ಕುಂದಾಪುರ: ಕೊರೋನಾ ಸೋಂಕಿತ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ತೆರವು

Spread the love

ಕುಂದಾಪುರ: ಕೊರೋನಾ ಸೋಂಕಿತ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ತೆರವು

  • ಮಾಲೀಕ ಹಾಗೂ ಸಿಬ್ಬಂದಿಗಳಿಗೆ ಕ್ವಾರಂಟೈನ್ ಅವಧಿ ಮುಕ್ತಾಯ. ಹನ್ನೆರಡು ಮಂದಿಯ ವರದಿಗಳು ನೆಗೆಟಿವ್

ಕುಂದಾಪುರ: ಕೊರೋನಾ ಸೋಂಕಿತ ವ್ಯಕ್ತಿ ತಂಗಿದ್ದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಅನ್ನು ಇಪ್ಪತ್ತು ದಿನಗಳ ಬಳಿಕ ಸೀಲ್ ಡೌನ್ ನಿಂದ ಮುಕ್ತಿಗೊಳಿಸಲಾಗಿದೆ.

ಮುಂಬೈನಿಂದ ಲಾರಿಯಲ್ಲಿ ಕುಂದಾಪುರ-ಉಡುಪಿ ಮಾರ್ಗವಾಗಿ ಮಂಡ್ಯಕ್ಕೆ ತೆರಳಿದ್ದ ಕೊರೋನಾ ಸೋಂಕಿತ ವ್ಯಕ್ತಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಪೆಟ್ರೋಲ್ ಬಂಕ್ನಲ್ಲಿ ಲಾರಿ ನಿಲ್ಲಿಸಿ ಊಟ ಮತ್ತು ಸ್ನಾನ ಮಾಡಿದ್ದರು. ಹೀಗಾಗಿ ಕಳೆದ 21ದಿನಗಳಿಂದ ಪೆಟ್ರೋಲ್ ಬಂಕ್ ಸೀಲ್ಡೌನ್ ಮಾಡಲಾಗಿತ್ತು. ಕ್ವಾರೆಂಟೈನ್ ಅವಧಿಯ 28 ದಿನಗಳಾದ ಹಿನ್ನೆಲೆ ಇದೀಗ ಪೆಟ್ರೋಲ್ ಬಂಕ್ ಸೀಲ್ಡೌನ್ ತೆರವುಗೊಳಿಸಲಾಗಿದ್ದು ಸೋಮವಾರದಿಂದ ಪೆಟ್ರೋಲ್ ಬಂಕ್ ಗ್ರಾಹಕರ ಸೇವೆಗೆ ಸಿದ್ದಗೊಂಡಿದೆ.

ಎಪ್ರಿಲ್ 21 ರಂದು ಲಾರಿಯು ತೆಕ್ಕಟ್ಟೆ ಪೆಟ್ರೋಲ್ ಬಂಕ್ಗೆ ಬಂದಿದ್ದು ಅಂದು ರಾತ್ರಿ ಸೋಂಕಿತ ವ್ಯಕ್ತಿ ಅಲ್ಲಿಯೇ ತಂಗಿದ್ದು ಊಟ ಮಾಡಿದ್ದಲ್ಲದೇ ಶೌಚಾಲಯ ಉಪಯೋಗಿಸಿದ್ದ. ಮಂಡ್ಯಕ್ಕೆ ತೆರಳಿದ ಬಳಿಕ ಆತ ಕೊರೋನಾ ಸೋಂಕಿತ ಎನ್ನುವುದು ತಿಳಿದು ಬಂದಿದ್ದು, ಆತನ ಟ್ರಾವೆಲ್ ಹಿಸ್ಟರಿಯಲ್ಲಿ ಪ್ರಯಾಣದ ವಿವರಗಳು ಲಭಿಸಿತ್ತು. ಆದ್ದರಿಂದ ಎ.27ರಂದು ಸಂಬಂಧಪಟ್ಟ ಪೆಟ್ರೋಲ್ ಬಂಕ್ ಸೀಲ್ಡೌನ್ ಮಾಡಿದ್ದಲ್ಲದೇ ಮಾಲಕ ಹಾಗೂ ಸಿಬ್ಬಂದಿ ಸಹಿತ 12 ಮಂದಿಯನ್ನು 14 ದಿನ ಹಾಸ್ಪಿಟಲ್ ಕ್ವಾರೆಂಟೈನ್ ಮಾಡಲಾಗಿತ್ತು. ಬಳಿಕ ಅವರು 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ಕೂಡ ಮುಗಿಸಿದ್ದು ಎಲ್ಲರ ವರದಿ ನೆಗೆಟಿವ್ ಬಂದಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಸಾಸ್ತಾನ ಟೋಲ್ ಸಿಬ್ಬಂದಿಗಳ ಕೋವಿಡ್ ಪರೀಕ್ಷಾ ವರದಿ ಕೂಡ ನೆಗೆಟಿವ್ ಬಂದಿದೆ.

ಸೋಮವಾರದಿಂದ ಪೆಟ್ರೋಲ್ ಬಂಕ್ ಕಾರ್ಯಚರಿಸುತ್ತಿದ್ದು, ಕೊರೋನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸುತ್ತಿದೆ. ಪೆಟ್ರೋಲ್ ಬಂಕ್ ಗೆ ಬರುವ ಗ್ರಾಹಕರ ಬಳಿ ಮಾಸ್ಕ್ ಇಲ್ಲದಿದ್ದರೆ ಮಾಸ್ಕ್ ನೀಡಲಾಗುತ್ತಿದೆ. ಸೋಮವಾರದಂದು ತೆಕ್ಕಟ್ಟೆ ವ್ಯಾಪ್ತಿಯ ಐವರು ಆಶಾಕಾರ್ಯಕರ್ತೆಯರಿಗೆ ತೆಕ್ಕಟ್ಟೆ ಶಿವಪ್ರಸಾದ್ ಪೆಟ್ರೋಲ್ ಬಂಕ್ ಮಾಲಿಕರಾದ ಗುರುಪ್ರಸಾದ್ ಹತ್ವಾರ್ ಹಾಗೂ ರೋಹಿಣಿ ಹತ್ವಾರ್ ದಂಪತಿಗಳು ದಿನಸಿ ಕಿಟ್ ವಿತರಿಸಿ ಕೊರೋನಾ ವಾರಿಯರ್ಸ್ ಸೇವೆಯನ್ನು ಸ್ಮರಿಸಿದ್ದಾರೆ.


Spread the love