ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಅವಕಾಶ ನೀಡದಂತೆ ಯುವ ಕಾಂಗ್ರೆಸ್, ಎನ್.ಎಸ್.ಯು.ಐ ಎಸ್ಪಿಗೆ ಮನವಿ
ಕುಂದಾಪುರ: ಯುವಬ್ರಿಗೇಡ್ ವತಿಯಿಂದ ಕುಂದಾಪುರದಲ್ಲಿ ಆಯೋಜಿಸಲಾಗಿರುವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಕ್ಕೆ ಅವಕಾಶ ನೀಡದಂತೆ ಕುಂದಾಪುರ ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯು ಐ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಯುವಬ್ರಿಗೇಡ್” ಎಂಬ ಸಂಸ್ಥೆಯ ವತಿಯಿಂದ ಇದೇ ತಿಂಗಳ (ಜೂನ್) 20, 21 ಮತ್ತು 22 ಒಟ್ಟು ಮೂರು ದಿನಗಳ ಕಾಲ “ಇನ್ನೀಗ ಅಖಂಡ ಭಾರತ ನಿರ್ಮಿಸಿಯೇ ವಿಶ್ರಾಂತಿ” ಎಂಬ ವಿಚಾರದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಕುಂದಾಪುರದ ಚಿಕ್ಕನ್ಸಾಲ್ ರಸ್ತೆಯ ಮೊಗವೀರ ಭವನದಲ್ಲಿ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಯು ಉಪನ್ಯಾಸ ನೀಡಲಿದ್ದಾರೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮತ್ತು ಈ ಕುರಿತಾಗಿ ಪ್ಲೆಕ್ಸ್ಗಳು ಕುಂದಾಪುರ ಪೇಟೆಯಾದ್ಯಂತ ಅಲ್ಲಲ್ಲಿ ಅಳವಡಿಸಲಾಗಿದೆ.
ಈ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿಯ ಮೇಲೆ “ದ್ವೇಷ ಭಾಷಣ ಮಾಡಿ ಹಿಂದೂ ಮುಸಲ್ಮಾನರ ನಡುವಿನ ಸೌಹಾರ್ಧತೆಯನ್ನು ಕೆಡಿಸಿದ” ಕುರಿತು ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಅವರ ಮೇಲೆ ಹಲವು ಕ್ರಿಮಿನಲ್ ಕೇಸುಗಳು ಕೂಡ ದಾಖಲಾಗಿರುವ ಕುರಿತು ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿತ್ತು.
ಕುಂದಾಪುರವು ಸೌಹಾರ್ಧತೆಗೆ ಹೆಸರಾದ ತಾಲೂಕಾಗಿದ್ದು, ಇಲ್ಲಿ ಬಹುಪಾಲು ಶಾಂತಿ ನೆಲೆಸಿದೆ. ಆದ ಕಾರಣ ಈ ಚಕ್ರವರ್ತಿ ಸೂಲಿಬೆಲೆಗೆ ಭಾಷಣ ನಡೆಸಲು ಅವಕಾಶ ಕೊಟ್ಟಲ್ಲಿ ಇಲ್ಲಿನ ಶಾಂತಿ ಸೌಹಾರ್ಧತೆ ಕೆಡುವ ಅಪಾಯ ಇದ್ದು ಅಗತ್ಯವಾಗಿ ಯಾವುದೇ ಕಾರಣಕ್ಕೂ ಅವರಿಗೆ ಕುಂದಾಪುರ ತಾಲ್ಲೂಕಿನಲ್ಲಿ ಎಲ್ಲಿಯೂ ಕೂಡ ಭಾಷಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕುಂದಾಪುರದ ನಾಗರಿಕರ ಪರವಾಗಿ ನಾವು ವಿನಂತಿಸಿಕೊಳ್ಳುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಸ್ವೀಕರಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.
ಈ ವೇಳೆ ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಫುರ್ಖಾನ್ ಯಾಸಿನ್, ಕುಂದಾಪುರ ವಿಧಾನಸಭಾ ಅಧ್ಯಕ್ಷ ಸುಜನ್ ಶೆಟ್ಟಿ, ಯುವ ಕಾಂಗ್ರೆಸ್ ಕುಂದಾಪು ಬ್ಲಾಕ್ ಸಮಿತಿ ಅಧ್ಯಕ್ಷರಾದ ಅಭಿಜಿತ್ ಪೂಜಾರಿ, ನಾಯಕರಾದ ಸ್ವಸ್ಥಿಕ್ ಶೆಟ್ಟಿ, ಸೈಯ್ಯದ್ ಅದ್ನಾನ್, ಸುಮುಖ್ ಶೇರಿಗಾರ್, ಮೊಹಮ್ಮದ್ ಅವಾಫ್, ಜೈಸನ್ ಹಾಗೂ ಇತರರು ಉಪಸ್ಥಿತರಿದ್ದರು.