ಕುದ್ರೋಳಿ ಗಣೇಶ್ ಶಿಷ್ಯ ಜಾದೂ ಕಲಾವಿದ ಮಾಸ್ಟರ್ ಚಿಂತನ್ ನಿಧನ

Spread the love

ಕುದ್ರೋಳಿ ಗಣೇಶ್ ಶಿಷ್ಯ ಜಾದೂ ಕಲಾವಿದ ಮಾಸ್ಟರ್ ಚಿಂತನ್ ನಿಧನ

ಮಂಗಳೂರು: ಹಲವು ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಪ್ರತಿಭಾನ್ವಿತ ಜಾದೂ ಕಲಾವಿದ ಮಾಸ್ಟರ್ ಚಿಂತನ್ ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು.

ತನ್ನ 11 ನೇ ವಯಸ್ಸಿಗೆ ತಂದೆಯಾದ ಕಾಸರಗೋಡಿನ ಹಿರಿಯ ಜಾದೂಗರ ನಾರ್ತ್ ಮಲಬಾರ ಮ್ಯಾಜಿಕ್ ಫೌಂಡೇಶನ್ ಅಧ್ಯಕ್ಷರಾದ ಪ್ರೊ.ಮಾಧವ್ ಇವರಿಂದ ಜಾದೂ ಕಲಿಕೆ ಆರಂಭಮಾಡಿದ್ದ ಮಾಸ್ಟರ್ ಚಿಂತನ್ ಪ್ರಸಿದ್ದ ಜಾದೂಗಾರ ಕುದ್ರೋಳಿ ಗಣೇಶ್ ಇವರ ಶಿಷ್ಯರಾಗಿದ್ದರು. ಅಪಾರ ಕೈಚಳಕದ ಅಗತ್ಯವಿರುವ ಮ್ಯಾಜಿಪ್ಯುಲೇಶನ ಜಾದೂ ವಿಭಾಗದಲ್ಲಿ ಪರಿಣಿತ ಹೊಂದಿದ್ದ ಮಾಸ್ಟರ್ ಚಿಂತನ್ 1994 ರಲ್ಲಿ ಕೇರಳದ ಪ್ರತಿಷ್ಟಿತ ವಾಳಕ್ಕುನಂ ಪ್ರಶಸ್ತಿಯನ್ನು ಗೆದ್ದ ಮೊದಲ ಕನ್ನಡಿಗನಾಗಿದ್ದರು.

1997 ರಲ್ಲಿ ಉಡುಪಿಯ ಗಿಲಿ ಗಿಲಿ ಜಾದೂ ಸಮ್ಮೇಳನ, 1998 ರಲ್ಲಿ ತಿರುವನಂತಪುರದ ವಿಸ್ಮಯಮ್ ಜಾದೂ ಸಮ್ಮೇಳನದ ಜೂನಿಯರ್ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಅಂತರ್ ರಾಷ್ಟ್ರಿಯ ಜಾದೂ ಸಮ್ಮೇಳನದಲ್ಲಿ ಅತ್ಯುನ್ನತ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು. ದಕ್ಷಿಣ ಭಾರತದ ವಿವಿಧೆಡೆ ನೂರಾರು ಪ್ರದರ್ಶನ ನೀಡಿದ್ದರು.

ಜಾದೂಗಾರ ಚಿಂತನ್ ನಿಧನಕ್ಕೆ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್, ಮಂಗಳಾ ಮ್ಯಾಜಿಕ್ ಸರ್ಕಲ್ ಅಧ್ಯಕ್ಷ ಸ್ವರ್ಣ ಸುಂದರ್, ದಿಲ್ಲಿಯ ಮಾಜ್ ಮಾ ಸಂಸ್ಥೆಯ ಅಧ್ಯಕ್ಷ ರಾಜ್ ಕುಮರ್, ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ,ಕರ್ನಾಟಕದ ವಿವಿಧ ಜಾದೂ ಸಂಸ್ಥೆಗಳು, ರಾಜ್ಯ ಹಾಗೂ ರಾಷ್ಟದ ವಿವಿಧೆಡೆಯ ಪ್ರಸಿದ್ದ ಜಾದೂ ಕಲಾವಿದರು ತಮ್ಮ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಮಾಸ್ಟರ್ ಚಿಂತನ್ ಮೂಡಬಿದ್ರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು ಹಾಗೂ ಕಾಸರಗೋಡು ಅಗಲ್ಪಾಡಿಯ ಶ್ರೀ ಅನ್ನಪೂರ್ಣೇಶ್ವರಿ ಹೈಸ್ಕೂಲಿನ ಹಳೆ ವಿದ್ಯಾರ್ಥಿಯಾಗಿದ್ದರು.


Spread the love