ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಸಲಹೆ ಬೇಡ : ಕೆ. ವಿಕಾಸ್ ಹೆಗ್ಡೆ

Spread the love

ಗ್ಯಾರಂಟಿ ಯೋಜನೆ ಬಗ್ಗೆ ಬಿಜೆಪಿ ಸಲಹೆ ಬೇಡ : ಕೆ. ವಿಕಾಸ್ ಹೆಗ್ಡೆ

2018 ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಗ್ಯಾರಂಟಿಗೆ ವಾರಂಟಿ ಇಲ್ಲಾ, ವ್ಯಾಲಿಡಿಟಿ ಇಲ್ಲಾ, ಗ್ಯಾರಂಟಿ ಪುಸ್ತಕದ ಹಾಳೆ ಮದ್ಯದಲ್ಲಿ ಇರುವ ನವಿಲುಗರಿ ಎಂದು ಟೀಕಿಸಿದ ಬಿಜೆಪಿಯವರಿಂದ ಗ್ಯಾರಂಟಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ಅಗತ್ಯವಿಲ್ಲವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳುಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಾಗ ಈ ಗ್ಯಾರಂಟಿಯಿಂದ ಜನ ಸೋಮಾರಿಗಳಾಗುತ್ತಾರೆ, ಗ್ಯಾರಂಟಿಯಿಂದ ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದ ಬಿಜೆಪಿ ನಾಯಕರು ಇಂದು ಸರ್ಕಾರ ಮೂರು ವರ್ಷಗಳ ನಂತರ ಗ್ಯಾರಂಟಿ ಫಲಾನುಭವಿಗಳ ಪುನರ್ ಪರಿಶೀಲನೆಗೆ ಮರು ಅರ್ಜಿ ಸಲ್ಲಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ರಾಜಕಾರಣ ಮಾಡುವ ಬಿಜೆಪಿಯವರಿಗೆ ಈ ಗ್ಯಾರಂಟಿ ಯೋಜನೆ ನಿದ್ದೆಗೆಡಿಸಿದ್ದು ಗ್ಯಾರಂಟಿ.

ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಉದ್ದೇಶ ಸರ್ಕಾರದ ಎಲ್ಲಾ ಯೋಜನೆಗಳು ಅದರ ಜೊತೆ ಪಂಚ ಗ್ಯಾರಂಟಿಗಳೂ ಕೂಡ ಅರ್ಹ ಹಾಗೂ ನೈಜ ಫಲಾನುಭವಿಗಳಿಗೆ ದೊರೆಯಬೇಕು ಎನ್ನುವ ಉದ್ದೇಶ. ಗ್ಯಾರಂಟಿ ಯೋಜನೆ ಪ್ರಾರಂಭವಾಗಿ ಮೂರು ವರ್ಷ ಸಂದಿರುವಾಗ ಒಂದಷ್ಟು ಫಲಾನುಭವಿಗಳು ನಿಧನರಾಗಿದ್ದಾರೆ, ಗೃಹ ಜ್ಯೋತಿಗೆ ಅರ್ಹರಾದವರ ವಿದ್ಯುತ್ ಬಳಕೆ ಮಿತಿಯನ್ನು ತಿಳಿಯಲು ಇತ್ಯಾದಿಗಳ ಬಗ್ಗೆ ಮರು ಪರಿಶೀಲನೆಗೆ ಸರ್ಕಾರ ಮುಂದಾಗಿದೆ ಬಿಟ್ಟರೆ ಬೇರೆ ಯಾವುದೇ ದುರುದ್ದೇಶ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲಾ.

ಇನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳಿಗೆ ಜನಸೇವೆ ಮಾಡಲು ನೀಡಿದ ಅಧಿಕಾರ. ಇಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, ಇದರ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ. ಬಿಜೆಪಿ ನಾಯಕರು ಈ ಸಮಿತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಸರ್ಕಾರ ಇದ್ದಾಗ ತಮ್ಮನ್ನು ಅಧಿಕಾರದ ಗದ್ದುಗೆಗೆ ಏರಿಸಲು ಶ್ರಮಪಟ್ಟ ಕಾರ್ಯಕರ್ತರುಗಳಿಗೆ ನಂತರ ಏನು ಅಧಿಕಾರ ನೀಡಿದ್ದೀರಿ ಎನ್ನುವ ಬಗ್ಗೆ ಒಮ್ಮೆ ಆಲೋಚನೆ ಮಾಡುವುದು ಉತ್ತಮ ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಪ್ರಶ್ನಿಸಿದ್ದಾರೆ.


Spread the love
Subscribe
Notify of

0 Comments