ಮ0ಗಳೂರು : ಮಾಲಿನ್ಯ ನಿಯಂತ್ರಣಕ್ಕೆ ಆಧುನಿಕ ಉಪಕರಣಗಳ ಬಳಕೆ- ಶಾಸಕ ಬಾವಾ ಸೂಚನೆ

Spread the love

ಮ0ಗಳೂರು : ಸುರತ್ಕಲ್, ಬೈಕಂಪಾಡಿ, ನವಮಂಗಳೂರು ವ್ಯಾಪ್ತಿ ಸೇರಿದಂತೆ ಕೈಗಾರಿಕೆಗಳಿಂದ ಮಾಲಿನ್ಯ ಸಂಭವಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ 2 ತಿಂಗಳೊಳಗೆ ವರದಿ ನೀಡುವಂತೆ ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಗುರುವಾರ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಭಾಂಗಣದಲ್ಲಿ ಉದ್ದಿಮೆಗಳಲ್ಲಿ ಮಾಲಿನ್ಯ ನಿಯಂತ್ರಣ-ಪರಿಸರ ಜಾಗೃತಿ ಮೂಡಿಸುವ ಸಂಬಂಧ ನಡೆದ ಸಭೆಯನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸುರತ್ಕಲ್ ಸುತ್ತಮುತ್ತಲಿನ ಪರಿಸರದಲ್ಲಿ ನೀರು, ವಾಯು ಮಾಲಿನ್ಯದ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿವೆ. ಹಲವಾರು ಕೈಗಾರಿಕೆಗಳು ಮಾಲಿನ್ಯ ನಿಯಂತ್ರಕ ಕ್ರಮಗಳನ್ನು ಅಳವಡಿಸಿರುವ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಿವೆ. ಹೀಗಿದ್ದೂ, ಮಾಲಿನ್ಯದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸುವಂತೆ ಆಸಕರು ತಿಳಿಸಿದರು.
ಉದ್ದಿಮೆಗಳು ನಾಗರೀಕರಿಗೆ ಪೂರಕವಾಗಿ ಕಾರ್ಯಾಚರಿಸಬೇಕು. ಮಾಲಿನ್ಯ ನಿಯಂತ್ರಣಕ್ಕೆ ಇಂದು ಅತ್ಯಾಧುನಿಕ ಉಪಕರಣಗಳು ಲಭ್ಯವಿದೆ. ಅನೇಕ ಬೃಹತ್ ಕೈಗಾರಿಕಗೆಳು ಇವುಗಳನ್ನು ಅಳವಡಿಸಿಕೊಂಡಿವೆ. ಇದಲ್ಲದೇ, ಮಾಲಿನ್ಯ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ಬೃಹತ್ ಕೈಗಾರಿಕಗಳು ಒಪ್ಪಿಕೊಂಡಿದ್ದಾರೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದರು.
ಕೈಗಾರಿಕೆಗಳು ತಮ್ಮ ನೇಮಕಾತಿಯಲ್ಲಿ ಸ್ಥಳೀಯರಿಕೆ ಹೆಚ್ಚು ಆದ್ಯತೆ ನೀಡಬೇಕು. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯಡಿ ನೆರವು ನೀಡುವಾಗ ತಮ್ಮ ಉದ್ದಿಮೆಯ ಪರಿಸರದ, ಸುತ್ತಮುತ್ತಲ ಪ್ರದೇಶಗಳಿಗೆ ಆದ್ಯತೆ ನೀಡಬೇಕು. ಸ್ಥಳೀಯ ಪಾರ್ಕ್, ಶಾಲೆಗಳ ಅಭಿವೃದ್ಧಿಗೆ ಒತ್ತುನೀಡಬೇಕು. ಕೈಗಾರಿಕೆಗಳಿಗೆ ಭೂಮಿ ಬಿಟ್ಟುಕೊಟ್ಟ ನಿರ್ವಸಿತರ ಕಾಲನಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಶಾಸಕರು ತಿಳಿಸಿದರು.
