ತನಿಖೆ ಆರಂಭಿಸುವ ತನಕ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ : ಯೋಗಿಶ್ ಇನ್ನಾ

Spread the love

ತನಿಖೆ ಆರಂಭಿಸುವ ತನಕ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ : ಯೋಗಿಶ್ ಇನ್ನಾ

ಕಾರ್ಕಳ: ಧೀಡಿರ್ ಬೆಳವಣಿಗೆಯೊಂದರಲ್ಲಿ ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯೋಗಿಶ್ ಆಚಾರ್ಯ ಇನ್ನಾ ಅವರು ಪರಶುರಾಮ ಥೀಮ್ ಪಾರ್ಕ್ ನ ತನಿಖೆ ಆರಂಭಿಸುವ ತನಕ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.

ಈ ಕುರಿತು ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ಪರಶುರಾಮ ಥೀಮ್ ಪಾರ್ಕ್ ಹಗರಣದ ಬಗ್ಗೆ ತನಿಖೆಯು ಪ್ರಾರಂಭವಾಗುವ ವರೆಗೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸದಿರುವಂತೆ ನಿರ್ಧಾರವನ್ನು ಮಾಡಿದ್ದೇನೆ. ನನ್ನ ನಿರ್ಧಾರವು ಕಾರ್ಕಳದ ಸಾವಿರಾರು ನಿಷ್ಟಾವಂತ ಕಾರ್ಯಕರ್ತರ ನಿರ್ಧಾರವೂ ಆಗಿದೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಅವರನ್ನು ಮ್ಯಾಂಗಲೋರಿಯನ್ ಪ್ರತಿನಿಧಿ ಮಾತನಾಡಿಸಿದ್ದು ಇದು ಕೇವಲ ನನ್ನೊಬ್ಬನ ನಿರ್ಧಾರವಲ್ಲ ಇತ್ತೀಚೆಗೆ ಕಾರ್ಕಳ ಬ್ಲಾಕ್ ಸಮಿತಿಯ ಸಭೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಕುಶಲ ಶೆಟ್ಟಿ ಅವರು ಆಗಮಿಸಿದ್ದು ಅವರು ಸೇರಿದಂತೆ ಕಾರ್ಕಳದ ನಾಯಕರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಾರ್ಕಳ ಬ್ಲಾಕ್ ಅಧ್ಯಕ್ಷರ ಸಮ್ಮುಖದಲ್ಲೇ ಎಲ್ಲಾ ಕಾರ್ಯಕರ್ತರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು ಈ ಬಗ್ಗೆ ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದರೂ ಈ ವರೆಗೆ ತನಿಖೆ ಯಾವ ಹಂತದಲ್ಲಿದೆ ಎಂಬ ಕುರಿತು ಮಾಹಿತಿ ಇಲ್ಲ. ಇದೇ ರೀತಿಯಾದರೆ ನಮ್ಮ ಹೋರಾಟಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ ಆದ್ದರಿಂದ ತನಿಖೆ ಆರಂಭಿಸುವ ತನಕ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ತನ್ನನ್ನು ಸೇರಿಕೊಂಡು ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತರು ದೂರ ಉಳಿಯಲಿದ್ದಾರೆ ಎಂದು ಅವರು ತಿಳಿಸಿದರು.


Spread the love