ವಾಹನ ಸವಾರರು ಮೂಲ ದಾಖಲೆಯನ್ನು ಇಟ್ಟುಕೊಳ್ಳಿ; ನಕಲಿ ಪ್ರತಿ ಪರಿಗಣಿಸಲಾಗುವುದಿಲ್ಲ – ಡಾ|ಹರ್ಷಾ

Spread the love

ವಾಹನ ಸವಾರರು ಮೂಲ ದಾಖಲೆಯನ್ನು ಇಟ್ಟುಕೊಳ್ಳಿ; ನಕಲಿ ಪ್ರತಿ ಪರಿಗಣಿಸಲಾಗುವುದಿಲ್ಲ – ಡಾ|ಹರ್ಷಾ

ಮಂಗಳೂರು: ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು ಪ್ರತಿಯೊಬ್ಬ ವಾಹನ ಸವಾರರು ವಾಹನದ ಮೂಲ ದಾಖಲೆಯನ್ನೇ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಕಲಿ ಪ್ರತಿಗಳನ್ನು ತಪಾಸಣೆ ವೇಳೆ ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ನಗರ ಪೋಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷಾ ಹೇಳಿದರು.

ನಗರದ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ನಾಗರಿಕರೊಬ್ಬರ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

ನಗರದ ನಾಗರಿಕರೊಬ್ಬರು ಕರೆ ಮಾಡಿ ಟ್ರಾಫಿಪೋಲೀಸರು, ಅಧಿಕಾರಿಗಳು ವಾಹನ ತಪಾಸಣೆ ವೇಳೆ ವಾಹನದ ಮೂಲ ದಾಖಲೆಗಳನ್ನೇ ಕೇಳುತ್ತಿದ್ದಾರೆ. ನಕಲಿ ಪ್ರತಿಗಳನ್ನು ನೀಡಿದರೂ ಪರಿಗಣಿಸದೆ ದಂಡ ವಿಧಿಸುತ್ತಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಮೂಲ ದಾಖಲೆ ಹಾಜರುಪಡಿಸಲು ಸಮಯ ನೀಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಪೋಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷಾ ತಿದ್ದುಪಡಿ ಕಾಯ್ದೆ ಪ್ರಕಾರ ತಪಾಸಣೆ ವೇಳೆ ಮೂಲ ದಾಖಲೆಯನ್ನೇ ನೀಡಬೇಕು. ನಕಲಿ ಪ್ರತಿಗಳನ್ನು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದರು.

ಪಡೀಲ್ ನಿವಾಸಿಯೊಬ್ಬರು ಕರೆ ಮಾಡಿ, ಸ್ಟೇಟ್ಬ್ಯಾಂಕ್ನಿಂದ ಬಿಕರ್ನಕಟ್ಟೆ ಮುಖೇನ ಪಡೀಲ್ಗೆ ಹೋಗುವ ಬಸ್ಗಳು ಸಮಯ ಪರಿಪಾಲನೆ ಮಾಡುತ್ತಿಲ್ಲ. ರಾತ್ರಿ 8.30ರ ಬಳಿಕ ಬಸ್ ಸಂಚಾರವೇ ಇಲ್ಲ ಎಂದು ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಮಿಷನರ್ ಹೇಳಿದರು.

ನಗರದಲ್ಲಿ ಬಸ್ಗಳ ಮೆಟ್ಟಿಲುಗಳು ಎತ್ತರವಾಗಿದ್ದು ಇದರಿಂದ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದರು. ಇದಕ್ಕೆ ಬಸ್ ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ ಸಾರಿಗೆ ನಿಯಮ ಪ್ರಕಾರವೇ ಬಸ್ಗಳ ಮೆಟ್ಟಿಲು ಎತ್ತರಿಸಲಾಗಿದೆ ಎಂದರು.

ಜಯಂತ್ ನಂತೂರು ಎಂಬವರು ಕರೆ ಮಾಡಿ ನಗರದ ಹಲವೆಡೆ ಸರ್ವಿಸ್ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ತೊಂದರೆಯಾಗುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ಕಮಿಷನರ್ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು.

ಕಿಶೋರ್ ಕೊಡಿಯಾಲ್ಗುತ್ತು ಕರೆ ಮಾಡಿ `ಮೈ ಬೀಟ್ ಮೈ ಪ್ರೈಡ್’ ಗ್ರೂಪ್ಗಳಲ್ಲಿ ಸಾಮಾನ್ಯ ಸಂದೇಶ ಹರಿದಾಡುವ ಬದಲು ಜನರಲ್ಲಿ ಜಾಗೃತಿ ಮೂಡಿಸುದ ಸಂದೇಶ ಹಾಕಬೇಕು. ಶಾಂತಿ ಕದಡುವ ಸಂದೇಶ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ನಗರದಲ್ಲಿ `ಮೈ ಬೀಟ್ ಮೈ ಪ್ರೈಡ್’ ಗ್ರೂಪ್ನಲ್ಲಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ 48ಸಾವಿರ ಮಂದಿ ಸದಸ್ಯರಾಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀಟ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.

ಕೊಟ್ಟಾರ ಚೌಕಿ ಸುನೀಲ್ ಎಂಬವರು ಕರೆ ಮಾಡಿ, ಫ್ಲೈಓವರ್ ಕೆಳಗಡೆ ವಾಹನ ಪಾರ್ಕಿಂಗ್ಗೆ ಅವಕಾಶ ನೀಡುತ್ತಿಲ್ಲ ಎಂದರು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್ ಕೊಟ್ಟಾರ ಫ್ಲೈಓವರ್ ಕೆಳಗಡೆ ರಾಮಕೃಷ್ಣ ಮಿಷನ್ ವತಿಯಿಂದ ಇಂಟರ್ಲಾಕ್ ಹಾಕಿ ಸೌಂದರೀಕರಣ ಮಾಡಲಾಗಿದ್ದು ಪಾರ್ಕಿಂಗ್ಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡಲಾಗುವುದು ಎಂದರು.

ಮಂಗಳೂರು ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೋಲೀಸ್ ಆಯುಕ್ತ ಅರುಣಾಂಶುಗಿರಿ, ಸಂಚಾರ ಮತ್ತು ಅಪರಾಧ ವಿಭಾಗ ಉಪಪೋಲೀಸ್ ಆಯುಕ್ತ ಲಕ್ಷ್ಮೀಗಣೇಶ್, ಸಂಚಾರ ವಿಭಾಗದ ಸಹಾಯಕ ಪೋಲೀಸ್ ಆಯುಕ್ತ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಗೋಪಾಲಕೃಷ್ಣ ಭಟ್, ಸಬ್ಇನ್ಸ್ಪೆಕ್ಟರ್ ಸುಗುಮಾರನ್, ಸಿಸಿಆರ್ಬಿ ಇನ್ಸ್ಪೆಕ್ಟರ್ ಭಜಂತ್ರಿ, ಎಎಸ್ಐ ಬಾಲಕೃಷ್ಣ, ಹೆಡ್ಕಾನ್ಸ್ಟೇಬಲ್ ಪುರುಷೋತ್ತಮ ಉಪಸ್ಥಿತರಿದ್ದರು.


Spread the love

1 Comment

  1. Please issue original documents 3 set’s so we can carry 1 set along with us my dear officer

Comments are closed.