ಮೀನುಗಾರಿಕೆಯಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ : ಕೋಟ ಶ್ರೀನಿವಾಸ ಪೂಜಾರಿ

Spread the love

ಮೀನುಗಾರಿಕೆಯಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ : ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮೀನುಗಾರಿಕೆಯಲ್ಲಿ 3ನೇ ಸ್ಥಾನದಲ್ಲಿದೆ, ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ಅದನ್ನು ಪ್ರಥಮ ಸ್ಥಾನಕ್ಕೇರಿಸುವ ಗುರಿ ಇದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜುಲೈ 8 ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮತ್ತು ಹಂಗಾರಕಟ್ಟೆ- ಕೋಡಿಬೆಂಗ್ರೆ ಯಾಂತ್ರಿಕೃತ ಮೀನುಗಾರರ ಸಂಘದ ಆಶ್ರಯದಲ್ಲಿ ನಡೆದ ಬೋಟ್ ಮಾಲಕರಿಗೆ ಪಡಿತರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನ ಹೊಡೆತದಿಂದ ಪರವೂರಿನಲ್ಲಿರುವ ಸಾವಿರಾರು ಮಂದಿ ಮೀನುಗಾರರು ಉದ್ಯೋಗವಿಲ್ಲದೆ ಹುಟ್ಟೂರಿನ ಕಡೆಗೆ ಆಗಮಿಸುತ್ತಿದ್ದಾರೆ. ಇಂತವರಿಗೆ ಪರ್ಯಾಯ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಪಂಜರ ಮೀನು ಸಾಕಾಣಿಕೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ಇಲಾಖೆಯ ಮುಂದಿದ್ದು ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಹಾಗೂ ಜನವರಿಯಿಂದ ಮಾರ್ಚ್ವರೆಗಿನ ಮೀನುಗಾರಿಕೆ ಡಿಸೇಲ್ ಸಬ್ಸಿಡಿ ಬಿಡುಗಡೆಗೊಂಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ ಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಮಾತನಾಡಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆಡಳಿತಾವಧಿಯಲ್ಲಿ ಮೀನುಗಾರಿಕೆ ಮತ್ತು ಬಂದರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಹಾಗೂ ಹಲವಾರು ಉತ್ತಮ ಯೋಜನೆಗಳು ಅವರಲ್ಲಿದೆ ಎಂದರು.

ಈ ಸಂದರ್ಭದಲ್ಲಿ 45ಕ್ಕೂ ಮಿಕ್ಕಿ ಬೋಟ್ ಮಾಲಿಕರಿಗೆ ಪಡಿತರ ಕಿಟ್ ವಿತರಿಸಲಾಯಿತು, ಯಾಂತ್ರಿಕೃತ ಮೀನುಗಾರರ ಸಂಘದ ಅಧ್ಯಕ್ಷರಾದ   ಬಿ ಬಿ ಕಾಂಚನ್, ಮಲ್ಪೆ ಯಾಂತ್ರಿಕೃತ ಮೀನುಗಾರರ ಸಂಘದ ಅಧ್ಯಕ್ಷರಾದ   ರಾಮ ಚಂದ್ರ ಕುಂದರ್, ಫೆಡರೇಷನ್ ನಿರ್ದೇಶಕರಾದ ಸುರೇಶ್ ಸಾಲ್ಯಾನ್, ಸುಧಾಕರ ಹಾಗೂ ಐರೋಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಬೇಬಿ ಸಾಲ್ಯಾನ್ ಉಪಸ್ಥಿತರಿದ್ದರು. ಯತೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಕೋಡಿಬೆಂಗ್ರ್ರೆ ಮೀನುಗಾರಿಕೆ ಜೆಟ್ಟಿಯ ಅಳಿವೆಯಲ್ಲಿ ಹೂಳು ಶೇಖರಣೆಯಾಗಿದ್ದು ಬೋಟ್ಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಇದನ್ನು ತೆರವುಗೊಳಿಸಲು ತಗಲುವ ಮೊತ್ತದ ಅಂದಾಜು ಪಟ್ಟಿಯನ್ನು ಈಗಾಗಲೇ ರವಾನಿಸಿದ್ದು ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಸಚಿವರಿಗೆ ಯಶ್ಪಾಲ್ ಸುವರ್ಣ ಹಾಗೂ ಬಿ ಬಿ ಕಾಂಚನ್ ಮನವಿ ಮಾಡಿದರು.


Spread the love