ಸುರತ್ಕಲ್-ಎಂಆರ್‍ಪಿಎಲ್ ರಸ್ತೆಯ ಅಬಿವೃದ್ಧಿಗೆ ಎಂಆರ್‍ಪಿಎಲ್ ಸಂಸ್ಥೆಯು ತಾತ್ವಿಕವಾಗಿ ಒಪ್ಪಿಕೊಂಡಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಭೂಗತ ಒಳಚರಂಡಿ ಯುಜಿಡಿ ವ್ಯವಸ್ಥೆಗೆ ಬದ್ಧರಾಗಿದ್ದು, ಮಹಾನಗರಪಲಿಕೆಯ ಎಡಿಬಿ 2ನೇ ಹಂತದಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು. ಇದಲ್ಲದೇ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಹಾನಿಕಾರಕವಲ್ಲದ ತ್ಯಾಜ್ಯಗಳ ವಿಲೇವಾರಿಗೆ 25 ಎಕರೆ ಜಮೀನಿನ ಅಗತ್ಯವಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಜೋಕಟ್ಟೆ-ವಿಮಾನನಿಲ್ದಾಣ ನೇರರಸ್ತೆ ನಿರ್ಮಾಣಕ್ಕೆ ಇರುವ ಕಾನೂನಿನ ತೊಡಕು ನಿವಾರಿಸಲು ಶ್ರಮಿಸುವುದಾಗಿ ಶಾಸಕರು ತಿಳಿಸಿದರು. ಕೈಗಾರಿಕಗೆಳು, ಉದ್ದಿಮೆಗಳ ಯಾವುದೇ ಸಮಸ್ಯೆ ಪರಿಹಾರಕ್ಕೆ ತಾನು ಸಿರ್ದಧನಿರುವುದಾಗಿ ಅವರು ಹೇಳಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಮಾತನಾಡಿ, ಪರಿಸರ ಮಾಲಿನ್ಯದ ಬಗ್ಗೆ ನಿಗಾ ವಹಿಸಲು ಈಗಾಗಲೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟಟ್ದ ಸಮಿತಿ ರಚಿಸಲಾಗಿದೆ. ಜಿಲ್ಲೆಯಲ್ಲಿ 16 ಮೀನಿನ ಎಣ್ಣೆ ತಯಾರಿಸುವ ಕಾರ್ಖಾನೆಗಳಿದ್ದು, ಹೆಚ್ಚಿನ ಕಾರ್ಖಾನೆಗಳು ಮಾಲಿನ್ಯ ನಿಯಂತ್ರಕ ಸಾಧಕಗಳನ್ನು ಅಳವಡಿಸಿದೆ. ಮುಂದಿನ ಮಾರ್ಚ್ ಒಳಗೆ ಎಲ್ಲಾ ಮೀನಿನೆಣ್ಣೆ ಕರ್ಖಾನೆಗಳು ಇದನ್ನು ನಿಯಂತ್ರಿಸುವ ಬದ್ಧತೆ ವ್ಯಕ್ತಪಡಿಸಿದ್ದಾರೆ. ನವಮಂಗಳೂರು ಬಂದರಿನಲ್ಲಿ ಕಲ್ಲಿದ್ದಲು ಸಾಗಾಟ, ನಿರ್ವಹಣೆ ಸಂದರ್ಭದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಮುಂದಿನ ಒಂದೂವರೆ ವರ್ಷದೊಳಗೆ ಯಾಂತ್ರೀಕೃತವಾಗಿ ಕಲ್ಲಿದ್ದಲ್ಲು ನಿರ್ವಹಿಸುವುದಾಗಿ ಎನ್‍ಎಂಪಿಟಿಯು ತಿಳಿಸಿದೆ ಎಂದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಲಕ್ಷಣ್, ಜಯಪ್ರಕಾಶ್ ನಾಯಕ್, ಎನ್‍ಎಂಪಿಟಿ, ಎಂಆರ್‍ಪಿಎಲ್, ಸೇರಿದಂತೆ ವಿವಿಧ ಕೈಗಾರಿಕೆ, ಉದ್ದಿಮೆ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love