ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು: ಮಂಜುನಾಥ ಭಂಡಾರಿ

Spread the love

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು: ಮಂಜುನಾಥ ಭಂಡಾರಿ

ಮಂಗಳೂರು: ದೇಶದ ಪ್ರಧಾನಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ನರೇಂದ್ರ ಮೋದಿಯವರು ವಿದೇಶಕ್ಕೆ ಪ್ರವಾಸ ಹೋಗಬೇಡಿ, ಚಿನ್ನ ಖರೀದಿಸಬೇಡಿ, ವಾಹನಗಳಲ್ಲಿ ನಿಯಮಿತವಾಗಿ ಓಡಾಡಿ ಎಂದು ಹೇಳಿಕೆ ನೀಡಿರುವುದು ಬಾಲಿಶತನದ್ದು. ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಟೀಕಿಸಿದ್ದಾರೆ.

ದೇಶದಲ್ಲಿ ವಾಣಿಜ್ಯ ಗ್ಯಾಸ್ ಬೆಲೆ ಭಾರೀ ಏರಿಕೆಯಾಗಿದೆ. ಉದ್ಯಮ ವಲಯವೂ ದರ ಏರಿಕೆಯಿಂದ ಕಂಗಾಲಾಗಿದೆ. ರಸಗೊಬ್ಬರ ಕೊರತೆಯ ಮುನ್ಸೂಚನೆ ಸಿಕ್ಕಿದೆ. ಇಂತಹ ಸಂದರ್ಭ ಪ್ರಧಾನಿಯವರು ಈ ರೀತಿ ಹೇಳಿಕೆ ನೀಡಿರುವುದು ಜನರನ್ನು, ಉದ್ಯಮ ವಲಯವನ್ನು ಮತ್ತಷ್ಟು ಸಂಕಷ್ಟ ವಲಯಕ್ಕೆ ದೂಡಿದಂತಾಗಿದೆ ಎಂದರು.

ಚಿನ್ನ ದರ ಏರಿಕೆಯಿಂದ ವ್ಯವಹಾರಕ್ಕೆ ಹೊಡೆತ ಬಿದ್ದು ಸ್ವರ್ಣೋದ್ಯಮ ಕಂಗಾಲಾಗಿದೆ. ಖಾದ್ಯ ಎಣ್ಣೆಗಳ ದರವೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವಲ್ಲಿ ದೇಶದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸರಕಾರ ವಿಫಲವಾಗಿದೆ. ಸರಕಾರಿ ವೆಚ್ಚದಲ್ಲಿ ಪದೇ ಪದೇ ವಿದೇಶ ಪ್ರವಾಸ ಮಾಡಿ ಸುದ್ದಿಯಲ್ಲಿರುವ ಮೋದಿ ದೇಶದ ಜನರನ್ನು ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇದು ಕೇಂದ್ರದ ಮೋದಿ ಸರಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಜಾಗತಿಕ ತಲ್ಲಣ, ಆರ್ಥಿಕ ವ್ಯವಸ್ಥೆಯಲ್ಲಿ ಏರು-ಪೇರಾದಾಗ ದೇಶದ ಜನರಲ್ಲಿ ಭರವಸೆ ಮಾತುಗಳಿಂದ ಸ್ಥೈರ್ಯ ತುಂಬುವುದು ಕೇಂದ್ರ ಸರಕಾರದ ಜವಾಬ್ದಾರಿ. ಅದನ್ನು ಹೊರತು ಈ ರೀತಿ ಜನರಲ್ಲಿ ಗೊಂದಲ, ಆತಂಕವನ್ನು ಸೃಷ್ಟಿ ಮಾಡುವುದು ಸರಿಯಲ್ಲ. ದರ ಏರಿಕೆಯಿಂದ ಈಗಾಗಲೇ ಸ್ವರ್ಣೋದ್ಯಮ ನಷ್ಟದಲ್ಲಿದ್ದು, ಪ್ರಧಾನಿ ಹೇಳಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಲಿದೆ ಎಂದರು.


Spread the love
Subscribe
Notify of

0 Comments
Inline Feedbacks
View all comments