ಕೊಲ್ಲೂರು ಸೌಪರ್ಣಿಕಾ ನದಿ ಮಾಲಿನ್ಯದ ವಿರುದ್ಧ ಹಸಿರು ಪೀಠಕ್ಕೆ ಅರ್ಜಿ

Spread the love

ಕೊಲ್ಲೂರು ಸೌಪರ್ಣಿಕಾ ನದಿ ಮಾಲಿನ್ಯದ ವಿರುದ್ಧ ಹಸಿರು ಪೀಠಕ್ಕೆ ಅರ್ಜಿ

  • ಹಸಿರು ಪೀಠದಲ್ಲಿನ ಅರ್ಜಿ ವಿಚಾರಣೆಗೆ ನ್ಯಾಯಾಲಯ ಅಂಗೀಕಾರ

ಕುಂದಾಪುರ: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ‌ ಅತಿಕ್ರಮಣದ ಬಗ್ಗೆ ಚಿನ್ನೈನಲ್ಲಿನ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಘನ ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ ಎಂದು ಸಾಮಾಜಿಕ ಹೋರಾಟಗಾರ ಹರೀಶ್ ತೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಚಾದ್ರಿ ಬೆಟ್ಟಗಳಿಂದ ಹರಿದು ಬರುವ ಪುಣ್ಯ ತೀರ್ಥಗಳು ಸಂಗಮವಾಗಿ ಅಗ್ನಿ ತೀರ್ಥ, ಕಾಶಿ ತೀರ್ಥ ಹಾಗೂ ಸೌಪರ್ಣಿಕೆಯಾಗಿ ಕೊಲ್ಲೂರಿನಲ್ಲಿ ಹರಿಯುತ್ತಿದೆ. ಈ ಪುಣ್ಯ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಪರಿಹಾರವಾಗುತ್ತದೆ ಹಾಗೂ ಚರ್ಮ ಸಂಬಂಧಿತ ಕಾಯಿಲೆಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆಗಳು ಶ್ರೀ ಮೂಕಾಂಬಿಕಾ ದೇವಿಯ ಕೋಟ್ಯಾಂತರ ಭಕ್ತರ ಮನದಲ್ಲಿ ಇದೆ. ವಾರ್ಷಿಕ ಜಾತ್ರೆಯ ತೆಪ್ಪೋತ್ಸವಕ್ಕೂ ಇದೇ ಪುಣ್ಯ ನದಿಯಲ್ಲಿ ಶ್ರೀ ದೇವಿಯ ಪಾರಂಪರಿಕ ಉತ್ಸವಾಚರಣೆಗಳು ನಡೆಯುತ್ತದೆ

ದುರಂತವೆಂದರೆ ಇತ್ತೀಚಿನ ಕೆಲ ವರ್ಷಗಳಿಂದ ಕೊಲ್ಲೂರಿನಲ್ಲಿ ತಲೆ ಎತ್ತಿರುವ ಹಾಗೂ ನಿರ್ಮಾಣವಾಗುತ್ತಿರುವ ವಸತಿ ಗ್ರಹಗಳು, ಬಹು‌ ಮಹಡಿಯ ಕಟ್ಟಡಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಅನುಪಯುಕ್ತ ದೃವ ಹಾಗೂ ಘನ ತ್ಯಾಜ್ಯಗಳು ನೇರವಾಗಿ ಪುಣ್ಯ ನದಿಯನ್ನು ಸೇರುವುದರಿಂದ ನದಿಯ ಪಾವಿತ್ರ್ಯತೆ ಹಾಳಾಗುವ ಜೊತೆಯಲ್ಲಿ ನೀರಿನಾಶ್ರಯ ಹೊಂದಿರುವ ಜಲಚರಗಳು ಹಾಗೂ ಪರಿಸರದ ಪ್ರಾಣಿ ಸಂಕುಲದ ಜೀವಕ್ಕೂ ಕುತ್ತು ತರುತ್ತಿದೆ.

