ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಅಭಿವೃದ್ಧಿ ವಿಚಾರ ಬಿಟ್ಟು ಶಿಷ್ಟಾಚಾರದ ಕುರಿತು ಚರ್ಚೆ ಸರಿಯಲ್ಲ ಜೆ.ಪಿ. ಹೆಗ್ಡೆ
ಕುಂದಾಪುರ: ಅಭಿವೃದ್ಧಿ ಕುರಿತಾದ ಚರ್ಚೆ ನಡೆಯಬೇಕಾದ ಜಿಲ್ಲಾ ಮಟ್ಟದ ಕೆಡಿಪಿ ಸಭೆಗಳಲ್ಲಿ ಶಿಷ್ಟಾಚಾರದ ಕುರಿತು ಚರ್ಚೆ ಮಾಡೋದು ಸರಿಯಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುವ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ)ಯಲ್ಲಿ ಇಲಾಖಾವಾರು ಚರ್ಚೆ ಮಾಡಲು ಸಾಕಷ್ಟು ವಿಚಾರಗಳಿರುತ್ತದೆ. ಈ ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಯ ಜಿಲ್ಲಾ ವ್ಯಾಪ್ತಿಯ ಸಮಸ್ಯೆ ಹಾಗೂ ಪ್ರಗತಿಯ ಬಗ್ಗೆ ಚರ್ಚೆ, ಸಮಾಲೋಚನೆ, ಪರಿಶೀಲನೆ, ಸಲಹೆ ಹಾಗೂ ತೀರ್ಮಾನಗಳು ನಡೆಯಬೇಕು ಎನ್ನುವ ನಿರ್ದಿಷ್ಟ ಕಾರ್ಯಸೂಚಿಗಳಿರುತ್ತದೆ. ಅಮೂಲ್ಯವಾದ ಈ ಸಭೆಯಲ್ಲಿ ಕೇವಲ ಅಭಿವೃದ್ಧಿ ಹಾಗೂ ಜನಪರ ವಿಚಾರಗಳ ಕುರಿತು ಮಾತ್ರ ಚರ್ಚೆಗಳು ನಡೆಯಬೇಕು.
ಜನಪ್ರತಿನಿಧಿಗಳು ಶಿಷ್ಟಾಚಾರ ಅಪೇಕ್ಷೆ ಮಾಡೋದು ಹಾಗೂ ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡದೇ ಇದ್ದಾಗ ಆಕ್ಷೇಪ ದಾಖಲಿಸುವುದು ತಪ್ಪಲ್ಲ. ಆದರೆ ಇದಕ್ಕಾಗಿ ನಿರ್ದಿಷ್ಟ ಕಾರ್ಯಸೂಚಿಯಂತೆ ನಡೆಯಬೇಕಾದ ಈ ಸಭೆಗಳನ್ನು ಬಳಕೆ ಮಾಡಿಕೋಳ್ಳೋದು ಮಾತ್ರ ಸರಿಯಲ್ಲ
ಜನಪ್ರತಿನಿಧಿಗಳ ಗೌರವಕ್ಕೆ ಚ್ಯುತಿಯಾದಾಗ ಜಿಲ್ಲಾಧಿಕಾರಿಗಳೊಂದಿಗೆ ಕೂತು ಮಾತನಾಡಿ ಪರಿಹಾರ ಕಂಡುಕೊಳ್ಳೋದು ಸೂಕ್ತ. ಶಾಸಕರ ಹಕ್ಕುಗಳಿಗೆ ಚ್ಯುತಿ ಬಂದಾಗ ವಿಧಾನಸಭೆಯಲ್ಲಿ ಚರ್ಚೆ ಮಾಡಬೇಕು. ಕೆಡಿಪಿಯಂತಹ ಜನಪರ ಹಾಗೂ ಅಭಿವೃದ್ಧಿ ಪರ ಚರ್ಚೆ ನಡೆಯಬೇಕಾದ ಸಭೆಗಳು, ಈ ರೀತಿಯ ಅನಗತ್ಯ ಚರ್ಚೆಗಳಿಗೆ ವೇದಿಕೆಯಾಗಬಾರದು.
ಶಿಷ್ಟಾಚಾರ ಉಲ್ಲಂಘನೆ ವಿಚಾರ ಕೇವಲ ಅಧಿಕಾರಿಗಳಿಗೆ ಸೀಮಿತವಾಗದೆ, ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಮಂತ್ರಣ ಪತ್ರಿಕೆಗಳನ್ನೇ ಮುದ್ರಿಸದೆ, ಖಾಸಗಿ ಕಾರ್ಯಕ್ರಮದಂತೆ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವ ಔಚಿತ್ಯವಾದರೂ ಏನು ? ತಾವೇ ಈ ರೀತಿಯ ತಪ್ಪುಗಳನ್ನು ಮಾಡುತ್ತಿರುವಾಗ ಬೇರೆಯವರ ಮೇಲೆ ಗೂಬೆ ಕೂರಿಸೋದು ಸರಿಯಲ್ಲ ಎಂದು ಹೆಗ್ಡೆ ತಿಳಿಸಿದ್ದಾರೆ













