಿಂದ ಆಗಮಿಸಿದ್ದ ಹನ್ನೆರಡು ಸಾವಿರಕ್ಕೂ ಅಧಿಕ ಮಂದಿ ಜನರು ದೈವಿಕ ಅನುಭವವನ್ನು ಪಡೆದರು. ಘನ ಮೋಹನ್ ಸಿ.ಲಾಝರಸ್ ಮೂರು ದಿನಗಳ ಕಾಲ ಶಿಲುಬೆಯ ಧ್ಯಾನವನ್ನು ವ್ಯವಸ್ಥಿತವಾಗಿ ನಡೆಸುವುದರೊಂದಿಗೆ ದೇವರ ವಾಕ್ಯದ ಮೇಲೆ ವಿಶೇಷ ಪ್ರವಚನಗಳನ್ನು ನೀಡಿದರು. ಈ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಹಾಗೂ ಸಮಾಧಾನ ಮಹೋತ್ಸವಕ್ಕೆ ವಿರೋಧ ಮಾಡಿದವರ ಮನ ಪರಿವರ್ತನೆಗೊಳ್ಳಲಿ ಎಂದು ಬಹಿರಂಗ ಪ್ರಾರ್ಥನೆಯನ್ನು ಸಲ್ಲಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಪ್ರಶಾಂತ್ ಜತ್ತನ್ನ ಮಾತನಾಡಿ ಮೂರು ದಿನಗಳ ಸಮಾಧಾನ ಮಹೋತ್ಸವ ಅತ್ಯುತ್ತಮವಾಗಿ ಮೂಡಿಬಂದಿದೆ. ಕಾರ್ಯಕ್ರಮ ನಡೆಸಲು ವಿರೋಧ ಬಂದಾಗ ಸಾಂಗವಾಗಿ ನಡೆಯಲು ಅನುಮತಿ ನೀಡಿದ ರಾಜ್ಯ ಹೈಕೋರ್ಟ್ ಗೆ ಹಾಗೂ ಶಾಂತಿ ಸುವ್ಯವಸ್ಥೆಗೆ ಸಹಕರಿಸಿದ ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸಿದರು. ಕ್ರೈಸ್ತ ಸಮುದಾಯ ಎಂದು ಕೂಡ ದ್ವೇಷ ಭಾವನಗೆ ಅವಕಾಶ ನೀಡದೆ ವಿರೋಧ ಮಾಡಿದವರನ್ನು ಕೂಡ ಪ್ರೀತಿಸುವ ಗುಣವನ್ನು ಹೊಂದಿದವರಾಗಿದ್ದಾರೆ. ನಡೆದಿರುವ ಪ್ರಾರ್ಥನಾ ಕೂಡ ಯಾರನ್ನೂ ಕೂಡ ದ್ವೇಷ ಮಾಡಲು ಅಥವಾ ಬೇರೆ ಧರ್ಮವನ್ನು ಅವಹೇಳನ ಮಾಡಲು ನಡೆದಿಲ್ಲ ಬದಲಾಗಿ ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಒಳಿತಾಗುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದು ಶಾಂತಿಯ ದೂತರಾಗಿ ಪ್ರತಿಯೊಬ್ಬರೂ ಕಾರ್ಯಾಚರಿಸೋಣ ಎಂದರು.
ಉಡುಪಿ ಧರ್ಮಪ್ರಾಂತ್ಯದ ವಂ|ಹೆರಾಲ್ಡ್ ಪಿರೇರಾ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತಲಿನೋ, ಕಥೊಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷರಾದ ಮೆಲ್ವಿನ್ ಆರಾನ್ಹಾ ಕರ್ನಾಟಕ ಸದರ್ನ್ ಡಯೋಸಿಸ್ ವಲಯಾಧ್ಯಕ್ಷರಾದ ವಂ|ಕಿಶೋರ್ ಕುಮಾರ್ ಆಗಮಿಸಿ ಶುಭ ಹಾರೈಸಿದರು.
ಚರ್ಚ್ ಆಫ್ ಫೆಲೋಶಿಪ್ ಇದರ ಸಂಚಾಲಕರಾದ ಡಾ. ಸುಶೀಲ್ ಜತ್ತನ್ನ, ಕಾರ್ಯದರ್ಶಿ ಸೆಲ್ವಕುಮಾರ್, ಕೋಶಾಧಿಕಾರಿ ಸೆಲಿನಾ ಕರ್ಕಡಾ, ಉಪಾಧ್ಯಕ್ಷರಾದ ವರ್ಗಿಸ್, ಪಾವ್ಲೋಸ್, ಸ್ಟೀಫನ್ ಜಮಖಂಡಿ, ಚಂದ್ರ ಶೇಖರ್, ಸುಧಾಕರ್ ಗೋಝರ್, ಎಲ್ಲಾ ಟ್ರಸ್ಟಿಗಳು, ಪಾಸ್ಟರ್ ಗೋಪಿನಾಥ್, ಪೀಟರ್ ದಾಂತಿ, ಗ್ಲಾಡ್ಸನ್ ಕರ್ಕಡ ಇನ್ನಿತರರು ಉಪಸ್ಥಿತರಿದ್ದರು