ಈ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು , ಲೇಖನಗಳು ಪ್ರಕಟವಾಗಿದ್ದರೂ ಈವರೆಗೂ ಸಮಸ್ಯೆಗಳು‌ ಪರಿಹಾರ ಕಾಣದೆ ವರ್ಷದಿಂದ ವರ್ಷಕ್ಕೆ ಉದ್ಭವಿಸುತ್ತಲೆ ಇದೆ.‌ ನದಿಯ ಪಾವಿತ್ರ್ಯತೆ ಹಾಗೂ ಪರಿಸರದ ಉಳಿವಿಗಾಗಿ ಸಾಕಷ್ಟು ಸಾರ್ವಜನಿಕ ಹೋರಾಟ ನಡೆಸಿದರೂ,‌ ಅದು ಕೇವಲ ಅರಣ್ಯ ರೋಧನವಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಭಕ್ತರು, ಮಾಧ್ಯಮ ಸ್ನೇಹಿತರು ಹಾಗೂ ಪರಿಸರಾಸಕ್ತರ ಸಲಹೆ ಪಡೆದುಕೊಂಡು ಮಾಹಿತಿ ಹಕ್ಕಿನಲ್ಲಿ ಅನೇಕ ದಾಖಲೆಗಳನ್ನು ಪಡೆದುಕೊಂಡು, ನ್ಯಾಯಕ್ಕಾಗಿ ಮಾನ್ಯ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಗೆ ಸಂಬಂಧಿಸಿದ ದಾಖಲಿಕರಣವಾದ ಬಳಿಕ ಘನ ನ್ಯಾಯಾಲಯವೂ ಅರ್ಜಿಯ ವಿಚಾರಣೆಗೆ ಅಂಗೀಕಾರ ನೀಡಿದ್ದು, ಪ್ರಕರಣದ ಸಂಖ್ಯೆ 125/2024 ( ಎಸ್ ಝಡ್ ) ರಂತೆ ಘನ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆಯಲಿದೆ.

ವಿಚಾರಣೆಯ ಹಂತದಲ್ಲಿ ಕೊಲ್ಲೂರು ಪರಿಸರದಲ್ಲಿ ಅತಿಕ್ರಮವಾಗಿರುವ ಸರ್ಕಾರಿ ಹಾಗೂ ಸಾರ್ವಜನಿಕ ಭೂಮಿಗಳು ಕುರಿತು, ನಿಯಮ ಬಾಹಿರ ಕಟ್ಟಡಗಳ ಕುರಿತು, ಅಸಮರ್ಪಕ ಒಳಚರಂಡಿ ಕುರಿತು, ಪುಣ್ಯ ಕ್ಷೇತ್ರದ ಪರಿಸರಕ್ಕೆ ಧಕ್ಕೆಯಾಗುವ ಸಾರ್ವಜನಿಕ ಶೌಚಾಲಯಗಳ ಕುರಿತು ಹಾಗೂ ಇವುಗಳಿಂದ ಪರಿಸರದ ನೈರ್ಮಲ್ಯದ ಕುರಿತು ಆಗುತ್ತಿರುವ ಹಾನಿಗಳನ್ನು ಘನ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು.

ಶ್ರೀ ಮೂಕಾಂಬಿಕಾ ದೇವಿಯ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಘಾಸಿಯಾಗಿರುವ ಈ ಎಲ್ಲಾ ವಿಚಾರಗಳಿಗೆ ಘನ ನ್ಯಾಯಾಲಯದಿಂದ ನ್ಯಾಯ ದೊರಕಬಹುದು ಎನ್ನುವ ವಿಶ್ವಾಸವಿದೆ. ಶ್ರೀ ದೇವಿಯ ಭಕ್ತರ ನೆಲೆಯಲ್ಲಿ ಮುಂದಾಗಿರುವ ಈ ಕಾನೂನು ಹೋರಾಟದಲ್ಲಿ ಘನ ಕರ್ನಾಟಕ ಸರ್ಕಾರ ಸೇರಿದಂತೆ ಎಲ್ಲರ‌ ಸಹಕಾರ ಬಯಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Leave a Reply