ಬಿಜೆಪಿ, ಹಿಂದೂ ಸಂಘಟನೆಗಳಿಂದ ನೀಲಾವರ ಗೋಶಾಲೆಗೆ ಗೋಗ್ರಾಸ ಸಮರ್ಪಣೆ

Spread the love

ಬಿಜೆಪಿ, ಹಿಂದೂ ಸಂಘಟನೆಗಳಿಂದ ನೀಲಾವರ ಗೋಶಾಲೆಗೆ ಗೋಗ್ರಾಸ ಸಮರ್ಪಣೆ

ಶಿರ್ವ:- ಬೆಳ್ಳೆ ಗ್ರಾಮಪಂಚಾಯತ್ ವ್ಯಾಪ್ತಿಯ ಬಿಜೆಪಿ ಸ್ಥಾನೀಯ ಸಮಿತಿ, ವಿಶ್ವಹಿಂದು ಪರಿಷದ್,ಭಜರಂಗದಳ ಘಟಕದ ವತಿಯಿಂದ ಶ್ರಮಾದಾನದ ಮೂಲಕ ನಾಟಿ ಮಾಡಿದ ಬೆಳ್ಳೆ ಕಂಬ್ಲಗದ್ದೆಯಲ್ಲಿ ಉತ್ತಮ ಫಸಲು ಬಂದಿದ್ದು, ಬುಧವಾರ ಘಟಕದ ಕಾರ್ಯಕರ್ತರು,ಊರಿನ ಅಬಾಲವೃದ್ದರೂ ಸೇರಿದಂತೆ ಜಾತಿಮತದ ಭೇದವಿಲ್ಲದೆ ಸಾಮೂಹಿಕವಾಗಿ ತುಂತುರು ಮಳೆಯ ನಡುವೆಯೂ ಕಟಾವು ಮಾಡಿ, ಬೈಹುಲ್ಲಿನಿಂದ ಭತ್ತ ಬೇರ್ಪಸಿ ನೀಲಾವರ ಗೋಶಾಲೆಗೆ ಎರಡು ಲೋಡ್ ಬೈಹುಲ್ಲು,40ಕ್ವಿಂಟಲ್ ಭತ್ತವನ್ನು ಉಡುಪಿ ಪರ್ಯಾಯ ಶ್ರೀಪೇಜಾವರ ಮಠದ ಕಿರಿಯ ಯತಿ ಹಾಗೂ ನೀಲಾವರ ಗೋಶಾಲೆಯ ಪ್ರವರ್ತಕರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಗೋಗ್ರಾಸ ಸಮರ್ಪಣೆ ಮಾಡಿ ಕೃತಾರ್ಥರಾದರು.

13-gograasa 13-gograsa-1 g-3

ಊರಿನ ಯುವಕರ ಹಾಗೂ ಮಹಿಳೆಯರ ಈ ಸ್ತ್ಯುತ್ಯಕಾರ್ಯವನ್ನು ವೀಕ್ಷಿಸಿ, ಮುಕ್ತಕಂಠದಿಂದ ಶ್ಲಾಘಿಸಿ ಆಶೀರ್ವಚನ ನೀಡಿದ ಯತಿಗಳು, ನೀಲಾವರ ಗೋಶಾಲೆಯಲ್ಲಿ ಸಾವಿರಕ್ಕೂ ಅಧಿಕ ಗೋವುಗಳಿದ್ದು,ಅವುಗಳಿಗೆ ಗೋಗ್ರಾಸ ನೀಡಿ ಕಾಮಧೇನುವಿನ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ. ಗೋವಿನ ರಕ್ಷಣೆ ಪ್ರತೀಯೊಬ್ಬರ ಕರ್ತವ್ಯವಾಗಿದ್ದು, ಅವುಗಳಿಗೆ ಆಹಾರ ನೀಡುವುದು ಜೀವನದ ಅತ್ಯಂತ ಪುಣ್ಯದ ಕಾರ್ಯ ಎಂದರು. ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಪ್ರತೀಯೊಂದು ಊರಿನಲ್ಲಿಯೂ ಊರಿನ ನಾಗರಿಕರು ಸಂಘಟಿತರಾಗಿ ಇಂತಹ ಉತ್ತಮ ಕಾರ್ಯವನ್ನು ನೆರವೇರಿಸಲು ಇಲ್ಲಿನ ಸಾರ್ವಜನಿಕರ ಸೇವಾ ಕಾರ್ಯ ಪ್ರೇರಣೆ ನೀಡಲಿ ಎಂದು ಹಾರೈಸಿದರು.

ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ಸುಧಾಕರ ಪೂಜಾರಿ,ಗ್ರಾಮ ಪಂಚಾಯತ್ ಸದಸ್ಯರಾದ ಗುರುರಾಜ್ ಭಟ್,ವಿಶ್ವಹಿಂದು ಪರಿಷದ್ ಅಧ್ಯಕ್ಷ ಜಯ ಸೇರಿಗಾರ್,ಭಜರಂಗದಳದ ಸಂಚಾಲಕ ತಿಲಕ್‍ರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜೆರಾಲ್ಡ್ ಫೆರ್ನಾಂಡಿಸ್, ತಾ.ಪಂ. ಮಾಜಿ ಅಧ್ಯಕ್ಷ ದೇವದಾಸ ಹೆಬ್ಬಾರ್, ಮಣಿಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕರುಣಾಕರ ಕರ್ಕೆರಾ, ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದೇವದಾಸ್ ನಾಯಕ್,ಉಡುಪಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮೀ,ದೀಪಕ್ ಮೂಡುಬೆಳ್ಳೆ ಸಚಿನ್ ಬೆಳ್ಳೆ, ಕೃಷ್ಣ ಆಚಾರ್ಯ, ವಿನೋದ್ ಕಸ್ತಲಿನೊ, ಪರಶುರಾಮ ಭಟ್, ಐವನ್ ದಲ್ಮೇದಾ,ಹರೀಶ್ ನಾಯಕ್, ಸ್ಥಳದಾನಿ ಮೇಲ್ಮನೆ ವಸಂತ ಶೆಟ್ಟಿ, ವಿವಿಧ ಸಂಗಟನೆಗಳ ಪದಾಧಿಕಾರಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗದ್ದೆಯ ರಕ್ಷಕ ಕಂಬ್ಳತೋಟ ಪೋಂಕ್ರಣ್ಣರನ್ನು ಶ್ರೀವಿಶ್ವಪ್ರಸನ್ನತೀರ್ಥರು ಶಾಲು ಹೊದಿಸಿ ಫಲಮಂತ್ರಾಕ್ಷತೆ ನೀಡಿ ಹರಸಿದರು. ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.


Spread the love